ಉತ್ತರ ಕನ್ನಡದಲ್ಲಿ ಗರ್ಭಿಣಿಗೆ ಕೊರೊನಾ ಪಾಸಿಟಿವ್: ಹೇಗೆ ಬಂತು?
ಕಾರವಾರ, ಏಪ್ರಿಲ್ 08: ದೇಶದಲ್ಲಿ ತಲ್ಲಣ ಮೂಡಿಸಿರುವ ಕೊರೊನಾ ಸೋಂಕು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಡಿವಾಣಕ್ಕೆ ಬರುತ್ತಿದೆ ಎಂದು ನಿಟ್ಟುಸಿರು ಬಿಡುತ್ತಿದ್ದಂತೆ, ಭಟ್ಕಳದಲ್ಲಿ ಗರ್ಭಿಣಿ ಮಹಿಳೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10 ಕ್ಕೆ ಏರಿದೆ.
26 ವರ್ಷ ವಯಸ್ಸಿನ, ಐದು ತಿಂಗಳು ಗರ್ಭಿಣಿ ಮಹಿಳೆಗೆ ಸೋಂಕು ಇರುವುದು ದೃಢಪಟ್ಟಿದೆ. ಈಕೆಗೆ ಇಬ್ಬರು ಮಕ್ಕಳು ಇದ್ದು, ಈಕೆಯ ಪತಿ ದುಬೈನಿಂದ ವಾಪಸ್ಸಾಗಿದ್ದಾನೆ. ಆದರೆ, ಪತಿಯ ವರದಿ ನೆಗೆಟಿವ್ ಬಂದಿದೆ. ದುಬೈನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಈಕೆಯ ಪತಿ, ಮಾರ್ಚ್ 17 ರಂದು ವಿಮಾನದ ಮೂಲಕ ಮುಂಬೈಗೆ ಬಂದಿಳಿದಿದ್ದ.
ಕೊರೊನಾ: ನಾಡಿನ ಶಕ್ತಿ ಕ್ಷೇತ್ರ ಯಕ್ಷಿ ಚೌಡೇಶ್ವರಿ ಸನ್ನಿಧಾನದಲ್ಲಿ ಬಂದ ಸೂಚನೆ
ಮುಂಬೈನಲ್ಲಿ ಸುಮಾರು ನಾಲ್ಕು ದಿನ ಉಳಿದಿದ್ದ ಈತ, ನಂತರ ರೈಲಿನಲ್ಲಿ ಭಟ್ಕಳಕ್ಕೆ ಬಂದಿದ್ದ. ಭಟ್ಕಳ ರೈಲು ನಿಲ್ದಾಣದಿಂದ ಸ್ನೇಹಿತನ ಬೈಕ್ ನಲ್ಲಿ ಮನೆಗೆ ತೆರಳಿದ್ದ. ದುಬೈನಿಂದ ಬಂದವನಾಗಿದ್ದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಈತನ ಕೈಗೆ ಹೋಮ್ ಕ್ವಾರಂಟೈನ್ ಮುದ್ರೆ ಹಾಕಿದ್ದರು.
ಪತ್ನಿಯಲ್ಲಿ ಕೊರೊನಾ ಪಾಸಿಟಿವ್ ದೃಢ
ಮಾ.31 ರಂದು ಗರ್ಭಿಣಿ ಪತ್ನಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಆಕೆಯ ಪತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಆದರೆ, ಆಸ್ಪತ್ರೆಯ ಸಿಬ್ಬಂದಿ ಪತಿಯ ಕೈ ಮೇಲೆ ಹೋಮ್ ಕ್ವಾರಂಟೈನ್ ಮುದ್ರೆ ಇರುವುದನ್ನು ಗಮನಿಸಿ ವೈದ್ಯರ ಗಮನಕ್ಕೆ ತಂದಿದ್ದಾರೆ. ನಂತರ ಇಬ್ಬರನ್ನು ಭಟ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಇಬ್ಬರ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಈ ವೇಳೆ ಪತ್ನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಪತಿಯ ವರದಿ ನೆಗೆಟಿವ್ ಬಂದಿದೆ. ಇದೀಗ ಪತಿಯ ಗಂಟಲಿನ ದ್ರವವನ್ನು ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಲಾಗಿದೆ.
ಗರ್ಭಿಣಿ ಪತಿಗೆ ರೋಗ ನಿರೋಧಕ ಶಕ್ತಿ ಅಧಿಕ ಇರಬಹುದು
ಸೋಂಕಿತ ಗರ್ಭಿಣಿ ಮಹಿಳೆಯನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೊಮ್ಮೆ ಕಳುಹಿಸಲಾದ ಪತಿಯ ಗಂಟಲಿನ ದ್ರವದ ಮಾದರಿಯ ವರದಿ ಬರಬೇಕಿದ್ದು, ಅಲ್ಲಿಯವರೆಗೆ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಮುಂಜಾಗ್ರತೆ ವಹಿಸಿ ಮೀನುಗಾರಿಕೆಗೆ ಅವಕಾಶ ನೀಡಲಿ: ಅಸ್ನೋಟಿಕರ್
ಗರ್ಭಿಣಿಯ ಪತಿಗೆ ಕೊರೊನಾ ಇದ್ದು, ರೋಗ ನಿರೋಧಕ ಶಕ್ತಿ ಅಧಿಕವಾಗಿರುವುದರಿಂದ ಅದು ಆತನಲ್ಲಿ ಕಾಣಿಸಿಕೊಳ್ಳದೇ ಇರಬಹುದು ಅಥವಾ ಆತನಲ್ಲಿದ್ದ ವೈರಾಣು ನಾಶವಾಗಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಆತ 14 ದಿನಗಳ ಹೋಮ್ ಕ್ವಾರಂಟೈನ್ ಪೂರೈಸಿದ ಬಳಿಕ ಪತ್ನಿಯೊಂದಿಗೆ ಸಂಪರ್ಕ ಹೊಂದಿದ್ದು, ಈ ವೇಳೆ ವೈರಾಣು ಆಕೆಗೆ ತಗುಲಿರುವ ಸಾಧ್ಯತೆಯೂ ಇದೆ ಎಂದು ಶಂಕಿಸಲಾಗಿದೆ.
ದುಬೈಯಿಂದ ಬಂದರೂ ಪತಿಯಲ್ಲಿ ಕೊರೊನಾ ನೆಗಟಿವ್
ಮಂಗಳವಾರ ರಾತ್ರಿ ವೇಳೆಗೆ ಭಟ್ಕಳ ಮೂಲದ ಗರ್ಭಿಣಿ ಮಹಿಳೆಗೆ ಸೋಂಕು ಇರುವುದು ದೃಢಪಟ್ಟಿರುವುದರಿಂದ ಜಿಲ್ಲಾಡಳಿತವೂ ಆತಂಕಕ್ಕೆ ಒಳಗಾಗಿದೆ.
ಕೊರೋನಾ ನಿಯಂತ್ರಣಕ್ಕೆ ಬಂದಿದೆ ಎಂದು ನಿಟ್ಟಿಸಿರು ಬಿಡುವಷ್ಟರ ಹೊತ್ತಲ್ಲೇ ಇದೊಂದು ಪ್ರಕರಣ ದೃಢಪಟ್ಟಿರುವುದು ಎಲ್ಲರಲ್ಲೂ ಆತಂಕ ಸೃಷ್ಟಿಸಿದೆ. ಅದು ಕೂಡ ದುಬೈನಿಂದ ವಾಪಸ್ಸಾದ ಪತಿಯಲ್ಲಿ ಸೋಂಕು ಕಾಣಿಸಿಕೊಳ್ಳದೆ, ಆತನ ಪತ್ನಿಯಲ್ಲಿ, ಅದು ಕೂಡ ಸುಮಾರು 10 ದಿನಗಳ ಬಳಿಕ ಸೋಂಕು ಇರುವುದು ದೃಢಪಟ್ಟಿರುವುದು ಕೂಡ ಇದೀಗ ಯಾರಲ್ಲಿ ಸೋಂಕು ಇದೆ ಎನ್ನುವುದನ್ನು ಗುರುತಿಸಲಾಗದೆ ತಲೆನೋವಾಗಿ ಪರಿಣಮಿಸಿದೆ.
ಪತಿಯ ಸಂಪರ್ಕದಲ್ಲಿದ್ದವರ ಹುಡುಕಾಟ ಶುರು
ಸೋಂಕಿತ ಗರ್ಭಿಣಿಯು ಕೆಲವು ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ತೆರಳಿದ್ದರು ಎನ್ನಲಾಗಿದ್ದು, ಈ ಕುರಿತಾದ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಪ್ರಕರಣದಿಂದಾಗಿ ಎಚ್ಚೆತ್ತಿರುವ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ, ಗರ್ಭಿಣಿ ಹಾಗೂ ಆಕೆಯ ಪತಿಯ ಸಂಪರ್ಕದಲ್ಲಿದ್ದವರ ಹುಡುಕಾಟ ಶುರು ಮಾಡಿದೆ. ವಿದೇಶದಿಂದ ಜಿಲ್ಲೆಗೆ, ಅದರಲ್ಲೂ ವಿಶೇಷವಾಗಿ ಭಟ್ಕಳಕ್ಕೆ ವಾಪಸ್ಸಾದವರ ಕುಟುಂಬದ ಸದಸ್ಯರನ್ನೂ ತಪಾಸಣೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ.