ಕರೆಯದಿದ್ದರೂ ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದ ಮೋದಿ: ಹರಿಪ್ರಸಾದ್ ವಾಗ್ದಾಳಿ
ಕಾರವಾರ, ಜೂನ್ 14: "ಪಾಕಿಸ್ತಾನದ ಹೆಸರು ತೆಗೆದುಕೊಂಡಿಲ್ಲವೆಂದರೆ ಬಿಜೆಪಿಗೆ ಒಂದೇ ಒಂದು ದಿನ ಅಧಿಕಾರ ಮಾಡಲಾಗುವುದಿಲ್ಲ. ಜಮೀರ್, ಸಿದ್ದರಾಮಯ್ಯ, ದಿಗ್ವಿಜಯ ಸಿಂಗ್ ಯಾರೂ ಕೂಡ ಪಾಕಿಸ್ತಾನಕ್ಕೆ ಹೋಗಿಲ್ಲ, ಹೋಗೋ ಮನಸ್ಸೂ ಕೂಡ ಅವರಿಗಿಲ್ಲ."
"ಆದರೆ. ಪಾಕಿಸ್ತಾನದವರು ಕರೆಯದೇ, ಆಹ್ವಾನ- ಆಮಂತ್ರಣ ಇಲ್ಲದೆ ಯಾರಾದರೂ ಮಹಾನ್ ನಾಯಕ ಅಲ್ಲಿಗೆ ಬಿರಿಯಾನಿ ತಿನ್ನಲು, ಶರ್ವಾನಿ ಹಾಕಿಕೊಳ್ಳಲು ಹೋಗಿದ್ದಾರೆಂದರೆ ಅದು ಪ್ರಧಾನಿ ನರೇಂದ್ರ ಮೋದಿ. ಈ ದೇಶಕ್ಕೆ ಇದಕ್ಕಿಂತ ಬೇರೆ ಅವಮಾನ ಇಲ್ಲ,'' ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ನ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಪೆಟ್ರೋಲ್ನಿಂದ ಬರುವ ಹಣ ಮೋದಿ ಖಾತೆಗೆ ಹೋಗುತ್ತೆ: ಕೆ.ಎಚ್. ಮುನಿಯಪ್ಪ
ಅಂಬಾನಿ ಮೊಮ್ಮಗಳು ಹುಟ್ಟಿದ್ದಾಳೆಂದು ಮುಂಬೈಗೆ ಹೋಗಿದ್ದರು
ಕಾರವಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ""ಬಿಜೆಪಿಯವರು ಮನಮೋಹನ್ ಸಿಂಗ್ ದುರ್ಬಲ ಪ್ರಧಾನಿ ಎನ್ನುತ್ತಿದ್ದರು. ಆದರೆ ಎಲ್ಲಿಯವರೆಗೆ ಉಗ್ರವಾದ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ಇಲ್ಲ ಎಂದು ಅಂದು ಮನಮೋಹನ್ ಸಿಂಗ್ ಖಡಾಖಂಡಿತವಾಗಿ ಹೇಳಿದ್ದರು. ಆದರೆ 56 ಇಂಚಿನ ಎದೆ ಇರುವವರು ಮುಷರಫ್ ಮೊಮ್ಮಗಳ ಜನ್ಮ ದಿನಾಚರಣೆಗೆ ಹೋಗಿದ್ದರು. 300 ರೈತರು ಸತ್ತರು, ಲಕ್ಷಾಂತರ ಜನ ಕೋವಿಡ್ನಲ್ಲಿ ಸತ್ತಿದ್ದಾರೆ. ಯಾರಿಗಾದರೂ ಒಂದು ದಿನ ಕಣ್ಣೀರು ಸುರಿಸಿದ್ದಾರಾ? ಒಂದಿನ ಮೊಸಳೆ ಕಣ್ಣೀರು ಹಾಕಿದ್ದಾರೆ ಅಷ್ಟೇ. ಅಂಬಾನಿ ಮೊಮ್ಮಗಳು ಹುಟ್ಟಿದ್ದಾಳೆಂದು ನೋಡಲು ಮುಂಬೈಗೆ ಹೋಗಿದ್ದರು. ಇವರು ನಮ್ಮ ದೇಶದ ಪ್ರಧಾನಮಂತ್ರಿ. ನಾಚಿಕೆಯಾಗಬೇಕು ನಮಗೆ ಇಂಥವರನ್ನು ದೇಶದ ಪ್ರಧಾನಮಂತ್ರಿ ಮಾಡಿದೆವಲ್ಲ,'' ಎಂದು ಕಿಡಿಕಾರಿದ್ದಾರೆ.
ಬಿಜೆಪಿಯಲ್ಲಿನ ಬದಲಾವಣೆ ಮಾಡೋದು ಆರ್ಎಸ್ಎಸ್
ಇನ್ನು, ""ಬಿಜೆಪಿಯ ಬದಲಾವಣೆಗಳನ್ನು ಅವರ ಪಕ್ಷದಲ್ಲಿದ್ದವರು ಯಾರೂ ಮಾಡುವುದಿಲ್ಲ. ಬಿಜೆಪಿಯ ಅಧ್ಯಕ್ಷನನ್ನು ನೇಮಕ ಮಾಡುವುದು ನಾಗಪುರ ಯೂನಿವರ್ಸಿಟಿ (ಆರ್ಎಸ್ಎಸ್). ಬಿಜೆಪಿ ಎನ್ನುವುದು ಆರ್ಎಸ್ಎಸ್ನ ಒಂದು ರಾಜಕೀಯ ಘಟಕ. ಯಾರು ಅಧ್ಯಕ್ಷರಾಗಬೇಕು, ಯಾರು ಪದಾಧಿಕಾರಿಗಳಾಗಬೇಕು ಎನ್ನುವುದನ್ನು ಬಿಜೆಪಿ ತೀರ್ಮಾನ ಮಾಡುವುದಿಲ್ಲ. ಸರಸಂಘ ಸಂಚಾಲಕರು ಅದನ್ನು ತೀರ್ಮಾನ ಮಾಡುವುದು. ಅವರ ನಿರ್ದೇಶನದ ಮೇರೆಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಬದಲಾವಣೆ ಮಾಡುತ್ತಾರೆ. ಕಾಂಗ್ರೆಸ್ನಲ್ಲಿ ಹಾಗಲ್ಲ. ಸುಮಾರು 11 ಸಾವಿರ ಪ್ರದೇಶ ಕಾಂಗ್ರೆಸ್ ಕಮಿಟಿ ಸದಸ್ಯರಿದ್ದಾರೆ. ಇವರ ಅನಿಸಿಕೆಯಲ್ಲಿ ನಾವು ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ,'' ಎಂದರು.
ಲಾಕ್ ಡೌನ್: ಬಿಜೆಪಿಯವರು ಎಲ್ಲೆಲ್ಲಿ ದುಡ್ಡು ಬರುತ್ತೋ, ಅಲ್ಲೆಲ್ಲಾ ಓಪನ್ ಮಾಡುತ್ತಾರೆ
ದೇಶ ಉಳಿದಿರುವುದು ವರದಿಗಾರರಿಂದ, ಮಾಧ್ಯಮಗಳಿಂದಲ್ಲ
ದೇಶ ಉಳಿದುಕೊಂಡಿರುವುದು ವರದಿಗಾರರಿಂದ, ಮಾಧ್ಯಮಗಳಿಂದಲ್ಲ. ಮಾಧ್ಯಮಗಳ ಬಹಳಷ್ಟು ಮಾಲೀಕರು ಪೆಟ್ರೋಲ್ ಕಂಪನಿಗಳ ಮಾಲೀಕರು. ಹಾಗಾಗಿ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಯಾವುದೇ ಪ್ರತಿಭಟನೆ ಮಾಡಿದರೂ ಯಾವುದೇ ಮಾಧ್ಯಮಗಳಲ್ಲಿ ಬರದಂತೆ ನೋಡಿಕೊಳ್ಳುತ್ತಾರೆ. ಎಲ್ಲಿಯಾದರೂ ಹೋದಾಗ ಮಾಧ್ಯಮದವರು ಭೇಟಿಯಾದಾಗ ಖುಷಿ ಅನಿಸುತ್ತದೆ. ಯಾಕೆಂದರೆ ದೇಶ ಉಳಿದಿರುವುದು ಈ ವರದಿಗಾರರಿಂದ, ಇವರನ್ನು ಯಾರೂ ಖರೀದಿ ಮಾಡೋಕಾಗಿಲ್ಲ ಎಂದು. ಕಂಪನಿಗಳನ್ನೆಲ್ಲ ಸಾವಕಾರರು ಖರೀದಿ ಮಾಡಿದ್ದಾರೆ. ವರದಿಗಾರರಿಂದ ಉಳಿದುಕೊಂಡಿದೆ. ನಾವು ಹಲವೆಡೆ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ. ಆದರೆ ಮಾಧ್ಯಮಗಳ ಮಾಲೀಕರು ಇದಕ್ಕೆ ಅಡಚಣೆ ಮಾಡಿದ್ದಾರೆ. ಪೆಟ್ರೋಲ್, ಗ್ಯಾಸ್ ಎಲ್ಲಾ ವಿಚಾರದಲ್ಲೂ ನಾವು ಪ್ರತಿಭಟನೆ ಮಾಡಿದ್ದೆವು,'' ಎಂದು ವಾಗ್ದಾಳಿ ನಡೆಸಿದರು.
ಶೀಘ್ರ ಸರ್ಕಾರದ ಅಂತ್ಯಕ್ರಿಯೆ ಆಗಬೇಕಿದೆ
""ಇದೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಹೀಯಾಳಿಸಿದ್ದರು. ಮೌನಿ ಬಾಬಾ, ಪೆಟ್ರೋಲ್ ಬೆಲೆ ಏರುತ್ತಿದ್ದರೂ ಕೇಂದ್ರದಲ್ಲಿ ಅಸಮರ್ಥ ಸರ್ಕಾರವಿದೆ ಎಂದಿದ್ದರು. ಸ್ಮೃತಿ ಇರಾನಿ ಬದನೆಕಾಯಿ, ಸೋರೆಕಾಯಿ ಹಾರಗಳನ್ನು ಹಾಕಿಕೊಂಡು ಬೆಲೆ ಏರಿಕೆ ಎಂದು ಪ್ರತಿಭಟನೆ ಮಾಡಿದ್ದರು. ಪ್ರತಿಯೊಬ್ಬರೂ ಅಂದು ಪ್ರತಿಭಟನೆ ಮಾಡಿದವರೆ. ಆದರೆ ಈಗ, ರೂಪಾಯಿ ಬೆಲೆ ಕುಸಿಯುತ್ತಿದೆ ಎಂದು ಕೇಳಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬೆಲೆ ಏರುತ್ತಿದೆ ಎನ್ನುತ್ತಾರೆ. ಪೆಟ್ರೋಲ್ ಬೆಲೆ ಏರುತ್ತಿದೆ ಎಂದರೆ ಅಂತರರಾಷ್ಟ್ರೀಯ ಮಾರುಕಟ್ಟೆಯ ಮೇಲೆ ನಿರ್ಧಾರವಾಗುತ್ತೆ ಎನ್ನುತ್ತಾರೆ. ಬೆಲೆ ಏರಿಕೆ ತಡೆಯಲಾಗಿಲ್ಲ ಎಂದರೆ ನೆಹರು, ಕಾಂಗ್ರೆಸ್ ಕಾರಣ ಎನ್ನುತ್ತಾರೆ. ನೀವ್ಯಾಕೆ ಇರೋದು ಕೇಳಿದರೆ ಪಾಕಿಸ್ತಾನವನ್ನು ಕೇಳಿ ಎನ್ನುತ್ತಾರೆ. ಈ ಮಟ್ಟದಲ್ಲಿ ಸರ್ಕಾರ ಬೇಜವಾಬ್ದಾರಿಯಲ್ಲಿದೆ. ಅದಕ್ಕೆ ಈ ಸರ್ಕಾರದ ಅಂತ್ಯಕ್ರಿಯೆ ಬೇಗ ಆಗಬೇಕಿದೆ ಎನ್ನುವುದೇ ನನ್ನ ಆಸೆ,'' ಎಂದಿದ್ದಾರೆ.
ಕುದುರೆ ವ್ಯಾಪಾರ ಬಿಜೆಪಿ ಸಂಸ್ಕೃತಿ
ಹಣದಿಂದ ಟಿಕೆಟ್ ಖರೀದಿಯಲ್ಲ, ಶಾಸಕರನ್ನೇ ಖರೀದಿಸುವ ಶಕ್ತಿ ಬಿಜೆಪಿಗೆ ಇದೆ ಎನ್ನುವುದನ್ನು ಈ ಹಿಂದೆಯೇ ನೋಡಿದ್ದೇವೆ. 17 ಶಾಸಕರನ್ನು ಖರೀದಿಸಿ, ರಾಜೀನಾಮೆ ಕೊಡಿಸಿ ಅವರನ್ನು ಶಾಸಕರನ್ನಾಗಿ ಮಾಡಲು ಕ್ಷೇತ್ರದಲ್ಲಿ ತಲಾ 25 ಕೋಟಿಯಷ್ಟು ಬಿಜೆಪಿ ಖರ್ಚು ಮಾಡಿದೆ. ಶಾಸಕರನ್ನು ಖರೀದಿಸುವ, ಕುದುರೆ ವ್ಯಾಪಾರ ಮಾಡುವ ಸಂಸ್ಕೃತಿ, ಸಂಸ್ಕಾರ, ಆಪರೇಷನ್ ಕಮಲದ ಮೂಲಕ ಯಾರಾದರೂ ಸೃಷ್ಟಿ, ಜನಕರಿದ್ದರೆ ಅದು ಬಿಜೆಪಿ, ನರೇಂದ್ರ ಮೋದಿ ಮತ್ತು ಯಡಿಯೂರಪ್ಪ,'' ಎಂದು ಆರೋಪಿಸಿದರು.
ಇನ್ನು, ಹಿರಿಯ ಮುಖಂಡ ಕಪಿಲ್ ಸಿಬಲ್ "ಕಾಂಗ್ರೆಸ್ ನಲ್ಲಿ ಇನ್ನೂ ಜಡತ್ವವಿದೆ' ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿಬಲ್ ಸುಪ್ರೀಂ ಕೋರ್ಟ್ ವಕೀಲರು. ಆದರೆ ಕಾಂಗ್ರೆಸ್ನಲ್ಲಿ ಕಾರ್ಯಕರ್ತರ ಅನಿಸಿಕೆಗೆ ಮಹತ್ವ ಹೊರತು ನಾಯಕರದ್ದಲ್ಲ. ದೇಶದ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನೂ ಸೋನಿಯಾ ಗಾಂಧಿಯವರ ನಿರ್ದೇಶನ, ರಾಹುಲ್ ಗಾಂಧಿಯವರ ನಾಯಕತ್ವ ಅಪೇಕ್ಷೆ ಮಾಡುವವನೇ'' ಎಂದರು.