ಕಾರವಾರ: ಯಾರ ಸಂಪರ್ಕ, ಟ್ರಾವೆಲ್ ಹಿಸ್ಟರಿ ಇಲ್ಲದೇ ದೃಢಪಡುತ್ತಿದೆ ಕೊರೊನಾ ವೈರಸ್
ಕಾರವಾರ, ಜುಲೈ 12: ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಲವರಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲದಿರುವುದು ಇಡೀ ತಾಲೂಕಿನ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆ ತಾಲೂಕಿನಲ್ಲಿ ಕೊರೊನಾ ವೈರಸ್ ಸಮುದಾಯಕ್ಕೆ ಹರಡಿದೆಯೇ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಶುಕ್ರವಾರ ಕಾರವಾರದ 10 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಆರು ಮಂದಿಗೆ ಸೋಂಕು ಹೇಗೆ ತಗುಲಿದೆ ಎಂಬ ಹುಡುಕಾಟದಲ್ಲಿ ಅಧಿಕಾರಿಗಳು ತಲೆ ಕೆಡೆಸಿಕೊಂಡಿದ್ದಾರೆ. ಸೋಂಕಿತರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ, ಜೊತೆಗೆ ಸೋಂಕು ದೃಢಪಟ್ಟ ಯಾರ ಸಂಪರ್ಕವನ್ನೂ ಮಾಡಿಲ್ಲ. ಸಮುದಾಯಕ್ಕೆ ಸೋಂಕು ಹರಡಿರುವುದರಿಂದ ಹೀಗೆ ಟ್ರಾವೆಲ್ ಹಿಸ್ಟರಿ ಇಲ್ಲದೆಯೂ ಸೋಂಕು ದೃಢಪಡುತ್ತಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ನೌಕಾನೆಲೆ, ಕೈಗಾದಲ್ಲಿ ಹೊರರಾಜ್ಯದವರು ಉದ್ಯೋಗ ಮಾಡುತ್ತಿದ್ದಾರೆ
ಕಾರವಾರ ನಗರಕ್ಕೆ ಪ್ರತಿನಿತ್ಯ ಹಲವಾರು ಜನರು ಬರುತ್ತಿದ್ದು, ಅದರಲ್ಲೂ ಹೊರರಾಜ್ಯದಿಂದ ಬಂದವರು ಹಲವರು ನಗರದಲ್ಲಿ ಓಡಾಡಿ ಹೋಗಿರುತ್ತಾರೆ. ನೌಕಾನೆಲೆ, ಕೈಗಾದಲ್ಲಿ ಉದ್ಯೋಗ ಮಾಡುತ್ತಿರುವ ಹೊರರಾಜ್ಯದವರು ನಗರದಲ್ಲಿ ಓಡಾಟ ಮಾಡಿರುತ್ತಾರೆ. ಅಂಥವರಿಗೆ ಸೋಂಕು ಇದ್ದು, ಅವರು ನಗರದಲ್ಲಿ ಓಡಾಟ ಮಾಡಿದ್ದರೆ ಅವರಿಂದ ಯಾವ ಟ್ರಾವೆಲ್ ಹಿಸ್ಟರಿಯೇ ಇಲ್ಲದೇ ಇರುವವರಿಗೆ ಸೋಂಕು ತಗುಲುವ ಸಾಧ್ಯತೆ ಇದೆ ಎನ್ನುವ ಮಾತುಗಳನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.
ಇವರು ಉತ್ತರ ಕನ್ನಡ ಜಿಲ್ಲೆಯ 'ಕೊರೊನಾ ವಾರಿಯರ್ಸ್'...
ಜನರ ಓಡಾಟ ಸೋಂಕು ಸಮುದಾಯಕ್ಕೆ ಕಾಲಿಡಲು ಕಾರಣ
ಸರ್ಕಾರದ ಸಾಂಸ್ಥಿಕ ಕ್ವಾರಂಟೈನ್ ನಿಯಮ ಸಡಿಲಿಕೆ ಮಾಡಿದ ನಂತರ ಹೊರ ರಾಜ್ಯದಿಂದ ಬಂದವರು ಮನೆಯಲ್ಲಿಯೇ ತಂಗುತ್ತಿದ್ದಾರೆ. ಹೋಂ ಕ್ವಾರಂಟೈನ್ ಎಂದು ಮಾಡಿದ್ದರೂ ಅದಕ್ಕೆ ಬೆಲೆ ಕೊಡದೇ ಹೊರಗಡೆ ಓಡಾಟ ನಡೆಸುತ್ತಿದ್ದು, ಇದು ಸಹ ಸೋಂಕು ಸಮುದಾಯಕ್ಕೆ ಕಾಲಿಡಲು ಕಾರಣವಾಗುತ್ತಿದೆಯೇ ಎನ್ನುವ ಅನುಮಾನ ಮೂಡುತ್ತಿದೆ. ಈ ಹಿಂದೆ ಸೋಂಕು ದೃಢಪಟ್ಟ ಹಲವರು ನಗರದ ಅಂಗಡಿಗಳಿಗೆ ಬಂದು ಹೋದ ಮಾಹಿತಿ ನೀಡಿದ್ದು, ಸೋಂಕಿತ ಯಾವ ಪ್ರದೇಶಕ್ಕೆ ಬಂದು ಓಡಾಟ ನಡೆಸಿದ್ದಾನೆಯೋ ಅಂತಹ ಪ್ರದೇಶದಲ್ಲಿ ಎಚ್ಚರಿಸುವ ಕಾರ್ಯವನ್ನು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಮಾಡಲಾಗುತ್ತಿಲ್ಲ.
ಸೋಂಕಿತರಿಗೆ ಟ್ರಾವೆಲ್ ಹಿಸ್ಟರಿಯಿಲ್ಲ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಹೊನ್ನಾವರ, ಯಲ್ಲಾಪುರ ಸೇರಿದಂತೆ ಕೆಲ ತಾಲೂಕಿನಲ್ಲಿ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿರುವವರಲ್ಲೂ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಕಳೆದ ಒಂದು ವಾರದಿಂದ ಪತ್ತೆಯಾದ ಇತರೆ ತಾಲೂಕಿನ ಕೆಲ ಪ್ರಕರಣದಲ್ಲಿ ಸೋಂಕಿತರಿಗೆ ಟ್ರಾವೆಲ್ ಹಿಸ್ಟರಿಯಿಲ್ಲ. ಜೊತೆಗೆ ಯಾರ ಸಂಪರ್ಕವೂ ಇಲ್ಲ. ಆದರೂ ಸೋಂಕು ದೃಢಪಡುತ್ತಿದ್ದು, ಇದು ಜಿಲ್ಲಾಡಳಿತಕ್ಕೆ ಸಹ ತಲೆ ನೋವಾಗಿದೆ.
ಸೋಂಕಿನ ಲಕ್ಷಣವಿದ್ದರೂ ಮದುವೆಗಾಗಿ ವಿಷಯ ಮುಚ್ಚಿಟ್ಟಿದ್ದೇ ತಪ್ಪಾಯ್ತು
ಮಾಸ್ಕ್, ಸ್ಯಾನಿಟೈಸರ್ ಬಳಸುವುದು ಉತ್ತಮ
ಏನೂ ತಿಳಿಯದೇ ಓಡಾಟ ನಡೆಸುವವರಿಗೆ ಸೋಂಕು ಹರಡುತ್ತಿದ್ದು, ಜನರು ಈ ಬಗ್ಗೆ ಮುಂಜಾಗ್ರತೆ ವಹಿಸಬೇಕು ಎನ್ನುವುದು ಕೆಲವರ ಅಭಿಪ್ರಾಯವಾಗಿದೆ. ಜನರು ನಮ್ಮೂರಿನಲ್ಲಿ ಕೊರೊನಾ ಬಂದಿಲ್ಲ ಎಂದು ಮೈಮರೆತರೆ ಸೋಂಕು ಯಾರಿಗೆ ಬೇಕಾದರೂ ಬರಬಹುದು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಉತ್ತಮ. ಆದಷ್ಟು ಸಾಮಾಜಿಕ ಅಂತರಕ್ಕೆ ಹೆಚ್ಚು ಒತ್ತು ಕೊಡಬೇಕು ಎನ್ನುವುದು ಹಲವರ ಸಲಹೆಯಾಗಿದೆ.