ಕದಂಬ ನೌಕಾನೆಲೆ ಸಿಬ್ಬಂದಿ ಜೊತೆ ರಕ್ಷಣಾ ಸಚಿವ ರಾಜನಾಥ್ ಆತ್ಮೀಯ ಮಾತುಕತೆ
ಕಾರವಾರ, ಮೇ 26: ದೇಶದ ಸ್ವಾಭಿಮಾನ ರಕ್ಷಿಸುವಲ್ಲಿ ಸೈನಿಕರ ಪಾತ್ರ ದೊಡ್ಡದಾಗಿದ್ದು, ಈ ಕೊಡುಗೆಯಿಂದ ದೇಶವು ಪ್ರಬಲ ರಾಷ್ಟ್ರವಾಗಿ ಹೊರ ಹೊಮ್ಮುತ್ತಿದೆ ಎಂದು ದೇಶದ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು. ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಗೆ ಎರಡು ದಿನಗಳ ಭೇಟಿಗೆ ಗುರುವಾರ ಆಗಮಿಸಿರುವ ಅವರ ನೌಕಾನೆಲೆ ಸಿಬ್ಬಂದಿ ಹಾಗೂ ಕುಟುಂಬದ ಜೊತೆ ಮಾತನಾಡಿದರು.
''ದೇಶಕ್ಕಾಗಿ ತ್ಯಾಗ ಮಾಡುವ ಸೈನಿಕರನ್ನು ಸದಾ ಗೌರವಿಸಬೇಕು. ಅಲ್ಲದೆ ಇಂದು ಭಾರತ ಜಗತ್ತಿನ ಪ್ರಭಾವಶಾಲಿ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತಕ್ಕೆ ಜಗತ್ತಿನಲ್ಲಿ ಎಲ್ಲರಿಗಿಂತಲೂ ಹೆಚ್ಚು ಗೌರವ ಸಿಗುತ್ತದೆ. ಅಮೇರಿಕಾದ ನೌಕಾಪಡೆ ಕೂಡ ಭಾರತೀಯ ನೌಕಾಪಡೆಯೊಂದಿಗೆ ಸಹಯೋಗ ಹೊಂದಲು ಉತ್ಸುಕವಾಗಿದೆ,'' ಎಂದು ಹೇಳಿದರು.
ರಾಜಮನೆತನದ ಹೆಸರು: ಈ ನೌಕಾನೆಲೆಗೆ ಕದಂಬ ರಾಜಮನೆತನದ ಹೆಸರನ್ನು ಇಡಲಾಗಿದೆ ಭಾರತದ ಇತಿಹಾಸದಲ್ಲಿ ಕದಂಬರದ್ದು ಅತ್ಯಂತ ಸುವರ್ಣಾಕ್ಷರಗಳಿಂದ ಬರೆದಿಡುವ ಇತಿಹಾಸ ಕಾಲದಲ್ಲಿ ಭಾರತದ ಕೀರ್ತಿ ಜಗತ್ತಿನ ಎಲ್ಲಡೆ ಹರಡಿದೆ ಎಂಬುದನ್ನು ಅವರು ಸ್ಮರಿಸಿಕೊಂಡರು.|
ದೇಶ ಸೇವೆಯಲ್ಲಿ ತೊಡಗಿರುತ್ತಾರೆ
''ಸೈನಿಕರು ತಮ್ಮ ಕುಟುಂಬವನ್ನು ಮರೆತು ಸದಾ ದೇಶ ಸೇವೆಯಲ್ಲಿ ತೊಡಗಿರುತ್ತಾರೆ. ಹಿಂದೊಮ್ಮೆ ನನಗೆ ಜಲಾಂತರ್ಗಾಮಿಯಲ್ಲಿ ಹೋಗುವ ಅವಕಾಶ ಒದಗಿ ಬಂದಿತ್ತು. ಅಲ್ಲಿ ಜೀವನ ಅತ್ಯಂತ ಕಠಿಣವಾಗಿತ್ತು. ಬಳಸುವ ನೀರನ್ನು ಮಿತವಾಗಿ ಅಳೆದು ಬಳಸಬೇಕು ಇಂತಹ ಸ್ಥಿತಿಯಲ್ಲಿ ಸೈನಿಕರು ತಿಂಗಳುಗಟ್ಟಲೇ ಕುಟುಂಬದಿಂದ ದೂರವಿರುತ್ತಾರೆ ಎಲ್ಲಿ ನೋಡಿದರಲ್ಲಿ ನೀರು ಮಾತನಾಡಲು ಬೇರೇನು ಇಲ್ಲದೆ ಸಮುದ್ರದ ಅಲೆಯ ಶಬ್ದವನ್ನು ಕೇಳಿಕೊಳ್ಳುತ್ತಾರೆ ಕಷ್ಟಸಾಧ್ಯ,'' ಎಂದುದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಸೈನಿಕರಲ್ಲಿ ಕರ್ತವ್ಯಪ್ರಜ್ಞೆ ಹೆಚ್ಚಾಗಿರುತ್ತದೆ
ಸೈನಿಕರಲ್ಲಿ ಕರ್ತವ್ಯಪ್ರಜ್ಞೆ ಹೆಚ್ಚಾಗಿರುತ್ತದೆ. ಭಾರತ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲು ನಮ್ಮ ಸೈನ್ಯದ ಕೊಡುಗೆ ಅಪಾರ. ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಬಂದ ನಂತರ ಭಾರತವನ್ನು ಇತರ ದೇಶಗಳು ನೋಡುವ ರೀತಿಯೇ ಬದಲಾಗಿದೆ. ಹಿಂದೆ ಭಾರತದ ವಿಚಾರಗಳಿಗೆ ಗಂಭೀರತೆಯನ್ನು ನೀಡುತ್ತಿರಲ್ಲಿಲ್ಲ. ಈಗ ಗಂಭೀರವಾಗಿ ಕೇಳುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಇದು ಸಾಧ್ಯವಾಗಿದೆ ಎಂದರು.
ಜನರಲ್ಲಿ ಅಪಾರ ಗೌರವ ಇದೆ
ಭಾರತದ ಸುರಕ್ಷತೆಯಲ್ಲಿ ಸೈನಿಕರ ಪಾತ್ರ ಮಹತ್ವದ್ದಾಗಿದೆ. ನಿಮ್ಮ ಯೋಗದಾನದಿಂದ ಭಾರತದ ಹೆಸರು ಸ್ವರ್ಣಾಕ್ಷರದಲ್ಲಿ ಬರದಿಡುವ ಸಂದರ್ಭ ಬರಲಿದೆ. ದೇಶ ಸೇವೆ ಮಾಡುವ ಸೈನಿಕರ ತಾಯಿ, ಪತ್ನಿಯರ ತ್ಯಾಗವೂ ಮಹತ್ವದ್ದಾಗಿದೆ. ಸೈನಿಕರ ಬಗ್ಗೆ ದೇಶದ ಜನರಲ್ಲಿ ಅಪಾರ ಗೌರವ ಇದೆ. ಯುವಜನತೆಗೆ ಸೈನಿಕರು ಸ್ಪೂರ್ತಿಯಾಗಿದ್ದಾರೆ ಎಂದರು.
ವ್ಯಕ್ತಿಗತ ಸ್ವಾಭಿಮಾನ
ಪ್ರತಿಯೊಬ್ಬರಲ್ಲಿಯೂ ಸ್ವಾಭಿಮಾನ ಇರುತ್ತದೆ. ವ್ಯಕ್ತಿಗತ ಸ್ವಾಭಿಮಾನ ಮತ್ತು ರಾಷ್ಟ್ರೀಯ ಸ್ವಾಭಿಮಾನ ಬೇರೆ ಬೇರೆ. ನಮ್ಮ ವಿರುದ್ಧ ಮಾತನಾಡಿದರೆ ವ್ಯಕ್ತಿ ಸ್ವಾಭಿಮಾನ ಜಾಗೃತವಾಗುತ್ತದೆ. ನಮ್ಮ ದೇಶದ ವಿರುದ್ಧ ಯಾರಾದರು ಮಾತನಾಡಿದಾಗ ಜಾಗೃತವಾಗುವುದೇ ರಾಷ್ಟ್ರಸ್ವಾಭಿಮಾನ ಎಂದು ರಾಜನಾಥ್ ಸಿಂಗ್ ಹೇಳಿದರು.
|
ನೌಕಾಪಡೆ ಮುಖ್ಯಸ್ಥರು ಭಾಗಿ
ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ, ಪಶ್ಚಿಮ ವಲಯ ಮುಖ್ಯಸ್ಥ ವೈಸ್ ಅಡ್ಮಿರಲ್ ಅಜೇಂದ್ರ ಬಹದೂರ್ ಸಿಂಗ್, ಕರ್ನಾಟಕ ನೌಕಾ ವಲಯದ ಮುಖ್ಯಸ್ಥ ರಿಯರ್ ಅಡ್ಮಿರಲ್ ಅತುಲ್ ಆನಂದ, ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ನೌಕಾಪಡೆಯ ವಿವಿಧ ಅಧಿಕಾರಿಗಳು ಹಾಜರಿದ್ದರು.