ಸೆ.5ರಂದು ಉತ್ತರ ಕನ್ನಡ ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ತಂಡದ ಭೇಟಿ
ಕಾರವಾರ, ಸೆಪ್ಟೆಂಬರ್ 4: ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರ್ಷದ ಮುಂಗಾರಿನಲ್ಲಿ ಉಂಟಾಗಿದ್ದ ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿಯ ಅಧ್ಯಯನಕ್ಕಾಗಿ ಕೇಂದ್ರದ ನೆರೆಹಾನಿ ಅಧ್ಯಯನ ತಂಡ ಸೆ.5 ಮತ್ತು 6ರಂದು ಉತ್ತರ ಕನ್ನಡಕ್ಕೆ ಭೇಟಿ ನೀಡುತ್ತಿದೆ.
ರಾಜ್ಯದ ನೆರೆ ಅಧ್ಯಯನಕ್ಕೆ ಕೇಂದ್ರದ ಏಳು ಅಧಿಕಾರಿಗಳ ನಿಯೋಗ ಬರಲಿದ್ದು, ಎರಡು ದಿನಗಳ ಕಾಲ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ. ಮಳೆ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಲಿರುವ ಏಳು ಜನರ ಮೂರು ತಂಡಗಳು ಧಾರವಾಡ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಹಾವೇರಿ ಜಿಲ್ಲೆಗಳಲ್ಲಿ ಮಳೆ ಹಾನಿ ಬಗ್ಗೆ ಅಧ್ಯಯನ ನಡೆಸಲಿದೆ.
ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಒಂದು ತಂಡ, ಧಾರವಾಡ ಮತ್ತು ಬಾಗಲಕೋಟಿ ಜಿಲ್ಲೆಗಳಿಗೆ ಇನ್ನೊಂದು ಹಾಗೂ ಬೆಳಗಾವಿಗೆ ಮತ್ತೊಂದು ತಂಡ ಪ್ರತ್ಯೇಕವಾಗಿ ಭೇಟಿ ನೀಡಲಿದೆ.
ಉತ್ತರ ಕನ್ನಡಕ್ಕೆ ಸೆ.5ರ ಸಂಜೆ 7.30ಕ್ಕೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಎಸ್. ವಿಜಯಕುಮಾರ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕೈಲಾಶ್ ಸಂಖ್ಲಾ ನೇತೃತ್ವದ ತಂಡ ಭೇಟಿ ನೀಡಿ ಇಲ್ಲೇ ವಾಸ್ತವ್ಯ ಹೂಡಲಿದೆ. ಮಾರನೇ ದಿನ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿಗಳ್ನು ಈ ತಂಡ ಸಂಗ್ರಹ ಮಾಡಲಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾಗಿದ್ದ ಪ್ರವಾಹದಿಂದ ಸುಮಾರು 737.54 ಕೋಟಿ ರೂಪಾಯಿಯಷ್ಟು ರಸ್ತೆ, ಸೇತುವೆ, ಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ 202.65 ಕಿ.ಮೀ.ನಷ್ಟು ರಾಜ್ಯ ಹೆದ್ದಾರಿ, 576.77 ಕಿ.ಮೀ.ನಷ್ಟು ಜಿಲ್ಲಾ ಮುಖ್ಯ ರಸ್ತೆ, 627.45 ಕಿ.ಮೀ.ನಷ್ಟು ಗ್ರಾಮೀಣ ಮುಖ್ಯ ರಸ್ತೆ ಹಾಗೂ ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯ 43.41 ಕಿ.ಮೀ. ರಸ್ತೆ ಹಾನಿಗೊಳಗಾಗಿದೆ.
ಇವುಗಳ ಅಂದಾಜು ಮೊತ್ತ 387.80 ಕೋಟಿಯಷ್ಟಾಗಿವೆ. ಇವುಗಳಷ್ಟೇ ಅಲ್ಲದೇ 95 ಕೋಟಿ ಅಂದಾಜು ಮೊತ್ತದ ರಾಷ್ಟ್ರೀಯ ಹೆದ್ದಾರಿಗೂ ಹಾನಿಯಾಗಿವೆ.
ಇನ್ನು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ವ್ಯಾಪ್ತಿಯಲ್ಲಿ ಬರುವ 59 ಸೇತುವೆಗಳಿಗೆ ಹಾನಿಯಾಗಿದ್ದು, ಇವುಗಳ ಅಂದಾಜು ಹಾನಿಯ ಮೊತ್ತ 10.37 ಕೋಟಿ. ಲೋಕೋಪಯೋಗಿ ಇಲಾಖೆಗೆ ಸೇರಿದ 139.46 ಕೋಟಿ ಅಂದಾಜು ವೆಚ್ಚದ 247 ಸೇತುವೆಗಳಿಗೆ ನೆರೆಯಿಂದ ಹಾನಿಯಾಗಿದೆ.
Recommended Video