CRZ ನಿಯಮ ಉಲ್ಲಂಘನೆ; ಉತ್ತರ ಕನ್ನಡದಲ್ಲಿ ಹೆಚ್ಚು ಪ್ರಕರಣ
ಕಾರವಾರ, ಜನವರಿ 15: ಕೇರಳದಲ್ಲಿ ಸಿಆರ್ ಝೆಡ್ ನಿಯಮ ಉಲ್ಲಂಘಿಸಿ ಕಟ್ಟಲಾಗಿದ್ದ ಕಟ್ಟಡವನ್ನು ಕೋರ್ಟ್ ಆದೇಶದ ಮೇರೆಗೆ ತೆರವು ಮಾಡಿದ ಪ್ರಕರಣದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಭಾಗದಲ್ಲೂ ಸಿಆರ್ ಝೆಡ್ ನಿಯಮ ಉಲ್ಲಂಘಿಸಿದವರಿಗೆ ನಡುಕ ಹುಟ್ಟಿಸಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಸಿಆರ್ ಝೆಡ್ ನಿಯಮ ಉಲ್ಲಂಘಿಸಿದ ಸುಮಾರು 170 ಪ್ರಕರಣಗಳು ದಾಖಲಾಗಿವೆೆ.
ಕಾರವಾರ ಬಂದರು ವಿವಾದ: ಸತೀಶ್ ಸೈಲ್ ವಿರುದ್ಧ ಆಕ್ರೋಶ
ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯೊಂದರಲ್ಲಿಯೇ ಸುಮಾರು 106 ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಸಿಆರ್ ಝೆಡ್ ನಿಯಮ ಉಲ್ಲಂಘಿಸಿದ ರಾಜ್ಯದಲ್ಲೇ ಅತಿ ಹೆಚ್ಚು ಪ್ರಕರಣ ದಾಖಲಾಗಿರುವ ಜಿಲ್ಲೆ ಎನ್ನುವ ಪಟ್ಟ ಉತ್ತರ ಕನ್ನಡ ಪಡೆದುಕೊಂಡಿದೆ.
ನಿಯಮ ಉಲ್ಲಂಘಿಸಿ ಶಾಶ್ವತ ಕಾಮಗಾರಿ
ಜಿಲ್ಲೆಯ ಗೋಕರ್ಣ ಒಂದರಲ್ಲಿಯೇ ಸುಮಾರು 76 ಪ್ರಕರಣಗಳು ದಾಖಲಾಗಿದ್ದರೆ, ಕಾರವಾರ ನಗರದಲ್ಲಿ ಅಜ್ವಿ ಓಷಿಯನ್ ಹಾಗೂ ರಾಕ್ಗಾರ್ಡನ್ ಸಿಆರ್ ಝೆಡ್ ನಿಯಮ ಉಲ್ಲಂಘಿಸಿ ಕಟ್ಟಲಾಗಿದೆ ಎಂದು ಪ್ರಕರಣ ದಾಖಲಾಗಿದೆ.
ಮುರ್ಡೇಶ್ವರ, ಅಂಕೋಲಾ, ಹೊನ್ನಾವರ, ಕುಮಟಾ ಹಾಗೂ ಭಟ್ಕಳದಲ್ಲೂ ಕೆಲವು ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಸಿಆರ್ ಝೆಡ್ ನಿಯಮ ಉಲ್ಲಂಘಿಸಿ ಬಹುಮಹಡಿ ಕಟ್ಟಡ ಕಟ್ಟದಿದ್ದರೂ, ನಿಯಮದ ಪ್ರಕಾರ ಶಾಶ್ವತ ಕಟ್ಟಡ ಕಾಮಗಾರಿ ಮಾಡಲು ಸಾಧ್ಯವಿಲ್ಲ. ಹೀಗಿದ್ದರೂ ಇದನ್ನು ಉಲ್ಲಂಘಿಸಿ ಶಾಶ್ವತ ಕಟ್ಟಡ ಕಟ್ಟಿರುವುದರಿಂದ ಪ್ರಕರಣ ದಾಖಲಾಗಿದೆ.
ನಿಯಮ ಉಲ್ಲಂಘನೆ ಮಾಡಿದವರಿಗೆ ನೋಟಿಸ್
ಈಗಾಗಲೇ ಕೇರಳದಲ್ಲಿ ನಾಲ್ಕು ಬಹಮಹಡಿ ಕಟ್ಟಡವನ್ನು ಅಲ್ಲಿನ ಸರ್ಕಾರ ಕೋರ್ಟ್ ಆದೇಶದ ಮೇರೆಗೆ ತೆರವು ಮಾಡಿರುವುದರಿಂದ ಸಿಆರ್ ಝೆಡ್ ವ್ಯವಸ್ಥಾಪನಾ ಸಮಿತಿ ಜಿಲ್ಲೆಯಲ್ಲೂ ಎಚ್ಚೆತ್ತುಕೊಂಡಿದೆ.
ಈ ಕುರಿತು ಮಾತನಾಡಿರುವ ಸಿಆರ್ ಝೆಡ್ ಪರಿಸರ ವಿಭಾಗದ ಎಸಿಎಫ್ ಪ್ರಸನ್ನ ಪಟಗಾರ್, "ನಿಯಮ ಉಲ್ಲಂಘಿಸಿ ಕಾಮಗಾರಿ ಮಾಡಿದವರಿಗೆ ಈಗಾಗಲೇ ನೋಟಿಸ್ ಕೊಡಲಾಗಿದೆ. ಕಾನೂನು ಕ್ರಮಕ್ಕೆ ರಾಜ್ಯ ಸಮಿತಿಗೆ ಶಿಫಾರಸು ಮಾಡಲಾಗಿದೆ. ಎಲ್ಲಾ 106 ಪ್ರಕರಣದವರಿಗೂ ಮತ್ತೆ ನೋಟಿಸ್ ಕೊಡುವ ಮೂಲಕ ಕ್ರಮಕ್ಕೆ ಮುಂದಾಗುತ್ತೇವೆ' ಎಂದು ತಿಳಿಸಿದರು.
ಸಿಆರ್ ಝೆಡ್ ಉಲ್ಲಂಘನೆಯಿಂದ ಕರಾವಳಿಗೆ ಹಾನಿ
ಸಿಆರ್ ಝೆಡ್ ಎಂದರೆ ಕರಾವಳಿ ನಿಯಂತ್ರಣ ವಲಯ ಎಂದರ್ಥ. ಕರಾವಳಿ ತೀರ ಪ್ರದೇಶಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಿಆರ್ ಝೆಡ್ ನಿಯಮವನ್ನು ಜಾರಿಗೆ ತರಲಾಯಿತು. ಇದರ ನಿಯಮದಲ್ಲಿ ಮೂರು ಹಂತದಲ್ಲಿ ವರ್ಗೀಕರಣ ಮಾಡಲಾಗಿದ್ದು, ಕರಾವಳಿಯ ತೀರದಿಂದ ಸುಮಾರು 500 ಮೀಟರ್ನಲ್ಲಿ ಯಾವುದೇ ಶಾಶ್ವತ ಕಾಮಗಾರಿಗಳನ್ನು ಮಾಡುವಂತಿಲ್ಲ ಎಂದು ಜಾರಿಗೆ ತರಲಾಗಿತ್ತು.
1996 ರಲ್ಲಿ ಸಿಗಡಿ ಕೃಷಿ ಯತೇಚ್ಛವಾಗಿ ಮಾಡಲು ಪ್ರಾರಂಭಿಸಿದ್ದರಿಂದ ಕರಾವಳಿ ತೀರ ಪ್ರದೇಶಕ್ಕೆ ಹಾನಿಯಾಗಲಿದೆ ಎಂದು ಸಿಆರ್ ಝೆಡ್ ನಿಯಮವನ್ನು ತರಲಾಯಿತು.
ಕರಾವಳಿ ನಿಯಂತ್ರಣ ವಲಯ 500 ಮೀಟರ್ ವ್ಯಾಪ್ತಿ
1992ರ ಒಳಗೆ ಕರಾವಳಿ ತೀರದಲ್ಲಿ ಕಟ್ಟಿದ ಕಟ್ಟಡಗಳಿಗೆ ಸಿಆರ್ ಝೆಡ್ ನಿಯಮ ಜಾರಿಗೆ ಬರುವುದಿಲ್ಲ. ಇದಾದ ನಂತರ ಕಟ್ಟಿದ ಕಟ್ಟಡಕ್ಕೆ ನಿಯಮ ಅನ್ವಯವಾಗಲಿದ್ದು, ಸಿಆರ್ ಝೆಡ್ ನಿಯಮ ಉಲ್ಲಂಘಿಸಿದರೆ ಜಿಲ್ಲಾ ಮಟ್ಟದ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇರುವ ಸಿಆರ್ ಝೆಡ್ ಸಮಿತಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತದೆ.
2001 ರ ಸಿಆರ್ ಝೆಡ್ ನಿಯಮದ ಪ್ರಕಾರ ಕರಾವಳಿ ನಿಯಂತ್ರಣ ವಲಯ 500 ಮೀಟರ್ ವ್ಯಾಪ್ತಿಗೆ ಇದೆ. ೨೦೧೮ರಲ್ಲಿ ಮತ್ತೆ ಸಿಆರ್ ಝೆಡ್ ನಿಯಮ ಬದಲಿಸಿದ್ದು, 500 ಮೀಟರ್ ಅನ್ನು ಹೊಸ ನಿಯಮದ ಪ್ರಕಾರ ಕಡಿತಗೊಳಿಸಲು ನಿರ್ಧರಿಸಲಾಗಿದೆ. ಆದರೆ, ಹೊಸ ನಿಯಮದಿಂದ ಕರಾವಳಿ ತೀರ ಪ್ರದೇಶಕ್ಕೆ ಹಾನಿಯಾಗಲಿದೆ ಎಂದು ಕೆಲವು ಮೀನುಗಾರರು ವಿರೋಧ ವ್ಯಕ್ತಪಡಿಸಿದ್ದರು.