ಹಳಿಯಾಳ ಕ್ಷೇತ್ರದಲ್ಲಿ ಮತ್ತೆ ಅಧಿಕಾರ ಪಡೆದ ಆರ್.ವಿ.ದೇಶಪಾಂಡೆ
ಕಾರವಾರ, ಮೇ 15 : ಮೂರು ದಶಕಗಳಿಂದ ರಾಜಕೀಯದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ಈ ಬಾರಿ ಮತ್ತೆ ಹಳಿಯಾಳ ಕ್ಷೇತ್ರದ ಶಾಸಕರಾಗಿ ಅಧಿಕಾರ ಪಡೆದುಕೊಂಡಿದ್ದಾರೆ.
ಹೌದು, ಕಳೆದ 2013ರ ಚುನಾವಣೆಯಲ್ಲಿ 55,005 ಮತಗಳನ್ನು ಪಡೆದಿದ್ದ ಅವರು, 5,939 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಸುನೀಲ್ ಹೆಗಡೆ (49,066) ಅವರನ್ನು ಸೋಲಿಸಿದ್ದರು. ಈ ಬಾರಿ ಕೂಡ ಇದೇ ಮುಂದುವರಿದಿದ್ದು, ಆರ್.ವಿ.ಡಿ. 5,100 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಅಂಚೆ ಮತ ಪತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ಮುನ್ನಡೆ
ಸುನೀಲ್ ಹೆಗಡೆ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ 56,224 ಮತಗಳನ್ನು ಪಡೆದರೆ, ಆರ್.ವಿ.ಡಿ ಪಡೆದದ್ದು 61,324 ಮತಗಳು.
ಕ್ಷೇತ್ರದಲ್ಲಿ 1.60 ಲಕ್ಷ ಮತದಾರರು ಇದ್ದಾರೆ. ಮರಾಠರು ಈ ಕ್ಷೇತ್ರದ ಬಹುಸಂಖ್ಯಾತ ಮತದಾರರು. ಆದರೆ, ಹವ್ಯಕ ಬ್ರಾಹ್ಮಣರಾದ ರಾಮಕೃಷ್ಣ ಹೆಗಡೆ, ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ದೇಶಪಾಂಡೆ, ಸುನೀಲ ಹೆಗಡೆ ಹೀಗೆ ಅತಿ ಸಣ್ಣ ಸಮುದಾಯದವರೇ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ಕಾಡು ಮತ್ತು ಕೃಷಿ ಪ್ರಧಾನವಾದ ಹಳಿಯಾಳ ವಿಧಾನಸಭಾ ಕ್ಷೇತ್ರ ಜತೆಗೆ ಜೊಯಿಡಾ ಹಾಗೂ ನೂತನವಾಗಿ ರಚನೆಯಾಗಿರುವ ದಾಂಡೇಲಿ ತಾಲೂಕುಗಳನ್ನು ಒಳಗೊಂಡಿದೆ.
ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ
1967ರಲ್ಲಿ ಶಿರಸಿ ಕ್ಷೇತ್ರದಿಂದ ಬೇರ್ಪಟ್ಟು, ಹೊಸದಾಗಿ ರಚನೆಯಾದ ಹಳಿಯಾಳ ಕ್ಷೇತ್ರದ ಮೊದಲ ಶಾಸಕ ರಾಮಕೃಷ್ಣ ಹೆಗಡೆ. ಅವರ ಶಿಷ್ಯರಾಗಿದ್ದ ಆರ್.ವಿ.ದೇಶಪಾಂಡೆ, ಈ ಕ್ಷೇತ್ರದಲ್ಲಿ 1983ರಿಂದ ಆರು ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿದವರು. 2008ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಸುನೀಲ ಹೆಗಡೆ ಎದುರು 5,425 ಮತಗಳ ಅಂತರದಿಂದ ಸೋಲುಂಡಿದ್ದರು.
ಸುನೀಲ 46,031 ಮತಗಳನ್ನು ಪಡೆದಿದ್ದರೆ, ದೇಶಪಾಂಡೆಗೆ 40,606 ಮತಗಳು ಬಂದಿದ್ದವು. 2013ರ ಚುನಾವಣೆಯಲ್ಲಿ ಕ್ಷೇತ್ರದ ಜನರು ಮತ್ತೆ ದೇಶಪಾಂಡೆ ಅವರನ್ನೇ ಒಪ್ಪಿಕೊಂಡರು. ಅನಿರೀಕ್ಷಿತ ಸೋಲಿನಿಂದ ಧೃತಿಗೆಟ್ಟಿದ್ದ ದಿನಗಳಲ್ಲಿ ಕ್ಷೇತ್ರದ ನಾಡಿಮಿಡಿತ ಅರ್ಥೈಸಿಕೊಂಡಿರುವ ಅವರು, 2018ರ ಚುನಾವಣೆಗೆ ಎರಡು ವರ್ಷಗಳ ಹಿಂದಿನಿಂದಲೇ ಪೂರ್ವಸಿದ್ಧತೆ ನಡೆಸುತ್ತಾ ಬಂದಿದ್ದರು.
ಯುವ ಮತದಾರರ ಮೇಲೆ ಕಣ್ಣಿಟ್ಟಿದ್ದ ಆರ್.ವಿ.ಡಿ, ಸಿಎಸ್ಆರ್ ನಿಧಿಯಲ್ಲಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಉಚಿತವಾಗಿ ಲ್ಯಾಪ್ ಟಾಪ್ ವಿತರಿಸಿ ಚರ್ಚೆಗೆ ಗ್ರಾಸವಾಗಿದ್ದರು. ಜೊಯಿಡಾದಲ್ಲಿ ಅಪರೂಪದ 'ಕೆನೊಪಿ ವಾಕ್' ನಿರ್ಮಾಣ, ಜನಪದ ವಿಶ್ವವಿದ್ಯಾಲಯದ ಶಾಖೆ, ದಾಂಡೇಲಿ ತಾಲ್ಲೂಕು ರಚನೆ, ಹೀಗೆ ಎಲ್ಲವನ್ನೂ ಸ್ವಕ್ಷೇತ್ರಕ್ಕೆ ತಂದುಕೊಂಡಿರುವ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದೇಶಪಾಂಡೆ ಅವರ ಮೇಲೆ, ಜಿಲ್ಲೆಯ ಇನ್ನುಳಿದ ತಾಲ್ಲೂಕುಗಳನ್ನು ಕಡೆಗಣಿಸಿದ್ದಾರೆ ಎಂಬ ಆರೋಪವೂ ಇತ್ತು.
ಸುಮಾರು ಒಂದು ವರ್ಷದಿಂದ, ವಾರದ ಕೊನೆಯ ಎರಡು ದಿನಗಳನ್ನು ಕ್ಷೇತ್ರದಲ್ಲಿಯೇ ಕಳೆಯುತ್ತಿದ್ದ ಅವರು, ಸಣ್ಣ ಸಣ್ಣ ಕಾರ್ಯಕ್ರಮಗಳಲ್ಲೂ ಭಾಗವಹಿಸುವ ಮೂಲಕ ಒಂದೊಂದು ಮತಗಳನ್ನೂ ಲೆಕ್ಕ ಹಾಕಿಕೊಂಡಿದ್ದರು.
1983ರ ಮೊದಲ ಸ್ಪರ್ಧೆಯಲ್ಲಿ ಜನತಾ ಪಕ್ಷದಲ್ಲಿದ್ದ ದೇಶಪಾಂಡೆ, 1989, 1994ರಲ್ಲಿ ಜನತಾ ದಳದಿಂದ ಸ್ಪರ್ಧಿಸಿ ಗೆದ್ದರು. 1999, 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಜಯಿಯಾದರು. ಸತತ 21 ವರ್ಷ ಶಾಸಕರಾಗಿದ್ದ ಅವರು, ಚುನಾವಣೆಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸ್ನೇಹಿತ ವಿ.ಡಿ.ಹೆಗಡೆ ಅವರೊಂದಿಗೆ ವಿರಸ ಬೆಳೆಸಿಕೊಂಡರು.
ಕಾಂಗ್ರೆಸ್ನಿಂದ ಸಿಡಿದು ಜೆಡಿಎಸ್ ಸೇರಿದ ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಡಿ.ಹೆಗಡೆ, ತಮ್ಮ ಮಗ ಸುನೀಲ ಹೆಗಡೆ ಅವರನ್ನು ಕಣಕ್ಕಿಳಿಸಿ (2008) ದೇಶಪಾಂಡೆಗೆ ಸೆಡ್ಡು ಹೊಡೆದಿದ್ದರು.