ವಿದೇಶದಿಂದ ಬಂದವರಿಂದಲೇ ಸೋಂಕು ಹೆಚ್ಚು: ಉತ್ತರ ಕನ್ನಡ ಡಿಸಿ
ಕಾರವಾರ, ಮಾರ್ಚ್ 23: ವಿದೇಶ ಪ್ರಯಾಣದಿಂದ ಹಿಂದಿರುಗಿದವರಲ್ಲೇ ಹೆಚ್ಚಾಗಿ ಕೋವಿಡ್-19 ರೋಗದ ಲಕ್ಷಣಗಳು ಕಂಡುಬರುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಉಪವಿಭಾಗದ ಹೆಚ್ಚಿನ ಜನರು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಅಲ್ಲಿಂದ ತವರಿಗೆ ಹಿಂದಿರುಗುತ್ತಿದ್ದಾರೆ. ಹೀಗಾಗಿ, ಮಾ. 24 ರಿಂದ 31 ರವರೆಗೆ ಜೀವನಾವಶ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ನಿಷೇಧಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶಿಸಿದರು.
Recommended Video
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೋವಿಡ್-19 ವೈರಾಣುಗಳಿಂದ ಸೋಂಕಿತರಾದವರ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಸೋಂಕಿತರ ಒಡನಾಟದಲ್ಲಿರುವ ಎಲ್ಲರಿಗೂ ಈ ರೋಗದ ಲಕ್ಷಣಗಳು ಕಂಡುಬರುತ್ತಿರುವುದು ವೈದ್ಯಕೀಯವಾಗಿ ಸಾಬೀತಾಗಿದೆ ಎಂದರು.
ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಗದಿತ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸೂಚನೆ ನೀಡಿದ್ದರೂ ಸಹ ಸಾರ್ವಜನಿಕರು ಸಕಾರಾತ್ಮಕವಾಗಿ ಸ್ಪಂದಿಸದೇ, ವಿದೇಶದಿಂದ ಹಿಂದಿರುಗಿದವರ ಸತತ ಒಡನಾಟಲ್ಲಿರುವುದು ಕಂಡು ಬಂದಿದೆ. ಅಧಿಕಾರಿಗಳು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಅವರ ಮೇಲೆ ಸತತ ಕಣ್ಗಾವಲು ಇಟ್ಟಿದ್ದರೂ ಕೋವಿಡ್-19 ವೈರಾಣುಗಳ ಹರಡುವಿಕೆಯ ಗತಿಯನ್ನು ಪರಿಗಣಿಸಿ ಭಟ್ಕಳ ಉಪವಿಭಾಗದಲ್ಲಿ ರೋಗದ ಹರಡುವಿಕೆಯನ್ನು ತಡೆಗಟ್ಟಲು ಇನ್ನಷ್ಟು ಬಿಗಿಯಾದ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಐದು ಮತ್ತು ಅದಕ್ಕಿಂತ ಹೆಚ್ಚಿನ ಜನರು ಗುಂಪು ಸೇರುವುದು, ಓಡಾಡುವುದು ಅಥವಾ ಇನ್ನಿತರೆ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ತಡೆಯಲು ಸೆಕ್ಷನ್ 144 ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಇದನ್ನು ಮುಂದುವರಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಭಟ್ಕಳ ಉಪವಿಭಾಗಕ್ಕೆ ಸೀಮಿತವಾಗಿ ಇನ್ನಷ್ಟು ಹೆಚ್ಚಿನ ಚಟುವಟಿಕೆಗಳನ್ನು ನಿಷೇಧಿಸಲಾಗುತ್ತಿದೆ ಎಂದು ತಿಳಿಸಿದರು.
ಅತ್ಯಗತ್ಯ ಸಾರ್ವಜನಿಕ ಸೇವೆಗಳಾದ ವಿದ್ಯುಚ್ಛಕ್ತಿ, ನೀರು, ದೂರವಾಣಿ, ಬ್ಯಾಂಕ್, ಔಷಧಿ, ವೈದ್ಯಕೀಯ, ಅಂಚೆ, ಪೌರ, ಅಗ್ನಿಶಾಮಕ, ವಿಮಾ ಮುಂತಾದ ಸೇವೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನ ಮತ್ತು ಸ್ವಾಮ್ಯಕ್ಕೆ ಒಳಪಟ್ಟ ಎಲ್ಲಾ ಸಾರ್ವಜನಿಕ ಕಚೇರಿಗಳನ್ನು ಹೊರತುಪಡಿಸಿ ಇತರ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ಅವರು ಆದೇಶಿಸಿದರು.
ಈ ಆದೇಶವನ್ನು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪೊಲೀಸ್ ಇಲಾಖೆಗೆ ಅಗತ್ಯ ಸಹಕಾರ ನೀಡಲು ಮತ್ತು ಯಾವುದೇ ರೀತಿಯಲ್ಲಿ ಆದೇಶದ ಉಲ್ಲಂಘನೆಯಾದಲ್ಲಿ ತಕ್ಷಣವೇ ಅಪಾಧಿತರ ವಿರುದ್ಧ ಕ್ರಮ ಜರುಗಿಸಲು ಅವರು ಸೂಚಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಇದ್ದರು.