ಕೋವಿಡ್ ಲಸಿಕೆ: ಉತ್ತರ ಕನ್ನಡಕ್ಕೆ ರಾಜ್ಯದಲ್ಲಿ 2ನೇ ಸ್ಥಾನ
ಕಾರವಾರ, ಜನವರಿ 17: ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕೋವಿಡ್ ವಾರಿಯರ್ಸ್ಗಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಶನಿವಾರ ಆರಂಭವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ 620 ಸಿಬ್ಬಂದಿಗೆ ಜಿಲ್ಲೆಯ 11 ಲಸಿಕಾ ಕೇಂದ್ರಗಳಲ್ಲಿ ಶನಿವಾರ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ.
ಕೋವಿಡ್ ಲಸಿಕೆ ನೀಡುವುದರಲ್ಲಿ ಶೇ 80ರಷ್ಟು ಸಾಧನೆ ಮಾಡುವ ಮೂಲಕ ಉತ್ತರ ಕನ್ನಡ ಜಿಲ್ಲೆಯು ಕೋವಿಡ್ ಲಸಿಕಾ ಅಭಿಯಾನದಲ್ಲಿ ಕರ್ನಾಟಕದಲ್ಲಿಯೇ ಎರಡನೇ ಸ್ಥಾನವನ್ನು ಪಡೆದಿದೆ. 807 ಮಂದಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿತ್ತು, ಈ ಪೈಕಿ 28 ಮಂದಿ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದಾರೆ.
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, "ಜಿಲ್ಲೆಯಲ್ಲಿ ಲಸಿಕೆ ಕಾರ್ಯ ಸುಸೂತ್ರವಾಗಿ ನಡೆದಿದೆ. 159 ಸಿಬ್ಬಂದಿ ವಿವಿಧ ಕಾರಣಗಳಿಂದಾಗಿ ಲಸಿಕಾ ಕೇಂದ್ರಕ್ಕೆ ಬಂದಿಲ್ಲ. ಇವರಿಗೆ ಮುಂದಿನ ದಿನಗಳಲ್ಲಿ ಲಸಿಕೆ ನೀಡುವುದಾಗಿ" ಹೇಳಿದ್ದಾರೆ.
ಕರ್ನಾಟಕದಲ್ಲಿ ಒಂದೇ ದಿನ 24,300 ಕೊರೊನಾ ಯೋಧರಿಗೆ ಲಸಿಕೆ
ಹಳಿಯಾಳದಲ್ಲಿ ಲಸಿಕೆ ಪಡೆದ ಮಹಿಳಾ ಸಿಬ್ಬಂದಿಯೊಬ್ಬರಿಗೆ 40 ನಿಮಿಷದ ಬಳಿಕ ವಾಕರಿಗೆ ಉಂಟಾಗಿದೆ. ಮೂರು ನಿಮಿಷಗಳವರೆಗೆ ವಾಂತಿ ಮಾಡಿಕೊಂಡ ಬಳಿಕ ಅವರ ಆರೋಗ್ಯ ಸುಧಾರಿಸಿದೆ. ಇದನ್ನು ಹೊರತುಪಡಿಸಿ ಲಸಿಕೆ ಪಡೆದ ಇನ್ಯಾರಿಗೂ ಯಾವುದೇ ಆರೋಗ್ಯ ಸಮಸ್ಯೆಗಳು ಉಂಟಾಗಿಲ್ಲ.
ಮೊದಲ ದಿನ ಕೊರೊನಾ ಲಸಿಕೆ ಪಡೆದ ರಾಜಕಾರಣಿಗಳು ಯಾರು?
ಎಲ್ಲಿ ಎಷ್ಟು ಲಸಿಕೆ ನೀಡಲಾಗಿದೆ?
ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ 42 ಮಂದಿಗೆ ಲಸಿಕೆ ಹಾಕುವ ಗುರಿ ಇತ್ತು. 30 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. 7 ಮಂದಿ ನಿರಾಕರಿಸಿದ್ದಾರೆ. ಹೊನ್ನಾವರದಲ್ಲಿ 91ರಲ್ಲಿ 62 ಮಂದಿ ಲಸಿಕೆ ಹಾಕಿಸಿಕೊಂಡು, ಮೂವರು ನಿರಾಕರಿಸಿದ್ದಾರೆ. ಜೊಯಿಡಾದಲ್ಲಿ 56ರಲ್ಲಿ 49 ಸಿಬ್ಬಂದಿ ಲಸಿಕೆ ಹಾಕಿಸಿಕೊಂಡಿದ್ದು, 7 ಮಂದಿ ನಿರಾಕರಿಸಿದ್ದಾರೆ. ಮುಂಡಗೋಡದಲ್ಲಿ 62ರಲ್ಲಿ 14 ಮಂದಿ ನಿರಾಕರಿಸಿ, 48 ಸಿಬ್ಬಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ 70 ರಲ್ಲಿ 50, ಭಟ್ಕಳದಲ್ಲಿ 74 ರಲ್ಲಿ 55, ಹಳಿಯಾಳದಲ್ಲಿ 40ರಲ್ಲಿ 39, ಸಿದ್ದಾಪುರದಲ್ಲಿ 85ರಲ್ಲಿ 70, ಶಿರಸಿಯಲ್ಲಿ 99 ರಲ್ಲಿ 92, ಯಲ್ಲಾಪುರದಲ್ಲಿ 90 ರಲ್ಲಿ 70, ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 98 ರಲ್ಲಿ 80 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.
ಎಲ್ಲರೂ ಆರೋಗ್ಯವಾಗಿದ್ದಾರೆ
ಹಳಿಯಾಳದಲ್ಲಿ ಲಸಿಕೆ ಪಡೆದ ಮಹಿಳಾ ಸಿಬ್ಬಂದಿಯೊಬ್ಬರಿಗೆ 40 ನಿಮಿಷದ ಬಳಿಕ ವಾಕರಿಗೆ ಉಂಟಾಗಿದೆ. ಮೂರು ನಿಮಿಷಗಳವರೆಗೆ ವಾಂತಿ ಮಾಡಿಕೊಂಡ ಬಳಿಕ ಅವರ ಆರೋಗ್ಯ ಸುಧಾರಿಸಿದೆ. ಇದನ್ನು ಹೊರತುಪಡಿಸಿ ಲಸಿಕೆ ಪಡೆದ ಇನ್ಯಾರಿಗೂ ಯಾವುದೇ ಆರೋಗ್ಯ ಸಮಸ್ಯೆಗಳು ಉಂಟಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಲಸಿಕೆ ನೀಡಿಕೆ ವಿಳಂಬ
ಹೊನ್ನಾವರದ ತಾಲೂಕು ಆಸ್ಪತ್ರೆಯಲ್ಲಿ ಡಾಟಾ ಎಂಟ್ರಿ ಮಾಡಿಕೊಳ್ಳುವ ಪ್ರಥಮ ಕೊಠಡಿಯಲ್ಲಿಯೇ ಹೆಸರು ನೋಂದಾವಣೆ ಹಾಗೂ ಇತರೆ ದಾಖಲಾತಿ ಭರ್ತಿ ಮಾಡಿಕೊಳ್ಳುವ ಕೋವಿನ್ ತಂತ್ರಾಶದಲ್ಲಿ ತಾಂತ್ರಿಕ ದೋಷ ಉಂಟಾಯಿತು. ಇದರಿಂದಾಗಿ ಕೆಲಕಾಲ ಲಸಿಕೆ ನೀಡುವಿಕೆ ವಿಳಂಬವಾಯಿತು. ಬಳಿಕ ಮ್ಯಾನುವೆಲ್ ಆಗಿ ಅಧಿಕಾರಿಗಳು ಹೆಸರು ನೋಂದಾಯಿಸಿಕೊಂಡು ಲಸಿಕೆ ನೀಡಿದರು.
ಅಭಿಯಾನ ಯಶಸ್ವಿಯಾಗಿದೆ
"ಜಿಲ್ಲೆಯಲ್ಲಿ ಲಸಿಕೆ ಕಾರ್ಯ ಸುಸೂತ್ರವಾಗಿ ನಡೆದಿದೆ. ಲಸಿಕೆ ವಿತರಣೆಯಿಂದ ಯಾವುದೇ ಅವಘಡಗಳು ಸಂಭವಿಸಿಲ್ಲ. ಲಸಿಕೆ ಉತ್ತಮವಾಗಿದ್ದು, ಯಾವುದೇ ಅಡ್ಡ ಪರಿಣಾಮ ಬೀರದಿರುವುದು ಸಾಬೀತಾಗಿದೆ. ಹೀಗಾಗಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಲಸಿಕೆ ಪಡೆಯಬೇಕು. ಅಲ್ಲದೇ ಲಸಿಕೆ ತೆಗೆದುಕೊಂಡವರಿಗೆ ಹಾಗೂ ಲಸಿಕಾ ವಿತರಣೆ ಅಭಿಯಾನದ ಯಶಸ್ವಿಗೆ ಶ್ರಮಿಸಿದ ಆರೋಗ್ಯ ಇಲಾಖೆಯ ಪ್ರತಿಯೊಬ್ಬರಿಗೂ ಅಭಿನಂದನೆಗಳು" ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶ ಕುಮಾರ್ ಹೇಳಿದ್ದಾರೆ.