ಕೊರೊನಾ 3ನೇ ಅಲೆ ಭೀತಿ; ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಆಸ್ಪತ್ರೆ ಹೆಚ್ಚಳ
ಕಾರವಾರ, ಮೇ 18: ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನಲೆ, ರಾಜ್ಯದಲ್ಲಿ ಹೆಚ್ಚು ಹೆಚ್ಚು ಮಕ್ಕಳ ಆಸ್ಪತ್ರೆ ತೆರೆಯಲು ನಿರ್ಧರಿಸಲಾಗಿದೆ. ಮೂರನೇ ಅಲೆ ತಡೆಯಲು ಎಲ್ಲಾ ರೀತಿಯಲ್ಲಿ ಸರಕಾರ ಸನ್ನದ್ಧವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ತೌಕ್ತೆ ಚಂಡಮಾರುತದಿಂದ ಹಾನಿಯುಂಟಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಕ್ಕಳಿಗಾಗಿ ಬೆಡ್, ಆಕ್ಸಿಜನ್ ಸ್ಟಾಕ್ ಮಾಡಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಸರಕಾರ ಸರಿಯಾಗಿ ಪರೀಕ್ಷೆ ನಡೆಸುತ್ತಿಲ್ಲ ಎಂಬ ವಿರೋಧ ಪಕ್ಷದ ನಾಯಕರ ಟೀಕೆಯಲ್ಲಿ ಯಾವುದೇ ಹುರುಳಿಲ್ಲ. ವಿರೋಧ ಪಕ್ಷಗಳು ಈ ಸಂದರ್ಭವನ್ನು ರಾಜಕೀಯದ ದಾಳವನ್ನಾಗಿ ಮಾಡುತ್ತಿವೆ. ಕೊರೊನಾ ಕುರಿತು ಟೀಕೆ ಮಾಡುತ್ತಾ ಟ್ವಿಟ್ಟರ್ನಲ್ಲಿ ಕಾಲ ಕಳೆಯುತ್ತಿದ್ದಾರೆ. ಹೊರತು ಅವರಿಗೆ ಸಾಮಾಜಿಕ ಕಳಕಳಿಯಿಲ್ಲ ಎಂದರು.
ವಿರೋಧ ಪಕ್ಷದ ಮುಖಂಡರು ನೂರು ಕೋಟಿ ಕೊಟ್ಟಿದ್ದೇವೆ ಎನ್ನುತ್ತಾರೆ, ಅದು ಶಾಸಕರ ಅನುದಾನ. ಅದನ್ನು ಸರಕಾರವೇ ಶಾಸಕರುಗಳಿಗೆ ನೀಡಿರುವುದು. ಸರಕಾರದ ಹಣವನ್ನೇ ಅವರು ಸರಕಾರಕ್ಕೆ ನೀಡುತ್ತಿರುವುದಾಗಿ ಹೇಳುತ್ತಿರುವುದಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.
ರಾಜ್ಯದಲ್ಲಿ ಲಾಕ್ಡೌನ್ ಮುಂದುವರಿಸಿದರೆ ಉತ್ತಮ ಎಂಬ ಅಭಿಪ್ರಾಯವಿದೆ. ಮಹಾರಾಷ್ಟ್ರ, ಕೇರಳ, ದೆಹಲಿಯಲ್ಲಿ ಲಾಕ್ಡೌನ್ ವಿಸ್ತರಣೆ ಮಾಡಿದ್ದಾರೆ. ಹೀಗಾಗಿ ರಾಜ್ಯದಲ್ಲೂ ಈಗಿನ ಪರಿಸ್ಥಿತಿಯಲ್ಲಿ ವಿಸ್ತರಿಸಿದರೆ ಉತ್ತಮವಾಗಿದೆ. ಸರಕಾರ ಕಟ್ಟುನಿಟ್ಟಿನ ಲಾಕ್ಡೌನ್ ನಡೆಸಿದ್ದರಿಂದ ಕೊರೊನಾ ಪ್ರಕರಣ ಕಡಿಮೆಯಾಗುತ್ತಿದೆ ಎಂದು ಆರ್.ಅಶೋಕ್ ಹೇಳಿದರು.
ಪರಿಸ್ಥಿತಿ ಸುಧಾರಣೆಯಾಗುತ್ತಿದ್ದು, ಜನರಿಗೆ ಬೆಡ್ಗಳು ಸಿಗುತ್ತಿದೆ. ಪ್ರಪಂಚದಲ್ಲೇ ಕೊರೊನಾವಿದ್ದು, ಸಾವು- ನೋವು ತಡೆಯುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳುತ್ತಿದೆ. ಸಣ್ಣಪುಟ್ಟ ಕೊರತೆಗಳನ್ನು ಮೂರ್ನಾಲ್ಕು ದಿನಗಳಲ್ಲಿ ಪರಿಹರಿಸುತ್ತೇವೆ. ಶೀಘ್ರದಲ್ಲಿ ನಮ್ಮಲ್ಲೂ ಕೊರೊನಾ ಕಡಿಮೆಯಾಗುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.
ಎರಡನೇ ಹಂತದ ಲಾಕ್ಡೌನ್ ಘೋಷಿಸುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರೇ ಪ್ಯಾಕೇಜ್ ಘೋಷಿಸುತ್ತಾರೆ. ಸದ್ಯ ಪರಿಸ್ಥಿತಿ ಅವಲೋಕಿಸಿ ಪ್ಯಾಕೇಜ್ ಘೋಷಣೆ ಮಾಡಲಾಗುತ್ತದೆ ಎಂದ ಅವರು, ಕೊರೊನಾ ಹಳ್ಳಿಗಳಿಗೆ ತಲುಪಿದ್ದರಿಂದ ವೈದ್ಯರನ್ನು ಹಳ್ಳಿಗಳಿಗೆ ಕಳುಹಿಸುತ್ತಿದ್ದೇವೆ. 15 ವ್ಯಾನ್ ಮುಖಾಂತರ ಪರ್ಯಾಯ ದಿನಗಳಲ್ಲಿ ವೈದ್ಯರು ಹಳ್ಳಿಗಳಿಗೆ ತೆರಳಿ ತಪಾಸಣೆ ನಡೆಸಲಿದ್ದಾರೆ. ಈ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಈಗಾಗಲೇ ಲಸಿಕೆ ನೀಡಿದವರಿಗೆ ಎರಡನೇ ಡೋಸ್ ನೀಡಿದ ಬಳಿಕ 18 ವರ್ಷ ಮೇಲ್ಪಟ್ಟವರಿಗೆ ಮುಂದುವರಿಸುತ್ತೇವೆ ಎಂದು ಆರ್.ಅಶೋಕ್ ಮಾಹಿತಿ ನೀಡಿದರು.
Recommended Video
ಭಟ್ಕಳಕ್ಕೆ ಬಂದ ಅವರು ತೌಕ್ತೆ ಚಂಡಮಾರುತದಿಂದ ಹಾನಿಗೀಡಾದ ತೆಂಗಿನಗುಂಡಿ, ಹೆರ್ತಾರ್, ಮಾವಿನಕುರ್ವೆ ಮುಂತಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.