ಆರೋಪಿಗಳ ಮೇಲೆ ಪೊಲೀಸರ ಹಲ್ಲೆ; ಕಾರಣ ಕೇಳಿದ ನ್ಯಾಯಾಲಯ
ಕಾರವಾರ, ನವೆಂಬರ್ 12: ಉದ್ಯೋಗ ಕೊಡಿಸುವುದಾಗಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ಆರೋಪಿಯ ಮೇಲೆ ಪೊಲೀಸರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವತಃ ಆರೋಪಿಯೇ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದು, ಪೊಲೀಸರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದು, ಆರೋಪಿಗೆ ವೈದ್ಯಕೀಯ ಚಿಕಿತ್ಸೆಗೆ ಸೂಚಿಸಿದೆ.
ಬ್ರಿಟಿಷ್ ಏರ್ಲೈನ್ಸ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆಂದು ತಾಲೂಕಿನ ಶಿರವಾಡ ಮೂಲದ ಮಾರ್ವಿನ್ ಡಿಸೋಜಾ ಹಾಗೂ ಆತನ ಗೆಳತಿ, ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದ ಅಂಕಿತಾ ರಾಯ್ಕರ್ ಎನ್ನುವವರ ಮೇಲೆ ಸೆಪ್ಟೆಂಬರ್ 14ರಂದು ಇಲ್ಲಿನ ನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು.
ಪತ್ನಿಯನ್ನು ಮನೆಗೆ ಕರೆತರಲು ಐಪಿಎಸ್ ವೇಷ ತೊಟ್ಟ; ಮುಂದೇನಾಯ್ತು?
ಮಾರ್ವಿನ್ ಹಾಗೂ ಅಂಕಿತಾ ನಿರೀಕ್ಷಣಾ ಜಾಮೀನಿಗೆ ನ್ಯಾಯಾಲಯದ ಮೊರೆ ಹೋಗಿದ್ದು, ಅಕ್ಟೋಬರ್ 24ರಂದು ನಿರೀಕ್ಷಣಾ ಜಾಮೀನು ಸಹ ದೊರೆತಿತ್ತು. ಪ್ರಕರಣದ ವಿಚಾರಣೆ ಸಂಬಂಧ ಠಾಣೆಗೆ ಹಾಜರಾಗುವಂತೆಯೂ ನ್ಯಾಯಾಲಯ ಸೂಚನೆ ನೀಡಿತ್ತು. ಅದರಂತೆ ನವೆಂಬರ್ 8ರಂದು ವಿಚಾರಣೆಗೆಂದು ನಗರ ಠಾಣೆಗೆ ಬಂದಿದ್ದ ವೇಳೆ ಮಾರ್ವಿನ್ ಹಾಗೂ ಅಂಕಿತಾ ಮೇಲೆ ಮತ್ತೊಂದು ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಈ ವೇಳೆ ವಿಚಾರಣೆ ನೆಪದಲ್ಲಿ ಮಾರ್ವಿನ್ ಮೇಲೆ ನಗರ ಠಾಣೆಯ ಪಿಎಸ್ ಐ ನವೀನ್ ನಾಯ್ಕ ಹಲ್ಲೆ ಮಾಡಿದ್ದಾರೆಂದು ಆತನ ಪೋಷಕರು ಆರೋಪಿಸಿದ್ದಾರೆ. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕೋರಿ ಆರೋಪಿ ಪರ ವಕೀಲರು ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದು, ವೈದ್ಯಕೀಯ ಚಿಕಿತ್ಸೆ ಕೊಡಿಸುವಂತೆ ಜೈಲಿನ ಮೇಲ್ವಿಚಾರಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಬ್ಯಾಂಕ್ ವಂಚನೆ: 35 ಕೇಸ್, 7 ಸಾವಿರ ಕೋಟಿ ವಂಚನೆ, 169 ಕಡೆ ದಾಳಿ
ಬಂಧನಕ್ಕೊಳಗಾಗಿರುವ ಅಂಕಿತಾ ರಾಯ್ಕರ್ ಅವರೊಂದಿಗೂ ಪೊಲೀಸರು ವಿಚಾರಣೆ ವೇಳೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆಕೆಯ ಸಹೋದರ ಅಕ್ಷಯ್ ರಾಯ್ಕರ್ ಆರೋಪಿಸಿದ್ದಾರೆ. 'ಅಂಕಿತಾಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಠಾಣೆಯಲ್ಲಿ ಅವಳನ್ನು ಭೇಟಿ ಮಾಡಲೂ ನಮಗೆ ಅವಕಾಶ ನೀಡಿಲ್ಲ. ಆಕೆಯನ್ನು ಕೋಣೆಯಲ್ಲಿ ಒಬ್ಬಳನ್ನೇ ಕೂಡಿ ಹಾಕಿ ವಿಚಾರಣೆ ನಡೆಲಾಗಿದೆ. ಮಾನಂಭಂಗದ ಬೆದರಿಕೆ ಒಡ್ಡಲಾಗಿದೆ. ಇದರಿಂದಾಗಿ ಆಕೆ ಮಾನಸಿಕವಾಗಿ ಕುಗ್ಗಿದ್ದು, ಪೊಲೀಸರ ದಬ್ಬಾಳಿಕೆಯಿಂದ ಅವಳನ್ನು ರಕ್ಷಿಸಬೇಕು' ಎಂದೂ ಅಕ್ಷಯ್ ಮನವಿ ಮಾಡಿಕೊಂಡಿದ್ದಾರೆ.