ಬೆಂಗಳೂರಿನಿಂದ ಉತ್ತರ ಕನ್ನಡದತ್ತ ಜನತೆ ವಾಪಸ್; ಏರುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ
ಕಾರವಾರ, ಏಪ್ರಿಲ್ 22: ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿ ನೆಲೆಸಿದ್ದ ಉತ್ತರ ಕನ್ನಡ ಜಿಲ್ಲೆಯ ಮೂಲದವರು ಮತ್ತೆ ಜಿಲ್ಲೆಯತ್ತ ಮುಖ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಹೆಚ್ಚಿರುವ ಹಿನ್ನೆಲೆಯಲ್ಲಿ ಅಲ್ಲಿರುವವರು ಜಿಲ್ಲೆಗೆ ವಾಪಸ್ಸಾಗುತ್ತಿದ್ದು, ಬೆಂಗಳೂರಿನಿಂದ ವಾಪಸ್ಸಾದವರಲ್ಲೇ ಬಹುತೇಕ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇದರಿಂದಾಗಿ ದಿನೇ ದಿನೇ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗತೊಡಗಿದೆ.
ಲಾಕ್ಡೌನ್ ಭೀತಿ: ಉತ್ತರ ಕನ್ನಡ ತೊರೆದ ಉತ್ತರ ಕರ್ನಾಟಕದವರು!
ಉತ್ತರ ಕನ್ನಡ ಜಿಲ್ಲೆಯ ಸಾವಿರಾರು ಕುಟುಂಬಗಳು ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿ ಸಹ ಲಾಕ್ಡೌನ್ ಆದ ವೇಳೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದವರು ವಾಪಸ್ ತಮ್ಮ ಊರುಗಳಿಗೆ ಆಗಮಿಸಿದ್ದರಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿತ್ತು.
ಬೆಂಗಳೂರಿನಲ್ಲಿ ನಿಯಂತ್ರಣ ಸಿಗದಷ್ಟು ಸೋಂಕಿತರು
ಆದರೆ ಕಳೆದ ಬಾರಿ ಬೆಂಗಳೂರಿನಿಂದ ಬಂದವರು ಆಸ್ಪತ್ರೆಗೆ ತೆರಳಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸಿಕೊಂಡು ನೆಗೆಟಿವ್ ವರದಿ ಬಂದ ನಂತರ ಊರುಗಳಿಗೆ ಹೋಗಲು ಆದೇಶಿಸಿತ್ತು.
ಬೆಂಗಳೂರಿನಿಂದ ಬರುತ್ತಿದ್ದ ಸರ್ಕಾರಿ, ಖಾಸಗಿ ಬಸ್ಸುಗಳು ಜಿಲ್ಲೆಗೆ ಬರುತ್ತಿದ್ದಂತೆ ನೇರವಾಗಿ ಆಸ್ಪತ್ರೆಗೆ ತೆರಳಿ ಪ್ರಯಾಣಿಕರ ಕೋವಿಡ್ ಪರೀಕ್ಷೆ ನಡೆಸಿ ನಂತರ ತೆರಳುವಂತೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಮತ್ತೆ ಕೊರೊನಾ ಎರಡನೇ ಅಲೆಯ ಅಬ್ಬರ ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ ನಿಯಂತ್ರಣ ಸಿಗದಷ್ಟು ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯತ್ತ ಜನರ ಆಗಮನ
ಇನ್ನೊಂದೆಡೆ ಕೊರೊನಾ ಕಡಿವಾಣಕ್ಕೆ ಸರ್ಕಾರ ಟಫ್ ರೂಲ್ಸ್ ಮಾಡಿರುವ ಹಿನ್ನಲೆಯಲ್ಲಿ ಸೋಂಕಿನಿಂದ ತಪ್ಪಿಸಿಕೊಳ್ಳಲು ವಾಪಸ್ ಜಿಲ್ಲೆಯತ್ತ ಜನರು ಆಗಮಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಬೆಂಗಳೂರಿನಿಂದ ಉತ್ತರ ಕನ್ನಡ ಜಿಲ್ಲೆಯತ್ತ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಜಿಲ್ಲೆಗೆ ಆಗಮಿಸಿ ತಮ್ಮ ತಮ್ಮ ಊರುಗಳತ್ತ ಮುಖ ಮಾಡುವವರು ಮನೆಯವರೊಟ್ಟಿಗೆ ಸಂಪರ್ಕ ಬೆಳೆಸುತ್ತಿರುವುದರಿಂದ ಹಲವರಿಗೆ ಒಂದೆರಡು ದಿನದ ನಂತರ ಸೋಂಕು ದೃಢಪಡುತ್ತಿದೆ. ಕುಟುಂಬದ ಸದಸ್ಯರಿಗೂ ಸೋಂಕು ಹರಡಿರುವ ಪ್ರಕರಣಗಳು ಪತ್ತೆಯಾಗುತ್ತಿವೆ.
ತಪಾಸಣೆ ಮಾಡಿ ಒಳಗೆ ಬಿಡುವ ಕಟ್ಟುನಿಟ್ಟಿನ ಕ್ರಮ
ಸದ್ಯ ಸಾರಿಗೆ ನೌಕರರ ಮುಷ್ಕರದಿಂದ ಬೆಂಗಳೂರಿನಿಂದ ಬರುವ ಬಸ್ಸುಗಳ ಸಂಖ್ಯೆ ಕಡಿಮೆ ಇದ್ದು, ಜನರು ರೈಲು ಹಾಗೂ ಖಾಸಗಿ ಬಸ್ಸುಗಳ ಮೂಲಕ ಆಗಮಿಸುತ್ತಿದ್ದಾರೆ. ಒಂದೊಮ್ಮೆ ಸಾರಿಗೆ ನೌರರರ ಮುಷ್ಕರ ಮುಕ್ತಾಯವಾಗಿ ಬಸ್ಸುಗಳ ಸಂಖ್ಯೆ ಅಧಿಕವಾದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಿಂದ ಜಿಲ್ಲೆಗೆ ಜನರು ಆಗಮಿಸುವ ನಿರೀಕ್ಷೆಯಿದ್ದು, ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ, ಯಾರೇ ಜಿಲ್ಲೆಗೆ ಬಂದರೂ ಗಡಿಯಲ್ಲಿಯೇ ತಪಾಸಣೆ ಮಾಡಿ ಒಳಗೆ ಬಿಡುವ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಹೊರಗಿನಿಂದ ಬರುವವರಲ್ಲಿಯೇ ಸೋಂಕು: ಜಿಲ್ಲಾಧಿಕಾರಿ
ಬೆಂಗಳೂರು ಸೇರಿದಂತೆ ಹೊರಗಿನಿಂದ ಜಿಲ್ಲೆಗೆ ಆಗಮಿಸಿದವರಲ್ಲಿಯೇ ಹೆಚ್ಚು ಸೋಂಕಿತ ಪ್ರಕರಣಗಳು ಕಂಡು ಬಂದಿದ್ದು, ಜನರು ಜಾಗೃತವಾಗಿರಬೇಕು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಕಿವಿಮಾತು ಹೇಳಿದ್ದಾರೆ.
ಈಗಾಗಲೇ ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಿದ್ದು, ಯಾರೇ ಬೇರೆ ಊರಿನಿಂದ ಬಂದು ಊರುಗಳಲ್ಲಿ ನೆಲೆಸಿದ್ದರೂ ಅವರ ಮೇಲೆ ಆಶಾ ಕಾರ್ಯಕರ್ತರು ನಿಗಾ ಇಟ್ಟಿರುತ್ತಾರೆ. ಜನರು ಸಹ ಜಾಗೃತರಾಗಬೇಕಾಗಿದೆ. ಯಾರಾದರೂ ತಮ್ಮ ಮನೆಗೆ ಹೊರ ಊರಿನಿಂದ ಬಂದರೆ ಅವರನ್ನು ಕೆಲ ದಿನಗಳ ಕಾಲ ಕ್ವಾರಂಟೈನ್ ಮಾಡಬೇಕಾಗಿದೆ. ಸೋಂಕಿನ ಲಕ್ಷಣ ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಸೇರಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ಮನೆಯಲ್ಲಿನ 60 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷ ಒಳಗಿನ ಮಕ್ಕಳು ಹೊರ ಊರಿನಿಂದ ಬಂದವರಿಂದ ಸ್ವಲ್ಪ ದೂರ ಉಳಿಯುವುದು ಒಳ್ಳೆಯದು. ಯಾರೇ ರೋಗ ಲಕ್ಷಣ ಕಂಡು ಬಂದರೆ ಮುಚ್ಚಿಡದೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ.
Recommended Video
ಖಾಸಗಿ ಆಸ್ಪತ್ರೆಯಲ್ಲಿ 323 ಬೆಡ್ ಮೀಸಲು
ಇನ್ನು ಈವರೆಗೆ ಎಷ್ಟು ಜನ ಕುಂಭ ಮೇಳಕ್ಕೆ ಹೋಗಿದ್ದಾರೆ, ಎಷ್ಟು ಮಂದಿ ವಾಪಸ್ಸಾಗಿದ್ದಾರೆ ಎಂದು ಗುರುತು ಮಾಡಿಲ್ಲ. ಹೋಗಿ ಬಂದವರ ಪತ್ತೆ ಕಾರ್ಯ ಮಾಡಲಾಗುತ್ತಿದೆ. ಆದರೆ ಮೇಳಕ್ಕೆ ಹೋಗಿ ಬಂದವರು ಕೆಲ ಕಾಲ ಸ್ವಯಂ ಕ್ವಾರಂಟೈನ್ ಆಗಿ ರೋಗ ಲಕ್ಷಣ ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಎಂದಿದ್ದಾರೆ. ಜಿಲ್ಲೆಯಲ್ಲಿ ಸದ್ಯ ಸೋಂಕಿತರ ಚಿಕಿತ್ಸೆಗೆ ಯಾವುದೇ ಸಮಸ್ಯೆಯಿಲ್ಲ. ಈಗಾಗಲೇ ಸರ್ಕಾರಿ ಆಸ್ಪತ್ರೆಗಳಲ್ಲಿ 1783 ಬೆಡ್, ಖಾಸಗಿ ಆಸ್ಪತ್ರೆಯಲ್ಲಿ 323 ಬೆಡ್ಗಳನ್ನು ಮೀಸಲಿಟ್ಟಿದ್ದು, ಅದರಲ್ಲಿ 63 ಬೆಡ್ಗಳು ಮಾತ್ರ ಭರ್ತಿಯಾಗಿದೆ. ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆ ಸಹ ಇಲ್ಲ. ಹೆಚ್ಚಿನ ಆಕ್ಸಿಜನ್ ಸಿಲಿಂಡರ್ ತರಿಸಿಕೊಳ್ಳಲು ಟೆಂಡರ್ ಕರೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.