ದೇಶಪಾಂಡೆ ವಿರುದ್ಧ ಆಕ್ರೋಶ; ವಿಡಿಯೊ ವೈರಲ್
ಕಾರವಾರ, ಮೇ 24: ದೇಶದಾದ್ಯಂತ ಲೋಕಸಭಾ ಚುನಾವಣೆಯ ಫಲಿತಾಂಶ ನಿನ್ನೆಯಷ್ಟೇ ಪ್ರಕಟಗೊಂಡಿದೆ. ಉತ್ತರ ಕನ್ನಡ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅನಂತಕುಮಾರ ಹೆಗಡೆ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಅವರ ವಿರುದ್ಧ ಜಯಗಳಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಕಾರ್ಯಕರ್ತನೊಬ್ಬನ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಿಲ್ಲೆಯಲ್ಲಿ ಸಖತ್ ಸದ್ದು ಮಾಡುತ್ತಿದೆ.
ಭಟ್ಕಳದ ಹುರುಳಿಸಾಲ್ ಮೂಲದ ಕಾರ್ಯಕರ್ತ ಮಹೇಶ್ ನಾಯ್ಕ ಎನ್ನುವವರ ವಿಡಿಯೊ ಇದಾಗಿದ್ದು, ವಿಡಿಯೊದಲ್ಲಿ ಬಿಜೆಪಿಯ ಅನಂತಕುಮಾರ ಹೆಗಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಒಪ್ಪಂದ ಮಾಡಿಕೊಂಡಿರುವುದೇ ಮೈತ್ರಿ ಅಭ್ಯರ್ಥಿಯ ಸೋಲಿಗೆ ಕಾರಣ ಎಂದು ನೇರ ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆ ಫಲಿತಾಂಶ: ಕುಮಾರಸ್ವಾಮಿಗೆ ಅನಂತ್ ತಿರುಗೇಟು
ರಾಜ್ಯದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ತುಮಕೂರು, ಮಂಡ್ಯ, ಹಾಸನ ನೋಡಿಕೊಂಡಿದ್ದರೆ ಮೂರು ಸ್ಥಾನಗಳು ಬರುತ್ತಿತ್ತು. ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆಯಿಂದಲೇ ಇಂಥದ್ದೊಂದು ಹೀನಾಯ ಸೋಲಾಗಿದೆ. ದೇಶಪಾಂಡೆ ಎಲ್ಲಿವರೆಗೂ ಇರುತ್ತಾರೋ ಅಲ್ಲಿವರೆಗೂ ಈ ಜಿಲ್ಲೆ ಉದ್ಧಾರ ಆಗುವುದಿಲ್ಲ. ಮರಾಠಿ ಸಮುದಾಯದಿಂದ ನಿಂತಿದ್ದ ಆನಂದ್ ಗೆ ಸಹಕಾರ ನೀಡದೇ, ಪ್ರಚಾರವನ್ನೂ ಮಾಡದೇ 4 ಲಕ್ಷ ಮತಗಳಿಂದ ಹೀನಾಯವಾಗಿ ಸೋಲುವಂತೆ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಭಾರೀ ಅಂತರದ ಗೆಲುವು, ದಾಖಲೆ ಬರೆದ ಅನಂತ್ ಕುಮಾರ್ ಹೆಗಡೆ
ಜಿಲ್ಲೆಯಲ್ಲಿ ಜೆಡಿಎಸ್ ಇಲ್ಲ ಎಂದು ಗೊತ್ತಿದ್ದರೂ ಟಿಕೆಟ್ ನೀಡಲಾಗಿತ್ತು. ದೇಶಪಾಂಡೆಯವರು ತಮ್ಮ ಮಗ ಸೋತಿದ್ದರಿಂದ ಮತ್ತೆ ಈ ಬಾರಿ ನಿಲ್ಲಿಸದೇ, ಆನಂದ್ ಅಸ್ನೋಟಿಕರ್ ಅವರನ್ನು ಹರಕೆಯ ಕುರಿ ಮಾಡಿದ್ದಾರೆ. ಈ ಹಿಂದೆ ಜೆ.ಡಿ.ನಾಯ್ಕ, ಮಂಕಾಳ ವೈದ್ಯರನ್ನು ಕೂಡ ಕುರಿ ಮಾಡಿದ್ದರು. ಆರ್.ವಿ ದೇಶಪಾಂಡೆ ಜಿಲ್ಲಾ ಉಸ್ತುವಾರಿ ಸಚಿವರಾಗಿ, ಅನಂತಕುಮಾರ್ ಸಂಸದರಾಗಿ ಇರಲು ಇಬ್ಬರೂ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.