ಮನೆ ಮನೆಗೆ ಗಂಗೆ: 2023ರ ಅಂತ್ಯದೊಳಗೆ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು
ಕಾರವಾರ, ಫೆಬ್ರವರಿ 19: ಕೇಂದ್ರ ಸರಕಾರದ ಜಲ ಜೀವನ ಮಿಷನ್ ಯೋಜನೆಯಡಿ ರಾಜ್ಯ ಸರಕಾರ 'ಮನೆ ಮನೆಗೆ ಗಂಗೆ' ಯೋಜನೆ ರೂಪಿಸಿದ್ದು, ಪ್ರಸಕ್ತ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯ 50,348 ಮನೆಗಳಿಗೆ ಹೊಸ ನಳಗಳ ಸಂಪರ್ಕ ಕಲ್ಪಿಸಲು ಯೋಜನೆ ರೂಪುಗೊಂಡಿದೆ.
ಕೇಂದ್ರ ಜಲಶಕ್ತಿ ಮಂತ್ರಾಲಯವು ಜಲ ಜೀವನ ಮಿಷನ್ ಅಡಿ-2024ರ ವೇಳೆಗೆ ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ನಳದ ಮೂಲಕ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ 'ಹರ್ ಘರ್ ನಲ್ ಸೇ ಜಲ್' ಎಂಬ ಮಹಾತ್ವಾಂಕ್ಷಿ ಯೋಜನೆಯನ್ನು ಜಾರಿಗೊಲಿಸಿದ್ದು, ರಾಜ್ಯ ಸರ್ಕಾರವು 2023ರೊಳಗಾಗಿ ರಾಜ್ಯದ ಎಲ್ಲ ಗ್ರಾಮೀಣ ಕುಟುಂಬಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಲು 'ಮನೆ ಮನೆಗೆ ಗಂಗೆ' ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ಪ್ರತಿ ಮನೆ ಮನೆಗೂ ಮೀಟರ್ ಅಳವಡಿಸಿ ನಲ್ಲಿ ಸಂಪರ್ಕದ ಮೂಲಕ ಕುಡಿಯುವ ನೀರು ಒದಗಿಸುತ್ತಿರುವುದು ವಿಶೇಷವಾಗಿದೆ.
ಮುಂದಿನ 3 ವರ್ಷಗಳಲ್ಲಿ ಗ್ರಾಮೀಣ ಭಾಗದ ಪ್ರತಿ ಮನೆಗೆ 'ನಲ್ಲಿ ನೀರು' ಹೇಗೆ?
50,348 ಮನೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ
ಉತ್ತರ ಕನ್ನಡ ಜಿಲ್ಲೆಯಲ್ಲಿ 1280 ಗ್ರಾಮಗಳಿದ್ದು, 7418 ಜನವಸತಿಗಳಲ್ಲಿ 2,67,812 ಮನೆಗಳಿವೆ. ಈಗಾಗಲೇ 17,108 ಮನೆಗಳು ನಲ್ಲಿ ಸಂಪರ್ಕವನ್ನು ಹೊಂದಿವೆ. ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಈ ಯೋಜನೆಯಡಿ ಜಿಲ್ಲೆಯ ಒಟ್ಟು 685 ಜನವಸತಿಗಳ 50,348 ಮನೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಒದಗಿಸಲು ಉದ್ದೇಶಿಸಿ ಒಟ್ಟು 292 ಕಾಮಗಾರಿಗಳಿಗೆ 16,371.20 ಲಕ್ಷ ರೂ.ಗಳ ಮೊತ್ತಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ. ಯೋಜನೆಯ ಸಂಪೂರ್ಣ ಅನುಷ್ಠಾನ 2023ರ ಅಂತ್ಯಕ್ಕೆ ಉಳಿದ ಜನವಸತಿಗಳ ಮನೆ ಮನೆಗೂ ನಳದ ನೀರು ಲಭ್ಯವಾಗಲಿದೆ.
ಎಲ್ಲ ಗ್ರಾಮಗಳ ಪ್ರತಿ ಮನೆಗೂ ಕುಡಿಯುವ ನೀರು
ಈಗಾಗಲೇ 285 ಕಾಮಗಾರಿಗಳ ಅಂದಾಜು ಪತ್ರಿಕೆಗಳನ್ನು ತಯಾರಿಸಲಾಗಿದೆ. 276 ಅಂದಾಜು ಪತ್ರಿಕೆಗಳಿಗೆ ಆಡಳಿತಾತ್ಮಕ ಮತ್ತುತಾಂತ್ರಿಕ ಮಂಜೂರಾತಿದೊರೆತಿದೆ. ಈ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, 54 ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. 2023ರ ಅಂತ್ಯಕ್ಕೆ ಜಿಲ್ಲೆಯ ಎಲ್ಲ ಗ್ರಾಮಗಳ ಎಲ್ಲಾ ಜನವಸತಿಗಳ ಪ್ರತಿ ಮನೆಯೂ ಶುದ್ಧ ಕುಡಿಯುವ ನೀರಿನಿಂದ ವಂಚಿತವಾಗದಂತೆ ನಳದ ಸಂಪರ್ಕ ಕಲ್ಪಿಸಿ ಯೋಜನೆಯ ಅನುಷ್ಠಾನದ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ತಿಳಿಸಿದ್ದಾರೆ.
164 ಕೋಟಿ ವೆಚ್ಚ
ಉತ್ತರ ಕನ್ನಡ ಜಿಲ್ಲೆಯ 685 ಜನವಸತಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ 163.71 ಕೋಟಿರೂ. ಅಂದಾಜು ವೆಚ್ಚ ನಿಗದಿಪಡಿಸಲಾಗಿದ್ದು, ಶೇ. 37.50 ಕೇಂದ್ರದ ಪಾಲು, ಶೇ. 37.50 ರಾಜ್ಯದ ಪಾಲು, ಶೇ. 10 ಗ್ರಾಮ ಸಮುದಾಯದ ಪಾಲು ಹಾಗೂ ಶೇ. 15 ರಷ್ಟನ್ನುಆಯಾಗ್ರಾಮ ಪಂಚಾಯತಿಗಳು ಭರಿಸಲಿವೆ.
Recommended Video
ಏನಿದು ಯೋಜನೆ?
ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೆ ಪ್ರತಿ ದಿನಕ್ಕೆ 55 ಲೀ. ಶುದ್ಧ ಕುಡಿಯುವ ನೀರನ್ನು ನಲ್ಲಿ ಸಂಪರ್ಕದ ಮೂಲಕ ಪೂರೈಸುವ ಉದ್ದೇಶವನ್ನು ಜಲ ಜೀವನ್ ಮಿಷನ್ ಹೊಂದಿದೆ. ಗ್ರಾಮಕ್ಕೆ ನೀರು ಪೂರೈಸುವ ಯೋಜನೆಗಳ ಜಲಮೂಲಗಳ ಪುನಶ್ಚೇತನ ಮಾಡಲಾಗುತ್ತದೆ. ನೀರು ಪೂರೈಕೆಗೆ ಈಗಾಗಲೇ ಇರುವ ಜಲಸಂಗ್ರಾಹಾಗಾರಗಳನ್ನು ನವೀಕರಣ ಮಾಡಲಾಗುತ್ತದೆ. ಅಗತ್ಯವಾದರೆ ಹೊಸ ಜಲ ಸಂಗ್ರಹಾಗಾರಗಳನ್ನು ನಿರ್ಮಿಸಲಾಗುತ್ತದೆ. ಆಯ್ಕೆಯಾದ ಜನವಸತಿಗಳಲ್ಲಿ ನೀರು ವಿತರಣಾ ವ್ಯವಸ್ಥೆಯ ಮೂಲಕ ಪ್ರತಿ ಮನೆಗೂ ನಲ್ಲಿ ಸಂಪರ್ಕಗಳನ್ನು ಕಲ್ಪಿಸಲಾಗುತ್ತದೆ. ಬಳಕೆಯಾಗುವ ನೀರಿಗೆ ಮೀಟರ್ ಗಳನ್ನು ಅಳವಡಿಸಲಾಗುತ್ತದೆ.