ಹಾಟ್ಸ್ಪಾಟ್ ಹಣೆಪಟ್ಟಿಯಿಂದ ಹೊರ ಬಂದ ಉತ್ತರ ಕನ್ನಡ; ಕೋವಿಡ್ ಸೋಂಕಿನ ಪ್ರಮಾಣ ಶೇ 2ಕ್ಕೆ ಇಳಿಕೆ
ಕಾರವಾರ, ಅಕ್ಟೋಬರ್ 26: ಸೋಂಕಿತರ ಪ್ರಮಾಣ ಶೇ 12ರವರೆಗೆ ತಲುಪಿ ಕೋವಿಡ್ ಹಾಟ್ಸ್ಪಾಟ್ ಎಂದು ಗುರುತಿಸಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲೀಗ ಪ್ರತಿದಿನ ಹೊಸ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗುತ್ತಿದ್ದು, ಸೋಂಕಿನ ಪ್ರಮಾಣವೂ ಶೇ 2ಕ್ಕೆ ಇಳಿಕೆಯಾಗಿದೆ. ಆದರೆ, ಹಬ್ಬ ಹರಿದಿನಗಳಲ್ಲಿ ಮೈಮರೆತರೆ ಈ ಪ್ರಮಾಣ ಮತ್ತೆ ಏರಿಕೆಯಾಗುವ ಸಾಧ್ಯತೆಯೂ ಇದೆ ಎಂದು ಎಚ್ಚರಿಕೆ ನೀಡಿದೆ ಜಿಲ್ಲಾಡಳಿತ.
ದೇಶ, ರಾಜ್ಯದಲ್ಲೂ ಕೋವಿಡ್ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದು, ಉತ್ತರ ಕನ್ನಡ ಕೂಡ ಇದರ ಹೊರತಾಗಿಲ್ಲ. ಸೋಂಕು ಹರಡುವಿಕೆ ಪ್ರಮಾಣ ತಿಂಗಳಿನಿಂದ ಗಣನೀಯವಾಗಿ ಕಡಿಮೆ ಆಗುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಆರಂಭದಿಂದ ಇಲ್ಲಿಯವರೆಗೂ 1,49,183 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಆರಂಭದ ಕೆಲ ತಿಂಗಳು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ ಕೊರೊನಾ ಹಾಟ್ಸ್ಪಾಟ್ ಜಿಲ್ಲೆಗಳ ಪಟ್ಟಿಗೆ ಸೇರಿಕೊಂಡಿತ್ತು.
ಕಾರವಾರ ಕೋವಿಡ್ ಆಸ್ಪತ್ರೆಗೆ ಬಂತು 'ಕೇರ್ ನೇಶನ್ ಟೆಲಿ ಐಸಿಯು ಕಾರ್ಟ್': ಏನಿದರ ಬಳಕೆ?
ಮಧ್ಯೆ ಒಂದೆರಡು ತಿಂಗಳು ಸ್ವಲ್ಪ ಇಳಿಕೆಯಾದಂತೆ ಕಂಡರೂ, ಮತ್ತೆ ಆಗಸ್ಟ್, ಸೆಪ್ಟೆಂಬರ್ನಲ್ಲಿ ಅತಿ ಹೆಚ್ಚಿನ ಹೊಸ ಸೋಂಕಿತರು ಪತ್ತೆಯಾಗಿ ಜಿಲ್ಲೆಯನ್ನು ಮತ್ತೆ ಹಾಟ್ಸ್ಪಾಟ್ ಮಾಡಿತ್ತು. ಈ ಅವಧಿಯಲ್ಲಿ ಸಾವಿನ ಸಂಖ್ಯೆಯಲ್ಲೂ ಗಣನೀಯವಾಗಿ ಹೆಚ್ಚಾಗಿ ಜನರಲ್ಲೂ ಆತಂಕ ಸೃಷ್ಟಿ ಮಾಡಿತ್ತು.
ಆಗಸ್ಟ್-ಸೆಪ್ಟೆಂಬರ್ ನಲ್ಲಿ ಶೇ 12 ಸೋಂಕಿನ ಪ್ರಮಾಣ
ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಸೋಂಕಿನ ಪ್ರಮಾಣ ಶೇ 12ಕ್ಕೆ ತಲುಪಿತ್ತು. ಒಂದೆಡೆ ಪ್ರತಿ ದಿನ 250ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ದೃಢಪಡುತ್ತಿದ್ದರೆ, ಮತ್ತೊಂದೆಡೆ 7ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿದ್ದವು. ಈ ಪ್ರಮಾಣದಲ್ಲಿ ಈಗ ಗಣನೀಯವಾಗಿ ಇಳಿಕೆಯಾಗುತ್ತಿದೆ. ಪ್ರತಿ ದಿನ 100ರ ಒಳಗೆ ಕೇಸುಗಳು ಪತ್ತೆಯಾಗುತ್ತಿದ್ದು, ಸಾವಿನ ಪ್ರಮಾಣವೂ ಕಡಿಮೆಯಾಗಿದೆ. ಜತೆಗೆ, ಕೆಲವೊಂದು ತಾಲೂಕುಗಳಲ್ಲಿ ವಾರಗಟ್ಟಲೆ ಪ್ರಕರಣಗಳೇ ಇಲ್ಲವಾಗಿಬಿಟ್ಟಿದೆ.
ಎಚ್ಚರ ತಪ್ಪಿದರೆ ಅಪಾಯ: ಜಿಲ್ಲಾಡಳಿತದ ಎಚ್ಚರಿಕೆ
ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದು, ಜನತೆ ಇನ್ನಷ್ಟು ಎಚ್ಚರಿಕೆ ವಹಿಸಿದರೆ ಶೀಘ್ರ ಕೋವಿಡ್ ಮುಕ್ತ ಜಿಲ್ಲೆ ಮಾಡಬಹುದು. ಕೊರೊನಾ ಕಡಿಮೆ ಆಗಿದೆ ಎಂದು ಅನಗತ್ಯ ಓಡಾಟ ಮಾಡುವುದು, ಎಚ್ಚರ ತಪ್ಪುವುದು ಸಲ್ಲ ಎಂದು ಜಿಲ್ಲಾಡಳಿತ ಎಚ್ಚರಿಸಿದೆ. ಮಾಸ್ಕ್ ಧರಿಸುವುದು, ಎರಡು ಗಜ ದೈಹಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಸುವುದರಿಂದ ಸೋಂಕು ಹರಡುವಿಕೆಯನ್ನು ಇನ್ನಷ್ಟು ತಡೆಯಬಹುದಾಗಿದೆ ಎನ್ನುತ್ತಾರೆ ವೈದ್ಯರು. ಜಿಲ್ಲೆಗೆ ನೀಡಿದ ಕೋವಿಡ್ ಪರೀಕ್ಷಾ ಗುರಿಯನ್ನು ಮೀರಿ ಸಾಧನೆ ಮಾಡಲಾಗಿದೆ. ಆದರೆ, ಸಾಲು ಸಾಲಾಗಿ ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೋವಿಡ್ ನ ಎಲ್ಲಾ ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಅನುಸರಿಸಬೇಕು. ನಿರ್ಲಕ್ಷಿಸಿದ್ದಲ್ಲಿ ದೊಡ್ಡ ಗಂಡಾಂತರಕ್ಕೆ ನಾವೇ ದಾರಿ ಮಾಡಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್.
ಕಾರವಾರ; ವಿದ್ಯಾರ್ಥಿಗಳ ಮನವೊಲಿಸಲು ಊರೂರು ಸುತ್ತುತ್ತಿರುವ ಉಪನ್ಯಾಸಕರು
ರಾಜ್ಯದಲ್ಲೇ 3ನೇ ಸ್ಥಾನದಲ್ಲಿ
ಅತಿ ಕಡಿಮೆ ಸೋಂಕಿತ ಪ್ರಕರಣಗಳು ವರದಿಯಾಗುತ್ತಿರುವ ಜಿಲ್ಲೆಗಳ ಪೈಕಿ ಉತ್ತರ ಕನ್ನಡ 3ನೇ ಸ್ಥಾನದಲ್ಲಿದೆ. ಬೀದರ್ ಮತ್ತು ಗದಗ ಶೇ 1ರಷ್ಟು ಸೋಂಕು ಪ್ರಮಾಣ ದರ ಹೊಂದಿ ಮೊದಲ ಎರಡು ಸ್ಥಾನಗಳಲ್ಲಿದ್ದರೆ, ಉತ್ತರ ಕನ್ನಡ ಶೇ 2ರಷ್ಟು ಸೋಂಕು ಪ್ರಮಾಣ ದರದ ಮೂಲಕ 3ನೇ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ.
ಶೇ 90ರಷ್ಟು ಸೋಂಕಿತರು ಗುಣಮುಖ
ಜಿಲ್ಲೆಯಲ್ಲಿ ಅ.25ರ ವರದಿಯಂತೆ ಈವರೆಗೆ 12596 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದರೆ, ಶೇ 90ರಷ್ಟು ಸೋಂಕಿತರು, ಅಂದರೆ 11393 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಒಟ್ಟು 1043 ಸಕ್ರಿಯ ಪ್ರಕರಣಗಳು ಸದ್ಯ ಜಿಲ್ಲೆಯಲ್ಲಿದ್ದು, 160 ಮಂದಿ ಮೃತಪಟ್ಟಿದ್ದಾರೆ. ಈವರೆಗೆ 406 ಮಂದಿ ಹೋಮ್ ಐಸೋಲೇಶನ್ ನಲ್ಲಿದ್ದಾರೆ.
Recommended Video