10 ವರ್ಷಗಳ ಬಳಿಕ ಗೋಕರ್ಣ ದೇವಸ್ಥಾನ ಸರ್ಕಾರದ ವಶಕ್ಕೆ
Recommended Video
ಕಾರವಾರ, ಸೆಪ್ಟೆಂಬರ್.19: ಹೈಕೋರ್ಟ್ ಆದೇಶದ ಮೇರೆಗೆ ಗೋರ್ಕಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ದೇವಸ್ಥಾನದ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರೂ ಅಗಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಬುಧವಾರ ವಹಿಸಿಕೊಂಡರು.
ದೇವಸ್ಥಾನದ ಸಾಮಗ್ರಿ, ಬೆಲೆಬಾಳುವ ವಸ್ತುಗಳ ಪಟ್ಟಿಯನ್ನು ಇಂದು ಪುನಃ ಪರಿಶೀಲನೆ ನಡೆಸಿ ಉಸ್ತುವಾರಿ ಸಮಿತಿ ವಶಕ್ಕೆ ಪಡೆಯಲಾಯಿತು. 2008ರಲ್ಲಿ ಸರ್ಕಾರ ಹೊಸನಗರದ ಶ್ರೀರಾಮಚಂದ್ರಾಪುರ ಮಠಕ್ಕೆ ಗೋಕರ್ಣ ಮಹಬಲೇಶ್ವರ ದೇವಸ್ಥಾನದ ಆಡಳಿತವನ್ನು ವಹಿಸಿತ್ತು.
ಗೋಕರ್ಣ ದೇವಸ್ಥಾನ ಹಸ್ತಾಂತರದ ಸತ್ಯಾಸತ್ಯತೆ
ಇದನ್ನು ವಿರೋಧಿಸಿ ಕೆಲವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಗೋಕರ್ಣದ ಮಹಬಲೇಶ್ವರ ದೇವಸ್ಥಾನದ ಆಡಳಿತವನ್ನು ರಾಮಚಂದ್ರಾಪುರ ಮಠದ ಆಡಳಿತ ಮಂಡಳಿಯಿಂದ ತಮ್ಮ ವಶಕ್ಕೆ ಪಡೆದರು.
ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು 2008ರ ಆಗಸ್ಟ್ ನಲ್ಲಿ ಅಂದಿನ ಸರ್ಕಾರ ರಾಮಚಂದ್ರಾಪುರ ಮಠಕ್ಕೆ ವಹಿಸಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು ಗೋಕರ್ಣ ದೇವಾಲಯ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಕಾಯ್ದೆ 1997ಕ್ಕೆ ಒಳಪಡುತ್ತದೆ.
ಈ ಹಿನ್ನೆಲೆಯಲ್ಲಿ ಅದನ್ನು ಹಸ್ತಾಂತರ ಮಾಡಿರುವುದು ಸರಿಯಲ್ಲವೆಂದು, ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು ದೇವಾಲಯವನ್ನು ಪುನಃ ಸರ್ಕಾರದ ವಶಕ್ಕೆ ನೀಡಬೇಕೆಂದು ಆದೇಶಿಸಿತ್ತು.
ಗೊರವನಹಳ್ಳಿ ದೇವಸ್ಥಾನ ಮುಜರಾಯಿ ಇಲಾಖೆಗೆ?
ಈ ಸಂಬಂಧ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಹೈಕೋರ್ಟ್ ಆದೇಶದಂತೆ ದೇವಾಲಯದ ಆಡಳಿತವನ್ನು ತಮ್ಮ ನೇತೃತ್ವದ ಉಸ್ತುವಾರಿ ಸಮಿತಿ ವಹಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಸಂಬಂಧ ರಾಮಚಂದ್ರಾಪುರ ಮಠದವರಿಗೆ ನ್ಯಾಯಾಲಯದ ತೀರ್ಪಿನ ಬಗ್ಗೆ ಇರುವ ಗೊಂದಲ ತಮಗೆ ಗೊತ್ತಿಲ್ಲ.
ತೀರ್ಪಿನ ಬಗ್ಗೆ ಸ್ಪಷ್ಟತೆಯಿದ್ದು ಮುಜರಾಯಿ ಆಯುಕ್ತಾಲಯದಿಂದ ಬಂದಿರುವ ಮಾರ್ಗಸೂಚಿಯಂತೆ ತಾವು ಅಧಿಕಾರ ವಹಿಸಿಕೊಂಡಿದ್ದು, ಸದ್ಯದಲ್ಲೇ ಸಮಿತಿಗೆ ಸದಸ್ಯರನ್ನು ನೇಮಿಸಿಕೊಳ್ಳಲಾಗುವುದು ಎಂದರು.
ಜಿಲ್ಲಾಡಳಿತದ ನಿರ್ಧಾರಕ್ಕೆ ಮಠದ ವಕೀಲರು ಈ ವೇಳೆ ವಿರೋಧ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಹಸ್ತಾಂತರ ನಡೆಯುತ್ತಿದೆ ಎಂದು ಆರೋಪಿಸಿದರು. ಹಸ್ತಾಂತರ ಮಾಡಿಕೊಂಡ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಕೇಸ್ ಹಾಕುವುದಾಗಿ ಮಠದ ಪರ ವಕೀಲ ಶಂಭುಶರ್ಮ ಹೇಳಿದ್ದಾರೆ.
ಬೆಂಗಳೂರು : ದುರ್ಗಾ ಪರಮೇಶ್ವರಿ ದೇವಾಲಯ ಮುಜರಾಯಿ ವ್ಯಾಪ್ತಿಗೆ
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್, ಕುಮಟಾ ಉಪ ವಿಭಾಗಾಧಿಕಾರಿ ಲಕ್ಷ್ಮೀಪ್ರಿಯ, ಆಡಳಿತಾಧಿಕಾರಿ ಹಾಲಪ್ಪ, ತಹಸೀಲ್ದಾರ್ ಮೇಘರಾಜ್ ಉಪಸ್ಥಿತರಿದ್ದರು.