ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ್ಯಾಯಾಲಯದ ಆದೇಶ ಪಾಲಿಸಲು ಮುಂದಾದ ಕಾರವಾರ ಬಂದರು ಅಧಿಕಾರಿಗಳು

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಫೆಬ್ರವರಿ 02: ಕಾರವಾರ ನಗರದ ಟ್ಯಾಗೋರ್ ಕಡಲ ತೀರದಲ್ಲಿ ಬಂದರು ವಿಸ್ತರಣೆ ಸಂಬಂಧ, ನ್ಯಾಯಾಲಯದ ಆದೇಶದ ಮೇರೆಗೆ ಕಲ್ಲು-ಮಣ್ಣುಗಳನ್ನು ತೆರವು ಮಾಡುವ ಕಾರ್ಯಕ್ಕೆ ಬಂದರು ಇಲಾಖೆಯ ಅಧಿಕಾರಿಗಳು ಶನಿವಾರ ಚಾಲನೆ ನೀಡಿದ್ದಾರೆ.

ಸಾಗರಮಾಲಾ ಯೋಜನೆಯಡಿ ವಾಣಿಜ್ಯ ಬಂದರು ವಿಸ್ತರಣೆಗಾಗಿ 250 ಮೀಟರ್ ಉದ್ದದ ಜಟ್ಟಿ ನಿರ್ಮಾಣ ಕಾರ್ಯಕ್ಕೆ ಬಂದರು ಇಲಾಖೆ ಅಧಿಕಾರಿಗಳು ಮುಂದಾಗಿದ್ದರು. ಸುಮಾರು 125 ಕೋಟಿ ವೆಚ್ಚದಲ್ಲಿ 850 ಮೀಟರ್ ಉದ್ದದ ಅಲೆ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದ್ದು, ಜಟ್ಟಿ ನಿರ್ಮಾಣಕ್ಕಾಗಿ ಜನವರಿ 13 ರಿಂದ ಕಡಲತೀರದಲ್ಲಿ ಕಲ್ಲು-ಮಣ್ಣನ್ನು ಹಾಕುವ ಕಾರ್ಯಕ್ಕೆ ಮುಂದಾಗಿದ್ದರು.

ಕಾರವಾರದಲ್ಲಿ ಏನಿದು ಸಾಗರ ಮಾಲಾ ಯೋಜನೆ?; ಮೀನುಗಾರರ ವಿರೋಧ ಏಕೆ?ಕಾರವಾರದಲ್ಲಿ ಏನಿದು ಸಾಗರ ಮಾಲಾ ಯೋಜನೆ?; ಮೀನುಗಾರರ ವಿರೋಧ ಏಕೆ?

ಯೋಜನೆಯಿಂದ ಕಡಲತೀರಕ್ಕೆ ಹಾನಿಯಾಗಲಿದೆ. ಜೊತೆಗೆ ಮೀನುಗಾರಿಕೆಗೆ ಸಮಸ್ಯೆ ಆಗಲಿದೆ ಎಂದು ಮೀನುಗಾರರು ಹಾಗೂ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕಾಮಗಾರಿ ಪ್ರಾರಂಭಿಸಿದ್ದರು.

ಪರಿಸರ ಇಲಾಖೆ ಅನುಮತಿ ಇಲ್ಲದ್ದಕ್ಕೆ ತಡೆ

ಪರಿಸರ ಇಲಾಖೆ ಅನುಮತಿ ಇಲ್ಲದ್ದಕ್ಕೆ ತಡೆ

ಮೀನುಗಾರರು ಸತತ 12 ದಿನಗಳ ಕಾಲ ಯೋಜನೆ ವಿರುದ್ಧ ನಿರಂತರ ಪ್ರತಿಭಟನೆ ನಡೆಸಿದ್ದರು. ಇದಲ್ಲದೇ ಕಾಮಗಾರಿಗೆ ತಡೆಕೊಡುವಂತೆ ಬೈತಖೋಲ್ ಬಂದರು ನಿರಾಶ್ರಿತರು, ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರ ಸಂಘದವರು ಹೈಕೋರ್ಟ್ ಮೊರೆ ಹೋಗಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಹ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪರಿಸರ ಇಲಾಖೆ ಅನುಮತಿ ಪಡೆಯದೇ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಕಾಮಗಾರಿಗೆ ತಡೆಯಾಜ್ಞೆ ನೀಡಿತ್ತು. ಅಲ್ಲದೇ, ಕಡಲತೀರವನ್ನು ಯಥಾಸ್ಥಿತಿಗೆ ತರುವಂತೆ ಸೂಚಿಸಿ, ಜನವರಿ 24 ರಂದು ತೀರ್ಪನ್ನು ಸಹ ನೀಡಿತ್ತು.

ಕಲ್ಲು-ಮಣ್ಣು ತೆರವುಗೊಳಿಸಿದ ಅಧಿಕಾರಿಗಳು

ಕಲ್ಲು-ಮಣ್ಣು ತೆರವುಗೊಳಿಸಿದ ಅಧಿಕಾರಿಗಳು

ನ್ಯಾಯಾಲಯದ ಆದೇಶದಂತೆ ಶನಿವಾರ ಬೆಳಿಗ್ಗೆಯಿಂದ ಕಡಲತೀರದಲ್ಲಿ ಹಾಕಿದ್ದ ಕಲ್ಲು- ಮಣ್ಣನ್ನು ತೆರವು ಮಾಡುವ ಕಾರ್ಯಕ್ಕೆ ಬಂದರು ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಕಡಲತೀರವನ್ನು ಯಥಾ ಸ್ಥಿತಿಗೆ ತರಲು ಕಲ್ಲು- ಮಣ್ಣುಗಳನ್ನು ತೆರವು ಮಾಡುವ ಕಾರ್ಯ ಪ್ರಾರಂಭಿಸಿದ್ದಕ್ಕೆ ಮೀನುಗಾರರು ಸಂತಸ ವ್ಯಕ್ತಪಡಿಸಿದ್ದಾರೆ.

ಕಾರವಾರ ಬಂದರು ವಿಸ್ತರಣೆ ಯೋಜನೆ ಮರುಪರಿಶೀಲನೆ; ಬೆಂಗಳೂರಿನಲ್ಲಿ ಸಚಿವ, ಶಾಸಕರ ಸಭೆಕಾರವಾರ ಬಂದರು ವಿಸ್ತರಣೆ ಯೋಜನೆ ಮರುಪರಿಶೀಲನೆ; ಬೆಂಗಳೂರಿನಲ್ಲಿ ಸಚಿವ, ಶಾಸಕರ ಸಭೆ

ವಾಣಿಜ್ಯ ಬಂದರು ವಿಸ್ತರಣೆ ಸಂಬಂಧ ಪರಿಸರ ಅನುಮತಿ ಪಡೆಯದ ಹಿನ್ನಲೆಯಲ್ಲಿ ಫೆಬ್ರವರಿ 03 ರಂದು ಬೆಂಗಳೂರಿನಲ್ಲಿ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದ ಸಭೆಯನ್ನು ಕರೆಯಲಾಗಿದೆ. ಯೋಜನೆ ಸಂಬಂಧ ಬಂದರು ಇಲಾಖೆಗೆ ಕಳೆದ ಡಿಸೆಂಬರ್ 20 ರಂದು ಪರಿಸರ ಇಲಾಖೆಯ ಕಾರವಾರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ನೋಟಿಸ್ ಜಾರಿ ಮಾಡಿದ್ದರು.

ಪರಿಸರ ಇಲಾಖೆ ಜೊತೆ ಮಾತುಕತೆಯಲ್ಲಿ 12 ಜನ ಭಾಗಿ

ಪರಿಸರ ಇಲಾಖೆ ಜೊತೆ ಮಾತುಕತೆಯಲ್ಲಿ 12 ಜನ ಭಾಗಿ

ಅನುಮತಿ ಪಡೆಯದೇ ಕಾಮಗಾರಿ ನಡೆಸದಂತೆ ನೋಟಿಸ್ ನಲ್ಲಿ ತಿಳಿಸಲಾಗಿತ್ತು. ಇದೇ ವಿಚಾರವನ್ನು ನಿರ್ಲಕ್ಷಿಸಿ ಕಾಮಗಾರಿ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇರೆಗೆ ಕಾಮಗಾರಿಗೆ ತಡೆ ಸಿಕ್ಕಿದೆ.

ಈ ಹಿನ್ನೆಲೆಯಲ್ಲಿ ಇಂದು ಪರಿಸರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಗೋಗಿ ನೇತೃತ್ವದಲ್ಲಿ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಕಾರವಾರ ಜಿಲ್ಲಾಧಿಕಾರಿ, ಮೀನುಗಾರ ಮುಖಂಡರು, ಕಡಲ ಜೀವಶಾಸ್ತ್ರ ತಜ್ಞರು ಸೇರಿದಂತೆ 12 ಜನರು ಪಾಲ್ಗೊಳ್ಳಲು ತಿಳಿಸಲಾಗಿದೆ.

ಕೂಡಲೇ ಮೀನುಗಾರಿಕಾ ಸಚಿವರು ಮಧ್ಯ ಪ್ರವೇಶಿಸಬೇಕು

ಕೂಡಲೇ ಮೀನುಗಾರಿಕಾ ಸಚಿವರು ಮಧ್ಯ ಪ್ರವೇಶಿಸಬೇಕು

ಸಾಗರಮಾಲಾ ಬಂದರು ಯೋಜನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಪರಿಸರ ಇಲಾಖೆಯ ಅನುಮತಿಯೇ ಇಲ್ಲದೇ ಸಾಗರಮಾಲಾ ಯೋಜನೆಯನ್ನು ಸರ್ಕಾರ ಕೈಗೆತ್ತುಕೊಂಡಿರುವುದು ತಪ್ಪು ಎಂದು ಹೇಳಿದರು. ಯೋಜನೆಗೆ ಈಗಾಗಲೇ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಮೀನುಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮಕ್ಕೆ ಮುಂದಾಗಬೇಕಾಗಿತ್ತು ಎಂದರು.

ಜಿಲ್ಲೆಯಲ್ಲಿ ಈ ಹಿಂದೆ ಹಲವಾರು ಯೋಜನೆಗಳು ಬಂದಿದೆ. ಕೈಗಾ, ಸೀಬರ್ಡ್ ಸೇರಿದಂತೆ ಹಲವು ಯೋಜನೆ ಬಂದಾಗ ನಾನೇ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಯನ್ನು ಮಾಡಿದ್ದೇನೆ. ಸಾಗರಮಾಲಾ ಯೋಜನೆ ಸಂಬಂಧ ಜಿಲ್ಲಾಡಳಿತದ ಮೇಲೆ ಹೆಚ್ಚಿನ ಜವಬ್ದಾರಿ ನೀಡಿದ್ದಾರೆ. ಆದರೆ, ಮುಖ್ಯಮಂತ್ರಿ, ಮೀನುಗಾರಿಕಾ ಸಚಿವರು ಮಧ್ಯ ಪ್ರವೇಶಿಸಬೇಕು. ಜಿಲ್ಲೆಗೆ ಆಗಮಿಸಿ ಮೀನುಗಾರರ ಜೊತೆ ಯೋಜನೆ ಕುರಿತು ಸಮಾಲೋಚನೆ ಮಾಡಬೇಕಿತ್ತು. ಈ ಕೆಲಸವನ್ನು ಮಾಡಿಲ್ಲ ಎಂದು ತಿಳಿಸಿದರು.

English summary
Officials of the Karwar port department have been charged Saturday with clearing stone, mud on a court order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X