ಕಾರವಾರ ಕೋವಿಡ್ ವಾರ್ಡ್ ನಿಂದ ಮೊಬೈಲ್ ಕದ್ದು ಸೋಂಕಿತ ಪರಾರಿ! ಹೈರಾಣದ ಪೊಲೀಸರು
ಕಾರವಾರ, ಜೂನ್ 29: ಇಲ್ಲಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್- 19 ವಾರ್ಡಿನಿಂದ ಸೋಂಕಿತನೊಬ್ಬ ಪರಾರಿಯಾಗಿ ಕೆಲ ಕಾಲ ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ.
Recommended Video
ಕಳವು ಪ್ರಕರಣದ ಧಾರವಾಡ ಮೂಲದ 38 ವರ್ಷದ ಆರೋಪಿಯನ್ನು ಶಿರಸಿಯ ಉಪ ಬಂಧೀಖಾನೆಯಲ್ಲಿ ಇಡಲಾಗಿತ್ತು. ಆತನಿಗೆ ಸೋಂಕಿನ ಲಕ್ಷಣ ಇದ್ದ ಕಾರಣ ಪರೀಕ್ಷಿಸಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಬಳಿಕ ನಿನ್ನೆ ಶಿರಸಿಯ ಉಪ ಬಂಧೀಖಾನೆಯಿಂದ ಆತನನ್ನು ಕಾರವಾರದ ಕೋವಿಡ್ ವಾರ್ಡಿಗೆ ದಾಖಲಿಸಲಾಗಿತ್ತು. ಆದರೆ, ಇಂದು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಸೋಂಕಿತ ಎರಡು ಮೊಬೈಲ್ ಗಳನ್ನು ಕದ್ದು ವಾರ್ಡ್ ನ ಗಾಜು ಒಡೆದು ಪರಾರಿಯಾಗಿದ್ದಾನೆ.
ಇನ್ಮುಂದೆ ಬೆಂಗಳೂರಿಗೆ ಹೋಗಿ ಬಂದರೂ ಕೊರೊನಾ ಟೆಸ್ಟ್ ಕಡ್ಡಾಯ
ಕೂಡಲೇ ವಿಷಯ ತಿಳಿದ ಪೊಲೀಸರು ಈತನನ್ನು ಹುಡುಕುವಲ್ಲಿ ಹೈರಾಣಾಗಿದ್ದಾರೆ. ಶೋಧ ಕಾರ್ಯ ನಡೆಸಿದಾಗ ಅಂತೂ ಕಾರವಾರದ ಕದ್ರಾ ಬಳಿ ಸೋಂಕಿತ ಆರೋಪಿ ಸೆರೆ ಸಿಕ್ಕಿದ್ದು, ಆಸ್ಪತ್ರೆಗೆ ಕರೆತಂದಿದ್ದಾರೆ.
ಜಿಲ್ಲೆಯಲ್ಲಿ ಇಂದು 18 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸೋಂಕಿತರ ಸಂಖ್ಯೆ ಗರಿಷ್ಠ ಪ್ರಮಾಣದಲ್ಲಿ ವರದಿಯಾಗುತ್ತಿದೆ. ನಿನ್ನೆ 14 ಪ್ರಕರಣಗಳು ವರದಿಯಾಗಿದ್ದವು. ಇದು ಜಿಲ್ಲೆಯಲ್ಲಿ ಈವರೆಗೆ ವರದಿಯಾದ ಸೋಂಕಿತರ ಸಂಖ್ಯೆಯಲ್ಲಿ ಗರಿಷ್ಠವಾಗಿತ್ತು. ಆದರೆ, ಅದರ ನಂತರ ಇಂದು 18 ಪ್ರಕರಣ ವರದಿಯಾಗುವ ಮೂಲಕ ಮತ್ತಷ್ಟು ಆತಂಕ ಹೆಚ್ಚಿಸಿದೆ. ಈ ಸಂಖ್ಯೆ ಸಂಜೆಯ ವೇಳೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮುಂಡಗೋಡದ ಇಬ್ಬರು, ಹೊನ್ನಾವರದ ಐವರು, ಶಿರಸಿಯಲ್ಲಿ ಒಬ್ಬರಿಗೆ, ಕಾರವಾರದ ಇಬ್ಬರು, ಗೋಕರ್ಣದ ಒಬ್ಬರು, ಯಲ್ಲಾಪುರದ ಏಳು ಮಂದಿಗೆ ಇಂದು ಸೋಂಕು ದೃಢಪಟ್ಟಿದೆ.