ಕೊರೊನಾ ಭೀತಿಯಿಂದ ಜಪಾನ್ ನಲ್ಲಿ ಜಲದಿಗ್ಬಂಧನದಲ್ಲಿದ್ದ ಕಾರವಾರಿಗ ವಾಪಸ್
ಕಾರವಾರ, ಮಾರ್ಚ್ 15: ಜಪಾನ್ನ ಯೂಕೊಹಾಮಾದ ಡೈಮಂಡ್ ಪ್ರಿನ್ಸೆಸ್ ಕ್ರೂಸ್ ನಲ್ಲಿ ಜಲದಿಗ್ಬಂಧನಕ್ಕೊಳಗಾಗಿದ್ದ ಕಾರವಾರ ನಗರದ ನಿವಾಸಿ ಅಭಿಷೇಕ್ ಮಗರ್ ಸುರಕ್ಷಿತವಾಗಿ ಮನೆಗೆ ವಾಪಸ್ಸಾಗಿದ್ದಾರೆ. ಅವರ ಆಗಮನದಿಂದ ಕುಟುಂಬದವರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಸುಮಾರು ಒಂದೂವರೆ ತಿಂಗಳ ಹಿಂದೆ ಚೀನಾದ ಹಾಂಗ್ಕಾಂಗ್ ನಿಂದ ಜಪಾನ್ನ ಟೋಕಿಯೋ ನಗರಕ್ಕೆ ಬರ್ಮುಡಾ ಮೂಲದ ಡೈಮಂಡ್ ಪ್ರಿನ್ಸಸ್ ಕ್ರೂಸ್ ಹಡಗು ವಾಪಸ್ಸಾಗುತ್ತಿತ್ತು. ಈ ವೇಳೆ ಕ್ರೂಸ್ ನಿಂದ ಇಳಿದಿದ್ದ ಪ್ರಯಾಣಿಕನೋರ್ವನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಪರಿಣಾಮ ಜಪಾನ್ ಭದ್ರತಾ ಸಿಬ್ಬಂದಿ ಕ್ರೂಸ್ ಅನ್ನು ಜಲದಿಗ್ಭಂದನಕ್ಕೊಳಪಡಿಸಿದ್ದರು.
ಹಳಿಯಾಳದಲ್ಲಿ ಮೆಕ್ಕಾ-ಮದೀನಾದಿಂದ ವಾಪಸ್ಸಾದ 14 ಮಂದಿಗೆ ಗೃಹಬಂಧನ
ಹೀಗಾಗಿ ಕ್ರೂಸ್ ನಲ್ಲಿದ್ದ ಸಿಬ್ಬಂದಿಯನ್ನೂ ಒಳಗೊಂಡು ಮೂರು ಸಾವಿರಕ್ಕೂ ಅಧಿಕ ಮಂದಿ ಹಡಗಿನಲ್ಲೇ ಉಳಿಯುವಂತಾಗಿದ್ದು, ಸುಮಾರು 20 ದಿನಗಳ ಕಾಲ ಅವರನ್ನು ದಡಕ್ಕೆ ತರದೇ ಸಮುದ್ರದಲ್ಲೇ ಇರಿಸಲಾಗಿತ್ತು.
ಇದಾದ ಬಳಿಕ ಕ್ರೂಸ್ ನಲ್ಲಿದ್ದ ಅಭಿಷೇಕ್ ಮಗರ್ ಅವರನ್ನೂ ಒಳಗೊಂಡು 137 ಮಂದಿ ಭಾರತೀಯರನ್ನು ಫೆಬ್ರುವರಿ 27 ರಂದು ವಾಪಸ್ ಭಾರತಕ್ಕೆ ಕರೆತರಲಾಗಿತ್ತು. ಅವರನ್ನು ಮನೆಗೆ ಕಳುಹಿಸುವ ಮೊದಲು ಹರಿಯಾಣದ ಸೈನಿಕರ ಕ್ಯಾಂಪ್ನಲ್ಲಿ 14 ದಿನಗಳ ಕಾಲ ತೀವ್ರ ತಪಾಸಣೆಗೆ ಒಳಪಡಿಸಲಾಗಿತ್ತು.
ಅದರಲ್ಲಿ ಕ್ರೂಸ್ ನಿಂದ ಬಂದಿದ್ದ ಯಾವೊಬ್ಬ ಭಾರತೀಯನಲ್ಲೂ ಕೊರೋನಾ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಅವರನ್ನೆಲ್ಲಾ ವಾಪಸ್ ಕಳುಹಿಸಿಕೊಟ್ಟಿದೆ. ಶುಕ್ರವಾರ (ಮಾ.13) ಅಭಿಷೇಕ್ ಕಾರವಾರದ ತಮ್ಮ ಮನೆಗೆ ಸುರಕ್ಷಿತವಾಗಿ ವಾಪಸ್ಸಾಗಿದ್ದಾನೆ.
ಒಂದೂವರೆ ತಿಂಗಳ ಆತಂಕದ ವಾತಾವರಣದ ಬಳಿಕ ಮಗ ಮನೆಗೆ ವಾಪಸ್ಸಾಗಿದ್ದಕ್ಕೆ ಅಭಿಷೇಕ್ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಕ್ರೂಸ್ ನಲ್ಲಿ ಜಲದಿಗ್ಭಂದನಕ್ಕೊಳಗಾಗಿದ್ದ ವೇಳೆ ಪ್ರತಿನಿತ್ಯ ಮಗನ ಆರೋಗ್ಯ ವಿಚಾರಿಸುತ್ತಿದ್ದೆವು. ಮನೆಗೆ ಬರುವವರೆಗೂ ಆತಂಕ ಇತ್ತು. ಆದರೆ, ಇದೀಗ ಸುರಕ್ಷಿತವಾಗಿ ಮನೆಗೆ ಮರಳಿದ್ದು, ಯಾವುದೇ ಸೋಂಕು ತಗುಲಿಲ್ಲ ಎಂದು ಆರೋಗ್ಯ ಇಲಾಖೆಯಿಂದ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಅಭಿಷೇಕ್ ತಂದೆ ಬಾಲಕೃಷ್ಣ ಮಗರ್ ತಿಳಿಸಿದ್ದಾರೆ.
ಭಾರತಕ್ಕೆ ಬಂದ ಬಳಿಕವೂ ಎರಡು ಬಾರಿ ಸೋಂಕಿನ ಪರೀಕ್ಷೆ ನಡೆಸಿದ್ದು, ಯಾವುದೇ ರೀತಿಯ ಸೋಂಕು ಕಂಡುಬರದ ಹಿನ್ನೆಲೆಯಲ್ಲಿ ಮನೆಗೆ ಸುರಕ್ಷಿತವಾಗಿ ವಾಪಸ್ಸಾಗುವಂತಾಗಿದೆ. ಸದ್ಯ ಎಲ್ಲೆಡೆ ಕೊರೋನಾ ಭೀತಿ ಆವರಿಸಿದ್ದು, ಕೊರೋನಾ ಸೋಂಕು ಕಡಿಮೆಯಾದ ಬಳಿಕ ಮತ್ತೆ ಕ್ರೂಸ್ ನಲ್ಲಿ ಕೆಲಸಕ್ಕೆ ತೆರಳುವುದಾಗಿ ಅಭಿಷೇಕ್ ತಿಳಿಸಿದ್ದಾರೆ.
""ಕ್ರೂಸ್ ನಲ್ಲಿದ್ದ 18 ರಿಂದ 20 ದಿನಗಳು ಆತಂಕದಲ್ಲೇ ಕಾಲ ಕಳೆಯುವಂತಾಗಿದ್ದು, ದೇಹದ ತಾಪಮಾನ ಹೆಚ್ಚಳವಾಗಿದ್ದವರನ್ನು ಪ್ರತ್ಯೇಕ ಕೋಣೆಗಳಲ್ಲಿರಿಸಿ ಪರೀಕ್ಷೆ ಮಾಡುತ್ತಿದ್ದರು. ಉಳಿದ ಯಾರಿಗೂ ಹಡಗಿನಿಂದ ಇಳಿಯಲು ಅನುಮತಿ ಇರಲಿಲ್ಲ'' ಎಂದು ಅಲ್ಲಿ ಕಳೆದ ದಿನಗಳನ್ನು ಅಭಿಷೇಕ್ ನೆನಪು ಮಾಡಿಕೊಂಡರು. ದೆಹಲಿಯಿಂದ ಮನೆಗೆ ವಾಪಸ್ಸಾಗಿ ಮನೆಗೆ ಬಂದಿದ್ದು, ಸ್ವಾತಂತ್ರ್ಯ ಸಿಕ್ಕಂತಾಗಿದೆ ಎಂದು ನಿಟ್ಟುಸಿರು ಬಿಟ್ಟರು.