ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ರೈತ ಸಂಘದ ಅಧ್ಯಕ್ಷ ಬಲಿ
ಕಾರವಾರ, ಜುಲೈ 23: ಕೊರೊನಾ ಸೋಂಕಿತನಾಗಿದ್ದ ಮುಂಡಗೋಡ ತಾಲೂಕಿನ ರೈತ ಸಂಘದ ಅಧ್ಯಕ್ಷ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಬಲಿಯಾಗಿದ್ದಾನೆ.
Recommended Video
ಮುಂಡಗೋಡ ರೈತ ಸಂಘದ ಅಧ್ಯಕ್ಷನ ಪತ್ನಿಗೆ ಸೋಂಕು ತಗುಲಿ ಸ್ಥಳೀಯ ಕೋವಿಡ್ ಕೇರ್ ಸೆಂಟರ್ ನಲ್ಲಿ ದಾಖಲು ಮಾಡಲಾಗಿತ್ತು. ಬಳಿಕ ಅಧ್ಯಕ್ಷನಿಗೂ ನಿನ್ನೆ ತೀವ್ರತರ ಜ್ವರ ಕಾಣಿಸಿಕೊಂಡು ಮುಂಡಗೋಡ ಆಸ್ಪತ್ರೆಗೆ ಭೇಟಿ ನೀಡಿದ್ದ. ಈ ವೇಳೆ ಮುಂಡಗೋಡ ಆಸ್ಪತ್ರೆಯ ಅಧಿಕಾರಿಗಳು ಸಂಜೆಯ ವೇಳೆಗೆ ಪತಿ- ಪತ್ನಿ ಇಬ್ಬರನ್ನೂ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕಿಮ್ಸ್) ಕೋವಿಡ್ ವಾರ್ಡಿಗೆ ರವಾನಿಸಿದ್ದಾರೆ.
ಕಾರವಾರ: ಯಾರ ಸಂಪರ್ಕ, ಟ್ರಾವೆಲ್ ಹಿಸ್ಟರಿ ಇಲ್ಲದೇ ದೃಢಪಡುತ್ತಿದೆ ಕೊರೊನಾ ವೈರಸ್
ಕಾರವಾರಕ್ಕೆ ಬಂದ ಸೋಂಕಿತ ದಂಪತಿಯನ್ನು ದಾಖಲಾತಿ ಮಾಡಿಕೊಳ್ಳದ ಆಸ್ಪತ್ರೆಯ ಅಧಿಕಾರಿಗಳು, ಅಧ್ಯಕ್ಷನ ಗಂಟಲು ದ್ರವ ಪಡೆದು ಟ್ರ್ಯೂ- ನಾಟ್ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಸೋಂಕು ದೃಢಪಟ್ಟಿದ್ದು, ತಾಸುಗಟ್ಟಲೆ ಆಂಬುಲೆನ್ಸ್ ನಲ್ಲಿ ಸೋಂಕಿತ ದಂಪತಿಯನ್ನು ಕಾಯಿಸಿದ್ದಲ್ಲದೆ, ವರದಿ ಬಂದ ಬಳಿಕ ಮುಂಡಗೋಡ ಆಸ್ಪತ್ರೆಗೆ ದಾಖಲಾಗುವಂತೆ ವಾಪಸ್ ಕಳುಹಿಸಿದ್ದಾರೆ.
ಮುಂಡಗೋಡದಿಂದ ಕಾರವಾರಕ್ಕೆ ತಿರುವು- ಮುರುವಿನ ರಸ್ತೆಯಲ್ಲಿ ಅಂದಾಜು ಒಟ್ಟು ಆರು ತಾಸು ಪ್ರಯಾಣಿಸಿದ್ದ ದಂಪತಿ, ಕೊನೆಗೆ ನಿನ್ನೆ ರಾತ್ರಿಯೇ ಮುಂಡಗೋಡ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಇಂದು ಬೆಳಿಗ್ಗೆ ಅಧ್ಯಕ್ಷ ಕೊನೆಯುಸಿರೆಳೆದಿದ್ದಾನೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯತನವೇ ಕಾರಣ ಎಂಬ ಆರೋಪ ಇದೀಗ ಕೇಳಿ ಬಂದಿದೆ.