ಉತ್ತರ ಕನ್ನಡ ಜಿಲ್ಲೆ ಜನರು ರಿಲ್ಯಾಕ್ಸ್; ಹತೋಟಿಗೆ ಬಂದ ಕೊರೊನಾ ಮಾರಿ
ಕಾರವಾರ, ಏಪ್ರಿಲ್ 03: ಕೊರೊನಾ ಎನ್ನುವ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಭಾರತಕ್ಕೂ ಕೊರೊನಾ ಕಾಲಿಟ್ಟ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಈ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ತಗಲಿರುವವ ಸಂಖ್ಯೆ ಹತೋಟಿಗೆ ಬರುತ್ತಿದ್ದು, ಇದರಿಂದಾಗಿ ಜಿಲ್ಲೆಯ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಜಿಲ್ಲೆಯಲ್ಲಿ, ಅದರಲ್ಲೂ ಭಟ್ಕಳ ಭಾಗದಲ್ಲಿ ಹಲವಾರು ಮಂದಿ ವಿದೇಶದಿಂದ ವಾಪಸ್ಸಾಗಿದ್ದರು. ಇದಾದ ನಂತರ ಕೆಲವೇ ದಿನಗಳಲ್ಲೇ ಎಂಟು ಜನರಲ್ಲಿ ಕೋವಿಡ್- 19 ಸೋಂಕು ದೃಢಪಟ್ಟು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿತ್ತು. ಈ ಸೋಂಕಿತರ ಸಂಪರ್ಕ ಹೊಂದಿದ್ದವರು, ಮನೆಯ ಸುತ್ತಲಿನವರು ಭಯದಲ್ಲೇ ಕಾಲ ಕಳೆಯುವ ಪರಿಸ್ಥಿತಿಯೂ ಉದ್ಭವವಾಗಿತ್ತು. ಇದು ಜಿಲ್ಲಾಡಳಿತಕ್ಕಷ್ಟೇ ಅಲ್ಲದೇ, ರಾಜ್ಯ ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿತ್ತು.
ಕೊರೊನಾಗೆ ಚಿಕಿತ್ಸೆ ಕೊಡುವ ವೈದ್ಯರಿಂದಾಗಿ ಬೆಚ್ಚಿದ ಶಿರಸಿ!
ಎರಡು ದಿನಗಳಿಂದ ಒಂದೂ ಪ್ರಕರಣ ಕಂಡುಬಂದಿಲ್ಲ
ಭಟ್ಕಳದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ್ದಲ್ಲದೇ, ಕೇಂದ್ರ ಸರ್ಕಾರ ‘ಕೊರೊನಾ ಹಾಟ್ ಸ್ಪಾಟ್' ಹಾಗೂ ರಾಜ್ಯ ಸರ್ಕಾರದಿಂದ ‘ರೆಡ್ ಝೋನ್' ಎಂದು ಜಿಲ್ಲೆಯನ್ನು ಗುರುತಿಸಲಾಗಿತ್ತು. ಆದರೆ, ಕಳೆದ ಎರಡು ದಿನಗಳಿಂದ ಹೊಸ ಸೋಂಕಿತ ಪ್ರಕರಣ ಯಾವುದೂ ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ. ಅಲ್ಲದೇ, ವಿದೇಶದಿಂದ ಬಂದಿದ್ದ, ಅವರ ಹಾಗೂ ಸೋಂಕಿತರ ಸಂಪರ್ಕದಲ್ಲಿದ್ದ ಎಲ್ಲರ ಗಂಟಲಿನ ದ್ರವದ ಪರೀಕ್ಷೆಯ ವರದಿಯೂ ನೆಗೆಟಿವ್ ಬಂದಿರುವುದು ಜಿಲ್ಲೆಯ ಜನರ ಆತಂಕ ದೂರ ಮಾಡಿದೆ.
ಎಂಟು ಜನರ ಆರೋಗ್ಯ ಸ್ಥಿತಿ ಸುಧಾರಣೆ
ಜಿಲ್ಲೆಯಿಂದ ಈವರೆಗೆ ಒಟ್ಟು 99 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಕಾರವಾರದಿಂದ 9, ಕುಮಟಾದಿಂದ 5, ಹೊನ್ನಾವರದಿಂದ 1, ಭಟ್ಕಳದಿಂದ 71, ಶಿರಸಿ, ಯಲ್ಲಾಪುರದಿಂದ ತಲಾ 3, ಹಳಿಯಾಳದಿಂದ 6 ಹಾಗೂ ಜೊಯಿಡಾದಿಂದ ಓರ್ವರ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಎಂಟು ಪ್ರಕರಣಗಳನ್ನು ಪರೀಕ್ಷೆಯಿಂದ ಕೈಬಿಡಲಾಗಿದ್ದು, ಕಾರವಾರದ ಓರ್ವನ ವರದಿ ಇನ್ನೂ ಬರಬೇಕಿದೆ. ಸದ್ಯ ಕಾರವಾರದ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಂಟು ಜನರ ಆರೋಗ್ಯ ಸ್ಥಿತಿ ಸಹ ಸುಧಾರಿಸುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಅವರು ಸಂಪೂರ್ಣ ಗುಣಮುಖರಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 1,422 ಜನರ ಮೇಲೆ ನಿಗಾ ಇಡಲಾಗಿದ್ದು, ಈ ಪೈಕಿ 258 ಜನ 14 ದಿನದ ಹೋಮ್ ಹಾಗೂ ಸರ್ಕಾರಿ ಕ್ವಾರಂಟೈನ್ ನಲ್ಲಿದ್ದಾರೆ. 697 ಮಂದಿ 14ರಿಂದ 28 ದಿನಗಳ ನಿಗಾದಲ್ಲಿದ್ದು, ಹೋಮ್ ಕ್ವಾರಂಟೈನ್ ಪಾಲನೆ ಮಾಡುತ್ತಿದ್ದಾರೆ. 467 ಮಂದಿ 28 ದಿನಗಳನ್ನು ಕಳೆದಿದ್ದು, ಇವರ ಮೇಲೆ ನಿಗಾ ಅವಶ್ಯವಿಲ್ಲ ಎನ್ನಲಾಗಿದೆ.
‘ಕೊರೊನಾ ವಾರಿಯರ್ಸ್'ಗೆ ಭಟ್ಕಳದಲ್ಲೇ ಸಿದ್ಧಗೊಳ್ಳುತ್ತಿದೆ ರಕ್ಷಣಾ ಕವಚ
ಫಲ ನೀಡಿದ ಜಿಲ್ಲಾಡಳಿತದ ಪರಿಶ್ರಮ
ಕೊರೊನಾ ಸೋಂಕು ಭಾರತಕ್ಕೆ ಕಾಲಿಟ್ಟು ಆತಂಕದ ವಾತಾವರಣ ಸೃಷ್ಟಿ ಮಾಡಿದ ನಂತರ ಸೋಂಕಿತರು ಪತ್ತೆಯಾಗಿದ್ದ ದೇಶದ ವಿವಿಧ ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲಾಗಿತ್ತು. ಉತ್ತರ ಕನ್ನಡ ಜಿಲ್ಲಾಡಳಿತ ಈ ಬಗ್ಗೆ ಮೊದಲೇ ಎಚ್ಚರ ವಹಿಸಿ, ಅತಿ ಹೆಚ್ಚು ವಿದೇಶದಿಂದ ಬಂದವರು ಇರುವ ಭಟ್ಕಳವನ್ನು ಲಾಕ್ ಡೌನ್ ಮಾಡಿ ಆದೇಶಿಸಿತ್ತು. ಅಲ್ಲದೇ, ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿ, ಭಟ್ಕಳದಲ್ಲಿ ಸೋಂಕು ಹರಡದಂತೆ ಕ್ರಮಕೈಗೊಳ್ಳಲಾಗಿತ್ತು.
ಜಿಲ್ಲಾ ಆಸ್ಪತ್ರೆಯನ್ನೂ ಒಳಗೊಂಡಂತೆ, ವಿವಿಧ ತಾಲ್ಲೂಕುಗಳಲ್ಲಿ ಕೊರೊನಾ ವಾರ್ಡ್ ಗಳನ್ನು ಸಿದ್ಧಪಡಿಸಲಾಗಿತ್ತು. ಜಿಲ್ಲೆಯ ಜನ ಅನವಶ್ಯಕವಾಗಿ ಓಡಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಘೋಷಿಸಿ, ಜನರಿಗೆ ಸಮಸ್ಯೆಯಾಗದಂತೆ ಮನೆಮನೆಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಕ್ರಮ ಕೈಗೊಂಡಿತ್ತು.
ಮನೆ ಬಾಗಿಲಿಗೇ ಎಲ್ಲಾ ಸೇವೆ ಕೊಟ್ಟಿದ್ದ ಜಿಲ್ಲಾಡಳಿತ
ಇವಿಷ್ಟೇ ಅಲ್ಲದೇ, ಮನೆ ಬಾಗಿಲಿಗೆ ಆರೋಗ್ಯ ಸೇವೆ, ಅಂಗನವಾಡಿ ಹಾಗೂ ಆಶಾ ಕಾರ್ಯರ್ತೆಯರಿಂದ ಜಿಲ್ಲೆಯಾದ್ಯಂತ ಆರೋಗ್ಯ ಸಮೀಕ್ಷೆ ನಡೆಸಲಾಗಿತ್ತು. ವಿವಿಧೆಡೆ ಸೋಂಕು ನಿವಾರಕಗಳನ್ನು ಸಿಂಪಡಿಸುವ ಮೂಲಕ ವೈರಾಣುಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯ ಮಾಡಲಾಗಿತ್ತು.
ಭಟ್ಕಳದ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದರೆ ಸೋಂಕಿತರ ಸಂಬಂಧಿಗಳು ಹೆಚ್ಚಾಗಿ ಅವರನ್ನು ವಿಚಾರಿಸಲು ಬರುತ್ತಿರುತ್ತಾರೆ. ಸಾರ್ವಜನಿಕರೂ ಇಲ್ಲಿ ಓಡಾಟ ನಡೆಸುವುದರಿಂದ ಸೋಂಕು ಹರಡುವ ಸಾಧ್ಯತೆ ಇರುವುದನ್ನು ಮನಗಂಡ ಜಿಲ್ಲಾಡಳಿತ, ಸೋಂಕಿತರನ್ನು ನಿರ್ಬಂಧಿತ ನೌಕಾನೆಲೆಯ ಪತಂಜಲಿ ಆಸ್ಪತ್ರೆಗೆ ಸ್ಥಳಾಂತರಿಸಿತ್ತು. ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪಂಚಾಯತಿ ಸಿಇಒ ಮೊಹಮ್ಮದ್ ರೋಶನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ನೇತೃತ್ವದ ತಂಡ ನಿರಂತರ ಶ್ರಮವಹಿಸಿದ ಹಿನ್ನೆಲೆಯಲ್ಲಿ ಸದ್ಯ ಕೊರೊನಾ ನಿಯಂತ್ರಣಕ್ಕೆ ಬಂದಂತಾಗಿದೆ.