ಉತ್ತರ ಕನ್ನಡಕ್ಕೆ ಮೂರು ದಿನ ಯಾರೂ ಬರಲೇಬೇಡಿ; ಡಿಸಿ ಸೂಚನೆ
ಕಾರವಾರ, ಆಗಸ್ಟ್ 8: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದೆ. ಜಿಲ್ಲೆಯ ಬಹುತೇಕ ಕಡೆ ಭಾರೀ ಮಳೆಯಾಗುತ್ತಿದ್ದು, ಮಳೆಯಿಂದ ಆಗುವ ಹಾನಿಯ ತೀವ್ರತೆಯೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಮುಂದಿನ ಮೂರು ದಿನಗಳಲ್ಲಿ ಜಿಲ್ಲೆಗೆ ಯಾರೂ ಬರಬೇಡಿ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ತುಂಬಿ ಹರಿಯುತ್ತಿರುವ ನದಿಗಳು; ದಕ್ಷಿಣ ಕನ್ನಡಕ್ಕೆ ಬರಲು ಹಿಂದೇಟಾಕುತ್ತಿರುವ ಭಕ್ತರು
ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಸದ್ಯಕ್ಕೆ ಕೆಲವು ದಿನಗಳ ಕಾಲ ತಮ್ಮ ಪ್ರಯಾಣವನ್ನು ಮುಂದೂಡಿ. ಸಮಸ್ಯೆಗಳಿಗೆ ಒಳಗಾಗಬೇಡಿ. ಸುರಕ್ಷತೆ ದೃಷ್ಟಿಯಿಂದ ಹೇಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಕೆ. ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದೆ. ಮಳೆಯಿಂದ ಎಲ್ಲ ರಸ್ತೆಗಳಲ್ಲೂ ಪ್ರವಾಹ, ಗುಡ್ಡ ಕುಸಿತ ಹಾಗೂ ಮರ ಬೀಳುವ ಅಪಾಯಕಾರಿ ಸಂದರ್ಭಗಳೇ ಹೆಚ್ಚಿವೆ. ಜೊತೆಗೆ ನದಿ ತೊರೆಗಳೂ ಉಕ್ಕಿ ಹರಿಯುತ್ತಿವೆ. ಇಂಥ ಅಪಾಯದ ಸನ್ನಿವೇಶದಲ್ಲಿ ಪ್ರಯಾಣ ಮಾಡುವುದು ಯಾವುದೇ ದೃಷ್ಟಿಯಿಂದಲೂ ಸರಿಯಿಲ್ಲ. ಆದ್ದರಿಂದ ಈ ದಿನಗಳಲ್ಲಿ ಪ್ರಯಾಣ ಮಾಡಿ ಸಂಕಷ್ಟಕ್ಕೆ ಗುರಿಯಾಗಬಾರದು ಎಂದು ಅವರು ಸೂಚಿಸಿದ್ದಾರೆ.