ತೌಕ್ತೆ ಚಂಡಮಾರುತ ಹಾನಿಯ ಅಧ್ಯಯನ ನಡೆಸಲು ರಾಜ್ಯಕ್ಕೆ ಕೇಂದ್ರ ತಂಡ
ಕಾರವಾರ, ಜೂನ್ 16: ಇತ್ತೀಚಿಗೆ ಪಶ್ಚಿಮ ಕರಾವಳಿಗೆ ಅಪ್ಪಳಿಸಿದ್ದ ತೌಕ್ತೆ ಚಂಡಮಾರುತದ ಹಾನಿಯ ಅಧ್ಯಯನ ನಡೆಸಲು ಕೇಂದ್ರ ಸರ್ಕಾರದ ತಂಡವು ಇಂದು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಲಿದೆ.
ಕೇಂದ್ರ ಸರ್ಕಾರದ ಆರು ಜನ ಅಧಿಕಾರಿಗಳ ತಂಡ ಕಾರವಾರಕ್ಕೆ ಆಗಮಿಸಲಿದ್ದು, ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.
'ತೌಕ್ತೆ'ಯಿಂದಾಗಿ ಉತ್ತರ ಕನ್ನಡದಲ್ಲಿ 60 ಕೋಟಿ ರೂ. ನಷ್ಟ: ಸಚಿವ ಆರ್.ಅಶೋಕ್
ನಂತರ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ತೌಕ್ತೆ ಚಂಡಮಾರುತದಿಂದ ಆಗಿರುವ ಹಾನಿ ವಿವರ ಪಡೆದು, ಗುರುವಾರ ಉತ್ತರ ಕನ್ನಡ ಜಿಲ್ಲೆಯ ಚಂಡಮಾರುತದಿಂದ ಹಾನಿಗೊಳಗಾದ ಭಟ್ಕಳ, ಹೊನ್ನಾವರ, ಕುಮಟಾ ಭಾಗಕ್ಕೆ ಕೇಂದ್ರ ತಂಡ ಭೇಟಿ ನೀಡಲಿದೆ. ನಂತರ ಉಡುಪಿ ಜಿಲ್ಲೆಯ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಲಿದೆ.
ಮೇ ತಿಂಗಳಲ್ಲಿ ಸಂಭವಿಸಿದ ತೌಕ್ತೆ ಚಂಡಮಾರುತದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಅಂದಾಜು 102 ಕೋಟಿ ರುಪಾಯಿಗೂ ಹೆಚ್ಚು ನಷ್ಟವಾಗಿದ್ದು, ಹಲವು ಕಡೆ ಮನೆಗಳು ಹಾನಿಯಾಗಿದ್ದರೆ, ಕಡಲ ಕೊರೆತದಿಂದ ಸಮುದ್ರದ ಅಂಚಿನಲ್ಲಿ ಸಾಕಷ್ಟು ಮೀನುಗಾರರ ಬೋಟುಗಳು ಸಹ ಹಾನಿಗೀಡಾಗಿದ್ದವು.
Recommended Video
ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದ್ದರೂ ತಕ್ಷಣದ ಪರಿಹಾರವಾಗಿ ರಾಜ್ಯ ಸರ್ಕಾರ ಅಲ್ಪ ಹಾನಿಗೆ 10 ಸಾವಿರ, ಮನೆ ಹಾನಿಗೆ 1 ಲಕ್ಷದ ರೂ. ವರೆಗೆ ಪರಿಹಾರ ನೀಡಲಾಗಿತ್ತು. ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಇಂದು ಸಂಜೆ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ, ಅಧ್ಯಯನ ನಡೆಸಿ ನಂತರ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದೆ ಎನ್ನಲಾಗಿದೆ.