'ತೌಕ್ತೆ'ಯಿಂದಾಗಿ ಉತ್ತರ ಕನ್ನಡದಲ್ಲಿ 60 ಕೋಟಿ ರೂ. ನಷ್ಟ: ಸಚಿವ ಆರ್.ಅಶೋಕ್
ಕಾರವಾರ, ಮೇ 19: ಇತ್ತೀಚಿಗೆ ತೌಕ್ತೆ ಚಂಡಮಾರುತದ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅಂದಾಜು 60 ಕೋಟಿ ರೂ.ಗಳು ನಷ್ಟ ಸಂಭವಿಸಿದ್ದು, ಉಳಿದ ಜಿಲ್ಲೆಗೆ ಹೋಲಿಸಿದರೆ ಉತ್ತರ ಕನ್ನಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಾಧಿಸಿದೆ. ಹೀಗಾಗಿ ತಕ್ಷಣ ಓಡಾಟಕ್ಕೆ ಅನೂಕೂಲಕರ ಪ್ರದೇಶ, ರಸ್ತೆಗಳನ್ನು ಸರಿಪಡಿಸಲು ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಮಂಗಳವಾರ (ಮೇ 18)ದಂದು ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ತಾಲೂಕಿನ ತೆಂಗಿನಗುಂಡಿ, ಹೆಬಳೆ, ಹರ್ತಾರ್, ಮಾವಿನಕುರ್ವೆ ಬಂದರ್ ಪ್ರದೇಶ, ತಲಗೋಡು-ಬಂದರ್- ಕರಿಕಲ್ ಸಮುದ್ರ ತೀರದಲ್ಲಿ ಹಾನಿಗೊಳಗಾದ ರಸ್ತೆ, ಅಲೆ ತಡೆಗೋಡೆ, ಮನೆಗಳಿಗೆ ನೀಡಿ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ವರದಿ ತಯಾರಿಸಿ ಸಮರ್ಪಕ ಪರಿಹಾರ
ಚಂಡಮಾರುತ ಕರಾವಳಿ ಪ್ರದೇಶದಲ್ಲಿ ಹಾನಿ ಮಾಡಿ ಈಗ ಗುಜರಾತ್ ಕಡೆ ಅಬ್ಬರಿಸುತ್ತಿದೆ. ರಾಜ್ಯದ ಕರಾವಳಿ ಪ್ರದೇಶದಲ್ಲಿ ಚಂಡಮಾರುತದಿಂದ ಬಹಳಷ್ಟು ಹಾನಿ ಸಂಭವಿಸಿದ್ದು, ಅದರಲ್ಲೂ ಕಾರವಾರ, ಭಟ್ಕಳದಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ. ಅದರಂತೆ ಜಿಲ್ಲೆಯ ಅಧಿಕಾರಿಗಳಿಗೆ ಹಾನಿಯ ಕುರಿತಂತೆ ಸಮೀಕ್ಷೆ ನಡೆಸಿ ಸಮಗ್ರ ವರದಿ ತಯಾರಿಸಿ ಸಮರ್ಪಕವಾದ ಪರಿಹಾರ ಸಿಗುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕೊರೊನಾ 3ನೇ ಅಲೆ ಭೀತಿ; ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಆಸ್ಪತ್ರೆ ಹೆಚ್ಚಳ
107 ಮಂದಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ
ಚಂಡಮಾರುತದಿಂದಾಗಿ ಸಮುದ್ರದ ತೀರ ಪ್ರದೇಶದಲ್ಲಿ ಕಡಲ ಕೊರೆತದಿಂದ ಭಟ್ಕಳದಲ್ಲಿ ಸಾಕಷ್ಟು ರಸ್ತೆ, ತಡೆಗೋಡೆಗಳು ನೀರು ಪಾಲಾಗಿ ಹಾನಿಯಾಗಿವೆ. ಅದರಂತೆ ಮನೆ ಹಾನಿ, ಬೆಳೆ ಹಾನಿಯೂ ಸಂಭವಿಸಿದ್ದು, ಬೆಳೆ ಹಾನಿಯಾಗಿರುವವರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿಯಲ್ಲಿ ಸಿಗಬೇಕಾದ ಪರಿಹಾರದ ಬಗ್ಗೆ ಕ್ರಮವನ್ನು ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ಚಂಡಮಾರುತದಿಂದ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳಲ್ಲಿ ಒಟ್ಟು 48 ಗ್ರಾಮಗಳು ಬಾಧಿತವಾಗಿದ್ದು, ಈ ಪೈಕಿ 8 ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. 107 ಮಂದಿಗೆ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ಇದರಲ್ಲಿ ಭಟ್ಕಳದಲ್ಲಿ ಓರ್ವ ಮೃತನಾಗಿದ್ದು, ಆತನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಾಗಿದೆ.
ಎರಡು- ಮೂರು ದಿನದಲ್ಲಿ ಸಂಪೂರ್ಣ ಮಾಹಿತಿ
ಇನ್ನು ಒಟ್ಟು 176 ಮನೆಗಳು ಹಾನಿಯಾಗಿದ್ದರೆ, 86 ಮೀನುಗಾರಿಕಾ ಬೋಟ್ಗಳು, 45 ಮೀನುಗಾರಿಕಾ ಬಲೆಗಳು, 3.57 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆ ಹಾನಿಯಾಗಿದೆ. 530 ವಿದ್ಯುತ್ ಕಂಬಗಳು, 139 ಟ್ರಾನ್ಸಫಾರ್ಮರ್ಗಳು ಹಾನಿಯಾಗಿದೆ. ಈ ಎಲ್ಲಾ ಹಾನಿಗಳ ಬಗ್ಗೆ ಈಗ ಪ್ರಾಥಮಿಕ ಹಂತದ ತನಿಖಾ ವರದಿ ಬಂದಿದ್ದು, ಇನ್ನು ಎರಡು- ಮೂರು ದಿನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಕಂದಾಯ, ತೋಟಗಾರಿಕೆ ಇಲಾಖೆ, ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ತಕ್ಷಣಕ್ಕೆ ಸಮೀಕ್ಷಾ ವರದಿ ತಲುಪಿಸಬೇಕು. ಈ ಎಲ್ಲಾ ಹಾನಿಗಳಿಗೆ ತಕ್ಷಣಕ್ಕೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಪರಿಹಾರದ ಹಣ ಮಂಜೂರು ಮಾಡಲಿದ್ದೇನೆ ಎಂದು ಮಾಹಿತಿ ತಿಳಿಸಿದರು.
ಸಂಪೂರ್ಣ ಮನೆ ಹಾನಿಯಾಗಿದ್ದರೆ 5 ಲಕ್ಷ ರೂ.
ಇನ್ನು ಚಂಡಮಾರುತದಿಂದ ಮನೆಗಳಿಗೆ ನೀರು ನುಗ್ಗಿದ್ದು, ಅಂತಹ ಮನೆಗಳನ್ನು ಗುರುತಿಸಿ ಪರಿಶೀಲನೆ ನಡೆಸಿ ತಕ್ಷಣಕ್ಕೆ 10 ಸಾವಿರ ರೂ.ಗಳನ್ನು ಎರಡು ದಿನದಲ್ಲಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅರ್ಧ ಮನೆ ಬಿದ್ದಿದ್ದರೆ 1 ಲಕ್ಷ ರೂ., ಸಂಪೂರ್ಣ ಮನೆ ಹಾನಿಯಾಗಿದ್ದರೆ ಸ್ಥಳ ಪರಿಶೀಲಿಸಿ 5 ಲಕ್ಷ ರೂ. ನೀಡುವಂತೆ ತಿಳಿಸಲಾಗಿದೆ. ಅಧಿಕಾರಿಗಳೇ ಮನೆಗೆ ಭೇಟಿ ನೀಡಿ ತಕ್ಷಣಕ್ಕೆ 10 ಸಾವಿರ ರೂ. ನೀಡುವಂತೆ ಸೂಚಿಸಿದ್ದು, ಇದರಲ್ಲಿ ಯಾವುದೇ ಚೌಕಾಸಿ ಮಾಡಬಾರದೆಂದು ಎಚ್ಚರಿಸಲಾಗಿದೆ ಎಂದರು.
ಕರಾವಳಿ ಭಾಗದ ಎಲ್ಲಾ ಶಾಸಕರು ಭೇಟಿ
ಸಮುದ್ರ ತೀರದಲ್ಲಿ ಕಡಲ ಕೊರೆತದಿಂದ ತಪ್ಪಿಸಿಕೊಳ್ಳಲು ಹಾಕಲಾದ ತಡೆಗೋಡೆಯ ಕಲ್ಲುಗಳು ಹಾನಿಯಾಗಿದ್ದು, ಸ್ಥಳ ಪರಿಶೀಲನೆಯಿಂದ ತಿಳಿದು ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಕರಾವಳಿ ಭಾಗದ ಎಲ್ಲಾ ಶಾಸಕರು ಭೇಟಿ ನೀಡಿದ್ದೇವೆ. ಆರ್ಡಿಪಿಆರ್ ಹಾಗೂ ಪಿಡಬ್ಲೂಡಿ ವ್ಯಾಪ್ತಿಗೆ ಬರುವ ರಸ್ತೆಗಳನ್ನು ಪರಿಶೀಲನೆ ನಡೆಸಿ ಸರಿಪಡಿಸುವ ಬಗ್ಗೆ ತಿಳಿಸಿದ್ದೇವೆ ಎಂದು ಆರ್.ಅಶೋಕ್ ತಿಳಿಸಿದರು.
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಭಟ್ಕಳ ಶಾಸಕ ಸುನೀಲ ನಾಯ್ಕ, ಕುಮಟಾ ಶಾಸಕ ದಿನಕರ ಶೆಟ್ಟಿ, ಕಾರವಾರ ಶಾಸಕಿ ರೂಪಾಲಿ ನಾಯ್ಕ ಹಾಗೂ ಎಲ್ಲಾ ಅಧಿಕಾರಿಗಳು ಹಾಜರಿದ್ದರು.
Recommended Video