ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳಿಗೆ 200 ಕೋಟಿ ರೂ. ಭರವಸೆ ನೀಡಿದ ಸಿಎಂ
ಕಾರವಾರ, ಜುಲೈ 29: "ಉತ್ತರ ಕನ್ನಡ ಜಿಲ್ಲೆಯಲ್ಲಿ ನೆರೆಯಿಂದ ಹಾನಿಗಿಡಾದ ರಸ್ತೆಗಳಿಗೆ ರಾಜ್ಯ ಸರಕಾರದಿಂದ 200 ಕೋಟಿ ಬಿಡುಗಡೆ ಮಾಡಲಾಗುವುದು," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ನೆರೆ ಪಿಡೀತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಂಕೋಲಾ ತಾ.ಪಂ ಸಭಾಭವನದಲ್ಲಿ ಆಯೋಜಿಸಿದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾತನಾಡಿ, "ಜಿಲ್ಲೆಯ ಗ್ರಾಮೀಣ ಮತ್ತು ರಾಜ್ಯ ರಸ್ತೆಗಳಿಗೆ ತಲಾ 100 ಕೋಟಿಯಂತೆ ಬಿಡುಗಡೆ ಮಾಡುತ್ತೇನೆ, ತಕ್ಷಣ ಹಾನಿಗೊಳಗಾದ ರಸ್ತೆಯನ್ನು ಸರಿಪಡಿಸಿ,'' ಎಂದರು.
"ಮೀನುಗಾರರಿಗೆ ಗೋವಾ ರಾಜ್ಯ ಪ್ರವೇಶಿಸಲು ವ್ಯಾಕ್ಸಿನ್ ಇಲ್ಲದಿದ್ದರೆ ಬಿಡುವುದಿಲ್ಲ ಎನ್ನುವ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ವಿಧಾನ ಸಭಾ ಕ್ಷೇತ್ರಕ್ಕೆ ತಲಾ 3000 ಸಾವಿರ ವ್ಯಾಕ್ಸಿನ್ ನೀಡುತ್ತೇನೆ, ವ್ಯಾಕ್ಸಿನ್ ಶಿಬಿರ ನಡೆಸಿ, ಅದೇ ರೀತಿ ಮೀನುಗಾರರಿಗೂ ವ್ಯಾಕ್ಸಿನ್ ನೀಡಲು," ಜಿಲ್ಲಧಿಕಾರಿಗಳಿಗೆ ಸೂಚಿಸಿದರು.
"ನೆರೆಯಲ್ಲಿ ಬಿದ್ದ ಮನೆಗಳಿಗೆ ತಕ್ಷಣ ಪರಿಹಾರ ಕೊಡಿ. ಅರಣ್ಯ ಜಾಗದಲ್ಲಿ ಮನೆ ಇದ್ದು, ಅದು ಬಿದ್ದಿದ್ದರೂ ಕೊಡಿ, ಈಗ ಮನೆಗಳಿಗೆ 3800 ಹಣ ನೀಡಿದ್ದೀರಿ, ತಕ್ಷಣ ಮತ್ತೆ 6200 ರೂ. ಕೊಡಬೇಕು. ಒಟ್ಟು 10000 ರೂ. ತಕ್ಷಣದ ಪರಿಹಾರ ನೀಡಲು ಸೂಚಿಸಿದರು. ಪೂರ್ಣ ಬಿದ್ದ ಮನೆಗಳಿಗೆ 5 ಲಕ್ಷ, ಭಾಗಶಃ 3 ಲಕ್ಷ, ಸ್ವಲ್ಪ ಹಾನಿಯಾಗಿದ್ದರೆ 50 ಸಾವಿರ ನೀಡಲು," ಸಿಎಂ ಬೊಮ್ಮಾಯಿ ಆದೇಶಿಸಿದರು.
"ಕಳಚೆ ಗ್ರಾಮ ಸಂಪೂರ್ಣ ಸ್ಥಳಾಂತರಕ್ಕೆ ಯೋಜನೆ ರೂಪಿಸಿ, 15 ಎಕರೆ ಜಾಗ ಹುಡುಕಿ ಸ್ಥಳಾಂತರ ಮಾಡಿ," ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಸಿಎಂ ಆದೇಶಿಸಿದರು.
Recommended Video
"ಸೂಪಾ, ಕದ್ರಾ ಕೆಪಿಸಿ ಹಾಗೂ ಜಿಲ್ಲಾಡಳಿತ ಸಮನ್ವಯತೆ ಸಾಧಿಸಿ, ಹಂತ ಹಂತವಾಗಿ ನೀರು ಬಿಡಬೇಕು. ಅರಬೈಲ್ ಘಾಟ್ ರಸ್ತೆ, ಕಳಚೆ ರಸ್ತೆ ಘಟ್ಟ ಕುಸಿದ ರಿಪೇರಿಗೆ 10 ಕೋಟಿ ವೆಚ್ಚದಲ್ಲಿ ಸುಧಾರಿಸಿ."
"ರೈತರ ಬೆಳೆ ಹಾನಿ ಪರಿಹಾರಕ್ಕೆ ಕ್ರಮ ಕೈಕೊಳ್ಳುತ್ತೇನೆ, ನೆರೆ ಪರಿಹಾರ ತಕ್ಷಣ ನೀಡಿ," ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ಗೆ ಸಿಎಂ ಬೊಮ್ಮಾಯಿ ಸೂಚಿಸಿದರು. ಶಾಸಕರಾದ ಶಿವರಾಮ ಹೆಬ್ಬಾರ್, ರೂಪಾಲಿ ನಾಯ್ಕ, ಸುನೀಲ್ ನಾಯ್ಕ, ದಿನಕರ ಶೆಟ್ಟಿ, ವಿ.ಎಸ್. ಪಾಟೀಲ್ ಮುಂತಾದವರು ಇದ್ದರು.