ಬಂದ್ ಮಾಡಿದರೂ ನಿಂತಿಲ್ಲ ಓಡಾಟ; ಶಿರಸಿ- ಕುಮಟಾ ಮಾರ್ಗದ ಗೊಂದಲ
ಕಾರವಾರ, ಅಕ್ಟೋಬರ್ 14: ಶಿರಸಿ- ಕುಮಟಾ ರಸ್ತೆ ಮೇಲ್ದರ್ಜೆಯ ಕಾಮಗಾರಿ ಪ್ರಾರಂಭವಾಗುವ ನಿಟ್ಟಿನಲ್ಲಿ ಅಕ್ಟೋಬರ್ 12ರಿಂದ ಸಂಚಾರ ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ, ಸಂಚಾರ ಬಂದ್ ಕುರಿತು ಇನ್ನೂ ಸಾರ್ವಜನಿಕರಲ್ಲಿ ಗೊಂದಲವಿದ್ದು, ಎಂದಿನಂತೆ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ.
ಸದ್ಯ ರಾಜ್ಯ ಹೆದ್ದಾರಿಯಿರುವ ಶಿರಸಿ- ಕುಮಟಾ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕಾಮಗಾರಿ ಪ್ರಾರಂಭಿಸಲು ಸಂಚಾರ ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಅಕ್ಟೋಬರ್ 12ರಿಂದ ಸಂಚಾರ ಬಂದ್ ಆಗಲಿದ್ದು, ಪರ್ಯಾಯ ಮಾರ್ಗವಾಗಿ ವಾಹನ ಸವಾರರು ಸಂಚರಿಸುವಂತೆ ಸೂಚಿಸಿತ್ತು. ಆದರೆ, ಸಂಚಾರ ಬಂದ್ ಮಾಡುವುದರಿಂದ ಹಲವು ಸಮಸ್ಯೆ ಆಗಲಿದೆ ಎಂದು ಸಾರ್ವಜನಿಕರು ಧ್ವನಿ ಎತ್ತಿದ್ದು, ಬಂದ್ ಆದೇಶವಿದ್ದರೂ ವಾಹನ ಓಡಾಟಕ್ಕೆ ಬ್ರೇಕ್ ಬಿದ್ದಿಲ್ಲ. ಎಂದಿನಂತೆ ವಾಹನ ಓಡಾಟವಿದ್ದು, ಯಾವಾಗ ಬಂದ್ ಆಗಲಿದೆ, ಯಾವಾಗ ಕಾಮಗಾರಿ ಪ್ರಾರಂಭವಾಗಲಿದೆ ಎನ್ನುವ ಗೊಂದಲ ಹಲವರಲ್ಲಿ ಮೂಡಿದೆ. ಮುಂದೆ ಓದಿ...
ಗೊಂದಲದ ಮಾಹಿತಿಯಿಂದ ವಾಹನ ಸವಾರರ ಪರದಾಟ
ಇನ್ನೊಂದೆಡೆ, ರಸ್ತೆ ಬಂದ್ ಎನ್ನುವ ಆದೇಶದಿಂದಾಗಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಇದೆ ಎನ್ನುವುದು ತಿಳಿಯದೇ ಕೆಲವರು ಪರ್ಯಾಯ ಮಾರ್ಗಕ್ಕೆ ಹುಡುಕಾಡಿ, ಬಳಿಕ ಹಾಲಿ ಮಾರ್ಗದಲ್ಲೇ ವಾಹನ ಸಂಚಾರಕ್ಕೆ ಅವಕಾಶ ಇರುವ ಬಗ್ಗೆ ತಿಳಿದು ಕಿಡಿಕಾರುತ್ತಿದ್ದಾರೆ. 20 ರಿಂದ 30 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬರುವ ಕೆಲ ಗ್ರಾಮಗಳಿಗೆ ರಸ್ತೆ ಸಂಪರ್ಕವೇ ಇಲ್ಲದಂತಾಗಲಿದೆ. ಆ ಗ್ರಾಮಗಳಿಗೆ ಪರ್ಯಾಯ ವ್ಯವಸ್ಥೆ ಏನೆಂದು ಇನ್ನೂ ತಿಳಿಸಿಲ್ಲ.
ಶಿರಸಿ- ಕುಮಟಾ ಹೆದ್ದಾರಿ 18 ತಿಂಗಳು ಬಂದ್! ಸಂಚಾರಕ್ಕೆ ನಿರ್ಬಂಧ
ಸಂಚಾರ ಬಂದ್ ನಿಂದ ರೋಗಿಗಳಿಗೆ ಸಮಸ್ಯೆ
ಅಲ್ಲದೇ ಶಿರಸಿ ಹಾಗೂ ಕುಮಟಾ ನಡುವೆ ಪ್ರಮುಖ ರಸ್ತೆ ಆಗಿರುವುದರಿಂದ ಸಂಚಾರವೇ ಬಂದ್ ಆದರೆ ವೈದ್ಯಕೀಯ ಸೇವೆಗಳಿಗೆ ತೆರಳುವವರಿಗೆ, ಕೃಷಿ ಇನ್ನಿತರ ವಸ್ತು ಸಾಗಾಟ ಸೇರಿದಂತೆ ಹಲವರಿಗೆ ದೊಡ್ಡ ಸಮಸ್ಯೆ ಆಗಲಿದೆ. ರಸ್ತೆ ಸಂಚಾರ ಬಂದ್ ಆದರೆ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಸಹ ಏರಿಕೆಯಾಗಲಿದ್ದು, ಬಂದ್ ಮಾಡದೇ ರಸ್ತೆ ಅಗಲೀಕರಣ ಮಾಡಲು ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಹಂತ ಹಂತವಾಗಿ ಕಾಮಗಾರಿ ನಡೆಸಲು ಕೋರಿಕೆ
ರಸ್ತೆಯ ಒಂದು ಭಾಗದಲ್ಲಿ ಕಾಮಗಾರಿ ನಡೆಸಿ, ಇನ್ನೊಂದು ಭಾಗದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಪರ್ಯಾಯ ಮಾರ್ಗವನ್ನು ಮಾಡಿ ಹಂತ ಹಂತವಾಗಿ ಕಾಮಗಾರಿ ನಡೆಸಬೇಕು. ಸುಮಾರು ಒಂದೂವರೆ ವರ್ಷಗಳ ಕಾಲ ಸಂಚಾರ ರಸ್ತೆಯಲ್ಲಿ ಬಂದ್ ಮಾಡಿದರೆ ಸಾಕಷ್ಟು ಸಮಸ್ಯೆಯನ್ನು ಕರಾವಳಿ ಹಾಗೂ ಘಟ್ಟದ ಮೇಲಿನ ತಾಲೂಕಿನವರು ಎದುರಿಸಬೇಕು. ಜಿಲ್ಲಾಡಳಿತ ಈ ಬಗ್ಗೆ ಸ್ಪಷ್ಟ ನಿಲುವು ತೋರುವವರೆಗೆ ಇದೇ ಮಾರ್ಗದಲ್ಲಿ ಸಂಚರಿಸುತ್ತೇವೆ ಎನ್ನುವುದು ಕೆಲ ಸ್ಥಳೀಯರ ವಾದವಾಗಿದೆ.
ಶಿರಸಿ ಕುಮಟಾ ರಸ್ತೆ ಮೇಲ್ದರ್ಜೆಗೆ; 10 ಸಾವಿರಕ್ಕೂ ಹೆಚ್ಚು ಮರಗಳು 'ನೆಲಕ್ಕೆ'
"ಬದಲಿ ಮಾರ್ಗಗಳನ್ನು ಗುರುತಿಸಲಾಗುತ್ತಿದೆ"
ಈ ಬಗ್ಗೆ 'ಒನ್ ಇಂಡಿಯಾ ಕನ್ನಡ' ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ರಸ್ತೆ ಕಾಮಗಾರಿ ಆರಂಭವಾಗುತ್ತಿದ್ದಂತೆ ಒಮ್ಮೆಲೆ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಲು ಸಮಸ್ಯೆ ಆಗಲಿದೆ. ಹೀಗಾಗಿ ಹೊರಗಿನಿಂದ ಶಿರಸಿಗೆ ಹೋಗುವವರಿಗಾಗಿ ಸಂಚಾರ ಬಂದ್ ಮಾಡಿ ಆದೇಶಿಸಲಾಗಿತ್ತು. ಸದ್ಯ ಹೊರಗಿನಿಂದ ಬರುವ ವಾಹನಗಳು ನಿಧಾನವಾಗಿ ಪರ್ಯಾಯ ಮಾರ್ಗಗಳಲ್ಲೇ ಸಂಚರಿಸುತ್ತಿದ್ದು, ಸ್ಥಳೀಯರಿಗೆ ದಿನನಿತ್ಯದ ಓಡಾಟಕ್ಕೆ ಬದಲಿ ಮಾರ್ಗಗಳನ್ನು ಗುರುತಿಸಲಾಗುತ್ತಿದೆ. ಹೀಗಾಗಿ ಆದೇಶದ ಪ್ರಕಾರ ಪರ್ಯಾಯ ಮಾರ್ಗಗಳಿಗಾಗಿ ಶಿರಸಿ ಹಾಗೂ ಕುಮಟಾ ಉಪವಿಭಾಗಾಧಿಕಾರಿಗಳು ಸಭೆ ನಡೆಸಿ, ಸಂಬಂಧಿಸಿದ ಇಲಾಖೆಗಳ ಎಂಜಿನಿಯರ್ಗಳು ಸರ್ವೆ ನಡೆಸಲಿದ್ದಾರೆ. ಅದರ ಬಳಿಕವೇ ಕಾಮಗಾರಿ ಆರಂಭವಾಗಲಿದ್ದು, ಗುತ್ತಿಗೆದಾರರು ಕಾಮಗಾರಿ ಆರಂಭಕ್ಕೂ ಮುನ್ನ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.