ನೀತಿ ಸಂಹಿತೆ ಜಾರಿ: ಮೊದಲೇ ದಿನವೇ ಕಾರವಾರದಲ್ಲಿ 7 ಲಕ್ಷ ರೂ. ವಶ
ಕಾರವಾರ, ಮಾರ್ಚ್ 28: ದಾಖಲೆ ಇಲ್ಲದೇ ಸರ್ಕಾರಿ ಕಾರಿನಲ್ಲಿ ಸಾಗಿಸುತ್ತಿದ್ದ 7 ಲಕ್ಷ ರೂ. ನಗದು ಹಣವನ್ನು ಪೊಲೀಸ್ ಅಧಿಕಾರಿಗಳು ಹೊನ್ನಾವರದ ಸಾಗರ ರೆಸಿಡೆನ್ಸಿ ಸಮೀಪ ವಶಪಡಿಸಿಕೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.
ಚುನಾವಣೆ ನೀತಿ ಸಂಹಿತೆ ಜಾರಿಯಾದ ದಿನವೇ ಈ ಘಟನೆ ನಡೆದಿದ್ದು ಜಿಲ್ಲೆಯಲ್ಲಿ ಸಂಚಲನ ಉಂಟು ಮಾಡಿದೆ.
ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಕಾರ್ಯ ನಿರ್ವಾಹಕ ಇಂಜಿನಿಯರ್ ಗಂಗ ನಾಯ್ಕ ಹಾಗೂ ಚಾಲಕ ಕುಮಟಾದಿಂದ ಭಟ್ಕಳದ ಕಡೆಗೆ ಹಣವನ್ನು ಸಾಗಿಸುತ್ತಿದ್ದರು. ಅಪರಾಧ ವಿಭಾಗದ ಪಿಎಸ್ಐ ಹರೀಶ್ ಎಚ್.ವಿ. ವಾಹನ ತಪಾಸಣೆ ಮಾಡುತ್ತಿರುವಾಗ ಸರ್ಕಾರಿ ಕಾರಿನಲ್ಲಿ (ಕೆಎ30 ಜಿ 0499) ಯಾವುದೇ ಅಧಿಕೃತ ದಾಖಲೆ ಪತ್ರಗಳಿಲ್ಲದೇ ಹಣ ಸಾಗಿಸುತ್ತಿರುವುದು ಕಂಡು ಬಂದಿದೆ. 2000, 500, 100 ರೂ. ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ಲೈಯಿಂಗ್ ಸ್ಕ್ವಾಡ್ ಭಾಸ್ಕರ್ ದೇವಾಡಿಗ ಹಾಗೂ ಪ್ರಭಾರಿ ತಹಸೀಲ್ದಾರ್ ಮಾರುತಿ ನಾಯ್ಕ ಸಮಕ್ಷಮದಲ್ಲಿ ಪರಿಶೀಲನೆ ನಡೆಸಿ ವಶಪಡಿಸಿಕೊಂಡ 7 ಲಕ್ಷ ರೂ.ಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲು ಇಡಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಹಣ ಸಾಗಿಸುತ್ತಿದ್ದ ಕಾರನ್ನು ಕುಮಟಾ ಉಪವಿಭಾಗಾಧಿಕಾರಿಗಳ ಸುಪರ್ದಿಗೆ ನೀಡಲಾಗಿದೆ. ಗಂಗ ನಾಯ್ಕ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು ಈ ಹಣ ನನಗೆ ಸಂಬಂಧಿಸಿದ್ದಲ್ಲ ಎಂದು ಅವರು ಹೇಳಿಕೆ ನೀಡಿದ್ದು, ತನಿಖೆ ಮುಂದುವರಿಸಲಾಗಿದೆ.