ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು
ಕಾರವಾರ, ಜುಲೈ 06; ಮಾಜಿ ಸಚಿವ ಆನಂದ ಅಸ್ನೋಟಿಕರ್ ಇತ್ತೀಚಿಗೆ ನೀಡಿದ್ದ ಹೇಳಿಕೆ ಹಾಗೂ ಇತ್ತೀಚಿಗೆ ನಡೆಯುತ್ತಿರುವ ಕೆಲವು ವಿದ್ಯಾಮಾನಗಳ ಆಧಾರದ ಮೇಲೆ ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಎಸಿಬಿಗೆ ದೂರು ನೀಡಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ಇತ್ತೀಚಿಗೆ ಆನಂದ ಅಸ್ನೋಟಿಕರ್ ರಾಜಕಾರಣಿ ಪರ್ಸಂಟೇಜ್ ಒತ್ತಡಕ್ಕೆ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಹೇಳಿಕೆ ನೀಡಿದ್ದರು" ಎಂದರು.
"ಈ ಆರೋಪ ಮಾಡಿದವರು ಯಾವುದೇ ಬೀದಿಯಲ್ಲಿ ಹೋಗುವ ಸಾಮಾನ್ಯ ವ್ಯಕ್ತಿಯಲ್ಲ. ಎರಡು ಬಾರಿ ಶಾಸಕರಾಗಿ, ಸಂಪುಟ ದರ್ಜೆಯ ಸಚಿವರಾಗಿದ್ದವರು ನೀಡಿರುವ ಈ ಹೇಳಿಕೆಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ಹಾಗೇ ಬಿಡಲೂ ಆಗುವುದಿಲ್ಲ. ಈ ಹೇಳಿಕೆ ನೀಡಿದ್ದಾರೆಂದರೆ ಇದರಲ್ಲಿ ಒಂದು ಅರ್ಥ ಇದೆ ಎಂದು ನನಗನಿಸಿತು" ಎಂದು ಹೇಳಿದರು.
ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಇಬ್ಬಗೆ ನೀತಿಗೆ ಟೀಕೆಗಳ ಸುರಿಮಳೆ
"ಕಾರವಾರದ ಜಿಲ್ಲಾ ಆಸ್ಪತ್ರೆಯ 150 ಕೋಟಿ ರೂ. ಕಾಮಗಾರಿಗೆ ಭೂಮಿಪೂಜೆ ಮಾಡಿಲ್ಲವೆಂದು ಆನಂದ ಅಸ್ನೋಟಿಕರ್ ಸ್ಥಳೀಯ ರಾಜಕಾರಣಿಯೊಬ್ಬರ ಮೇಲೆ ಆರೋಪಿಸಿ ಈ ಹೇಳಿಕೆ ನೀಡಿದ್ದಾರೆ. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ, ಆ ರಾಜಕಾರಣಿ ಯಾರೆಂದು ಲೆಕ್ಕ ಹಾಕಿದೆ. ದೊಡ್ಡ ದೊಡ್ಡ ಕಾಮಗಾರಿಗಳನ್ನು ನಿಯಂತ್ರಣ ಮಾಡುವ ಶಕ್ತಿ, ಸಾಮರ್ಥ್ಯ ಯಾವುದೇ ಗ್ರಾಮ ಪಂಚಾಯತಿ ಸದಸ್ಯ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ನಗರಸಭೆಯ ಸದಸ್ಯನಿಗೆ ಇರುತ್ತದೆಂದು ಹೇಳಲಾಗುವುದಿಲ್ಲ" ಎಂದು ತಿಳಿಸಿದರು.
ವೈರಲ್ ವಿಡಿಯೋ; ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಸಖತ್ ಡ್ಯಾನ್ಸ್!
"ಕಾರವಾರ ತಾಲೂಕು ಮಟ್ಟಿಗೆ ವಿಚಾರ ಮಾಡಬೇಕೆಂದರೆ, ಎಲ್ಲಾ ದೃಷ್ಟಿಯಿಂದಲೂ ಹಾಗೂ ಮೊದಲಿಂದಲೂ ಆರೋಪ ಕೇಳಿಬರುತ್ತಿರುವುದನ್ನು ನೋಡಿದರೆ ಆನಂದ ಆರೋಪ ಶಾಸಕಿ ರೂಪಾಲಿ ನಾಯ್ಕಗೆ ಬೊಟ್ಟು ಮಾಡಿ ತೋರಿಸುವಂತಿದೆ" ಎಂದು ದೂರಿದರು.
ಅವಕಾಶ ಇದ್ರೆ ಶಾಸಕಿ ರೂಪಾಲಿ ಅವರನ್ನು ಮಂತ್ರಿ ಮಾಡಿ: ರಮೇಶ್ ಕುಮಾರ್
"ಶಾಸಕಿ ರೂಪಾಲಿ ಈಗ ಸಾರ್ವಜನಿಕ ಸೇವಕರು. ಇವರ ಬಗ್ಗೆ ಇಂಥ ಗುರುತರ ಆರೋಪ ಇದೆ ಅಂದಮೇಲೆ, ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿ, ಆನಂದ್ ಹೇಳಿಕೆ ಬಂದ ನಂತರ ಯಡಿಯೂರಪ್ಪನವರು ಬಂದು ಭೂಮಿಪೂಜೆ ಮಾಡುತ್ತಾರೆ ಎಂಬ ಹೇಳಿಕೆಗಳು ಬಂದಿರುವುದನ್ನೆಲ್ಲ ನೋಡಿದರೆ, ಕೆಲವೆಡೆ ಕಾಮಗಾರಿ ಆರಂಭ ಆಗದೇ ಇರುವುದು, ಇನ್ನು ಕೆಲವೆಡೆ ಭೂಮಿಪೂಜೆ ಆಗದೇ ಇರುವುದನ್ನೆಲ್ಲ ನೋಡಿದರೆ ಹೇಳಿಕೆಗೆ ಪುಷ್ಠಿ ನೀಡುತ್ತದೆ. ಗುತ್ತಿಗೆದಾರನಿಗೆ ಕಾಮಗಾರಿ ಆಗುತ್ತದೆ, ಭೂಮಿಪೂಜೆ ಆಗುವ ಹೊರತು ಕಾಮಗಾರಿ ಪ್ರಾರಂಭ ಮಾಡಲು ಕೊಡುವುದಿಲ್ಲ. ಇದಕ್ಕೆ ಏನು ಕಾರಣ? ಭೂಮಿಪೂಜೆ ಮಾಡದೇ ಶಾಸಕರು ಯಾಕೆ ಅಡ್ಡಿಪಡಿಸುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕಿದೆ" ಎಂದರು.
"ಯಾರೇ ಆದರೂ ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕೆನ್ನುವುದು ನನ್ನ ಆಸೆ. ಯಾವುದೇ ರೀತಿಯಲ್ಲಿ ಈ ಆರೋಪಿತ ರಾಜಕಾರಣಿ ಅಥವಾ ಶಾಸಕರ ಮೇಲೆ ವೈಯಕ್ತಿ ದ್ವೇಷ, ಅಸೂಯೆ ನನಗಿಲ್ಲ ಎನ್ನುವುದನ್ನೂ ಸ್ಪಷ್ಟಪಡಿಸುತ್ತೇನೆ. ಈ ಮೊದಲಿನಿಂದಲೂ ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದವನು. ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆದಾಗಲೂ ಬಹಳಷ್ಟು ಜನರನ್ನು ಭ್ರಷ್ಟಾಚಾರ ನಿಗ್ರಹ ದಳದ ಮುಖಾಂತರ ಜೈಲಿಗಟ್ಟುವ ಕೆಲಸ ಮೊದಲಿನಿಂದಲೂ ಮಾಡುತ್ತಾ ಬಂದಿದ್ದೇನೆ. ಹೀಗಾಗಿ, ಈ ಎಲ್ಲಾ ರೋಪಗಳು ಶಾಸಕಿಗೇ ಬೊಟ್ಟು ಮಾಡಿ ತೋರಿಸುತ್ತಿರುವುದರಿಂದ ಎಸಿಬಿಗೆ ತನಿಖೆಗೆ ದೂರನ್ನು ನೀಡಿದ್ದೇನೆ" ಎಂದರು.
"ಇದಕ್ಕೆ ಸಾಕ್ಷಿಯಾಗಿ ಆನಂದ ಅಸ್ನೋಟಿಕರ್ ಅವರನ್ನೇ ಉಲ್ಲೇಖಿಸಿದ್ದೇನೆ. ಭ್ರಷ್ಟಾಚಾರ ನಿಗ್ರಹ ದಳದವರು ತನಿಖೆ ಮಾಡಿ, ಸಾಕ್ಷಿ ಸಂಗ್ರಹಿಸಲಿ. ಅಲ್ಲದೇ ಆರೋಪಿತರನ್ನು ಬಂಧಿಸುವ ಕೆಲಸವಾಗಬೇಕು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು. ಶಾಸಕಿಯ ಮೇಲಿನ ದೂರು ಆಗಿರುವುದರಿಂದ ಸಭಾಪತಿಗೂ ಸ್ಪೀಡ್ ಪೋಸ್ಟ್ ಮೂಲಕ ಪತ್ರ ಕಳುಹಿಸಿ ಗಮನಕ್ಕೆ ತಂದಿದ್ದು, ತನಿಖೆಗೆ ಆಗ್ರಹಿದ್ದೇನೆ" ಎಂದು ಹೇಳಿದರು.
"ಇತ್ತೀಚಿಗೆ ಗ್ರಾಮ ಪಂಚಾಯತಿಯಿಂದ ವಿಧಾನಸೌಧದವರೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರ ನಿಗ್ರಹಕ್ಕಾಗಿ ಭ್ರಷ್ಟಾಚಾರ ನಿಗ್ರಹ ದಳ ಕೂಡ ಕೆಲಸ ಮಾಡುತ್ತಿದ್ದರೂ ನಿಗ್ರಹ ಆಗುತ್ತಿಲ್ಲ. ಯಾಕೆಂದರೆ ನಾವು ಅನ್ಯಾಯವನ್ನು ಸಹಿಸಿಕೊಂಡು, ಭ್ರಷ್ಟಾಚಾರ ಕಣ್ಮುಂದೆ ನಡೆಯುತ್ತಿದ್ದರೂ ಸುಮ್ಮನಿರುತ್ತಿರುವುದೇ ಕಾರಣವಾಗಿದೆ. ಭ್ರಷ್ಟಾಚಾರ ಮಾಡುವವನಿಗಿಂತಲೂ ನೋಡಿ ಸುಮ್ಮನಾಗುವುದು ಬಹುದೊಡ್ಡ ಅಪರಾಧ ಎಂದಿದ್ದಾರೆ" ಎಂದು ಮಾಧವ ನಾಯಕ ತಿಳಿಸಿದರು.
Recommended Video