ಮುಂದುವರಿದ ಮೀನುಗಾರರ ಪ್ರತಿಭಟನೆ: ಕಾರವಾರದಲ್ಲಿ ಅಘೋಷಿತ ಬಂದ್
ಕಾರವಾರ, ಜನವರಿ 13: ಸಾಗರಮಾಲಾ ಯೋಜನೆಯಡಿ ಟ್ಯಾಗೋರ್ ಕಡಲ ತೀರದಲ್ಲಿ ಅಲೆ ತಡೆಗೋಡೆ ಕಾಮಗಾರಿ ಕೈಗೊಳ್ಳುವುದನ್ನು ವಿರೋಧಿಸಿ, ಪ್ರತಿಭಟನೆ ನಡೆಸಿದ ಹಲವು ಮೀನುಗಾರರನ್ನು ಪೊಲೀಸರು ಬೆಳಿಗ್ಗೆ ವಶಕ್ಕೆ ಪಡೆದಿದ್ದರೂ, ತಣ್ಣಗಾಗದ ಪ್ರತಿಭಟನೆ ಮಧ್ಯಾಹ್ನದವರೆಗೂ ಮುಂದುವರಿದಿದೆ.
ಕಾರವಾರ ನಗರದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಭಯದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರೆ, ಇನ್ನು ಕೆಲವರಿಗೆ ಒತ್ತಾಯಪೂರ್ವಕವಾಗಿ ವ್ಯಾಪಾರ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಒಟ್ಟಾರೆಯಾಗಿ ಅಘೋಷಿತ ಬಂದ್ ನ ವಾತಾವರಣ ನಿರ್ಮಾಣವಾಗಿದೆ.
ಬ್ಯಾರಿಕೇಡ್ ಮುರಿದು ಕಾಮಗಾರಿಗೆ ತಡೆವೊಡ್ಡಲು ಯತ್ನ; ನೂರಾರು ಮೀನುಗಾರರು ಪೊಲೀಸರ ವಶಕ್ಕೆ
ವಶಕ್ಕೆ ಪಡೆದ ಮೀನುಗಾರರನ್ನು ನಗರದ ಪೊಲೀಸ್ ವಸತಿಗೃಹದ ಸಭಾಂಗಣದಲ್ಲಿ ಇರಿಸಲಾಗಿದೆ. ಈ ವೇಳೆ ಮೀನುಗಾರ ಮಹಿಳೆಯೊಬ್ಬರು ಅಸ್ವಸ್ಥರಾಗಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಮಗೆ ಮತ ಚಲಾವಣೆ ಹಕ್ಕು ಬೇಡ
ಸಾಗರಮಾಲಾ ವಿರೋಧಿ ಪ್ರತಿಭಟನಾ ನಿರತರು, ಸಂಸದ ಅನಂತಕುಮಾರ ಹೆಗಡೆ ಹಾಗೂ ಶಾಸಕಿ ರೂಪಾಲಿ ನಾಯ್ಕ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಬ್ಬರ ವಿರುದ್ಧವೂ ಘೋಷಣೆಗಳನ್ನು ಕೂಗಿದ್ದಾರೆ.
ಅನಂತಕುಮಾರ್ ಅವರನ್ನು "ಚೋರ್.. ಚೋರ್...' ಎಂದಿದ್ದಾರೆ. ಈ ಬಾರಿ ಮತ್ತೆ ರೂಪಾಲಿಯನ್ನು ಗೆಲ್ಲಿಸುವುದಿಲ್ಲ. ಮತ ಕೇಳಲು ಬಂದರೆ ಘೇರಾವ್ ಹಾಕುತ್ತೇವೆ. ತಮಗೆ ಮತ ಚಲಾವಣೆಯ ಹಕ್ಕು ಬೇಡ. ತಮಗೆ ಗೋವಾ ರಾಜಕಾರಣಿಗಳಿಗೆ ಮತ ಹಾಕಲು ಅನುವು ಮಾಡಿಕೊಡಿ. ರಾಜ್ಯ ಸರ್ಕಾರದಿಂದ ಮೀನುಗಾರರಿಗೆ ಯಾವುದೇ ಪ್ರಯೋಜನವಿಲ್ಲ. ಮೀನುಗಾರರನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಶಾಂತಿ ಕಾಪಾಡಿ ಎಂದು ಮನವಿ ಮಾಡಿದ ಎಸ್ಪಿ
ಇನ್ನು ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರು ಪ್ರತಿಭಟನಾ ಸ್ಥಳದಲ್ಲೇ ಬೆಳಿಗ್ಗೆಯಿಂದ ಮೊಕ್ಕಾಂ ಹೂಡಿದ್ದಾರೆ. ತಮ್ಮ ಅಧಿಕಾರಿ, ಸಿಬ್ಬಂದಿಗೆ ಸ್ಥಳದಲ್ಲಿದ್ದು ಸೂಚನೆಗಳನ್ನು ನೀಡುತ್ತಿದ್ದಾರೆ. ಈ ವೇಳೆ ಪ್ರತಿಭಟನಾಕಾರರಿಗೆ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.
ಕಾರವಾರ ಕಡಲತೀರ ಉಳಿಸಲು ಮಾನವ ಸರಪಳಿ
"ಯಾರಯಾರದ್ದೋ ಮಾತನ್ನು ಕೇಳಿ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಒಮ್ಮೆ ಕೇಸು ಬಿದ್ದರೆ ಜೀವನ ಪರ್ಯಂತ ಪರಿತಪಿಸಬೇಕಾಗುತ್ತದೆ. ಶಾಂತ ರೀತಿಯಿಂದ ವರ್ತಿಸಿ' ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರತಿಭಟನಾ ನಿರತರಲ್ಲಿ ಮನವಿ ಮಾಡಿದರೂ ಫಲಪ್ರದವಾಗಿಲ್ಲ.
ಕಾಮಗಾರಿ ಮತ್ತೆ ಆರಂಭ
ಮಾಜಿ ಶಾಸಕ ಸತೀಶ್ ಸೈಲ್ ಕೂಡಾ ಸ್ಥಳಕ್ಕೆ ಭೇಟಿ ನೀಡಿದ್ದರು. ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಕಾಮಗಾರಿ ನಿಲ್ಲಿಸಲು ಮನವಿ ಮಾಡಿಕೊಳ್ಳುವುದಾಗಿ ಕೇಳಿಕೊಳ್ಳುತ್ತೇನೆ, ಅಲ್ಲಿಯವರೆಗೂ ಮೀನುಗಾರರನ್ನು ವಶಕ್ಕೆ ಪಡೆಯುವುದನ್ನು ನಿಲ್ಲಿಸಿ ಎಂದು ಪೊಲೀಸರ ಬಳಿ ವಿನಂತಿಸಿಕೊಂಡರು. ದುರದೃಷ್ಟವಶಾತ್ ಜಿಲ್ಲಾಧಿಕಾರಿ ಕಾರವಾರದಲ್ಲಿ ಇಲ್ಲ, ಕರ್ತವ್ಯದ ಮೇಲೆ ಹೊರಗೆ ತೆರಳಿದ್ದಾರೆ.
ಕಾಮಗಾರಿ ಸ್ಥಳಕ್ಕೆ ನುಗ್ಗಿದ ಪ್ರತಿಭಟನಾಕಾರರು ಇಷ್ಟೆಲ್ಲ ಪ್ರಹಸನಗಳ ನಡುವೆ ಪ್ರತಿಭಟನೆಗಳು ಮುಗಿದವೆಂದು ಪೊಲೀಸರು ವಿಶ್ರಾಂತಿಯ ನಿಟ್ಟುಸಿರು ಬಿಡುವಷ್ಟರಲ್ಲೇ ಕಡಲತೀರದ ಇನ್ನೊಂದು ಭಾಗದಿಂದ ಪ್ರತಿಭಟನಾಕಾರರು ಕಾಮಗಾರಿ ನಡೆಯುವ ಸ್ಥಳಕ್ಕೆ ನುಗ್ಗಿದರು.
ನೂರಾರು ಜನರ ಬಂಧನ
ಕಾಮಗಾರಿ ನಿರ್ಮಾಣ ನಿರತ ಜೆಸಿಬಿ ಚಾಲಕನಿಗೆ ಕಲ್ಲು ತೋರಿಸಿ, ಕಾಮಗಾರಿ ಸ್ಥಗಿತಗೊಳಿಸಿದರು. ಕೆಲವು ಹೊತ್ತು ಸ್ಥಳದಲ್ಲೇ ಕುಳಿತು ಪ್ರತಿಭಟನೆ ನಡೆಸಿ, ಕಾಮಗಾರಿ ಸ್ಥಗಿತಗೊಂಡಿದ್ದಕ್ಕಾಗಿ ವಾಪಸ್ ತೆರಳಿದರು. ಬಳಿಕ ಮತ್ತೆ ಕಾಮಗಾರಿ ಆರಂಭಗೊಂಡಿರುವುದರಿಂದ ಹೆದ್ದಾರಿಯ ಮೇಲೆ ಪ್ರತಿಭಟನಾಕಾರರು ಬೀಡು ಬಿಟ್ಟಿದ್ದಾರೆ.
ಇದಕ್ಕೂ ಮುನ್ನ ಪ್ರತಿಭಟನಾಕಾರರು ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದರು. ಆದರೆ, ಪೊಲೀಸರು ಇದಕ್ಕೆ ಒಪ್ಪದಿದ್ದಾಗ ಜೆಸಿಬಿ ಕಾಮಗಾರಿಗೆ ತಡೆವೊಡ್ಡಲು ಮುಂದಾದರು. ಹೀಗಾಗಿ ಪೊಲೀಸರು ಕೆಲವು ಮುಖಂಡರನ್ನು ವಶಕ್ಕೆ ಪಡೆದರು. ಇದನ್ನು ಗಮನಿಸಿದ ಬ್ಯಾರಿಕೇಡ್ ನ ಆಚೆಗೆ ಇದ್ದ ನೂರಾರು ಸಂಖ್ಯೆಯ ಮೀನುಗಾರರು, ಬ್ಯಾರಿಕೇಡ್ ಗಳನ್ನು ಮುರಿದು ಒಳನುಗ್ಗಲು ಯತ್ನಿಸಿದರು. ಹೀಗಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದು, ಎರಡು ಬಸ್ ಗಳಲ್ಲಿ ಪ್ರತಿಭಟನಾಕಾರರನ್ನು ಕರೆದೊಯ್ದಿದ್ದರು.