ಪೆಟ್ರೋಲ್ನಲ್ಲಿ ನೀರು ಮಿಶ್ರಣ: ಬಂಕ್ ಮಾಲೀಕರಿಗೆ ಬಿತ್ತು 15 ಲಕ್ಷ ರೂ. ದಂಡ!
ಕಾರವಾರ, ಫೆಬ್ರವರಿ 17: ಕಳೆದ 2018ರಲ್ಲಿ ಕಾರಿಗೆ ಹಾಕಲಾಗಿದ್ದ ಪೆಟ್ರೋಲ್ನಲ್ಲಿ ನೀರು ಮಿಶ್ರಣಗೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕಾರವಾರದ ಜಿಲ್ಲಾ ಗ್ರಾಹಕ ನ್ಯಾಯಾಲಯವು ಭಟ್ಕಳದ ಜೆ.ಅಬ್ದುರಹೀಮ್ ಪೆಟ್ರೋಲ್ ಬಂಕ್ ಮಾಲೀಕರಾದ ಫೈಮಾನ್ ಅಲಿ ಮುರ್ತುಝಾ ಹಾಗೂ ಸಿರಾಜುದ್ದೀನ್ ಅವರಿಗೆ ರೂ. 15,13,475 ದಂಡವನ್ನು ವಾರ್ಷಿಕ 6% ಬಡ್ಡಿಯನ್ನು ಸೇರಿಸಿ ಕಾರಿನ ಮಾಲೋಕರಿಗೆ ಪರಿಹಾರವಾಗಿ ನೀಡುವಂತೆ ಆದೇಶ ನೀಡಿದೆ.
ಅಲ್ಲದೇ ಘಟನೆಯಿಂದಾಗಿ ಕಾರಿನ ಮಾಲೀಕ ಅನುಭವಿಸಿದ ಮಾನಸಿಕ ಹಿಂಸೆಗೆ ಪರಿಹಾರವಾಗಿ ರೂ. 50,000 ಹಾಗೂ ದೂರು ದಾಖಲಿನ ಖರ್ಚು ವೆಚ್ಚವಾಗಿ 10,000 ರೂ.ಗಳನ್ನು ನೀಡಬೇಕು ಮತ್ತು ಒಟ್ಟು ಪರಿಹಾರದ ಹಣವನ್ನು 30 ದಿನಗಳ ಒಳಗಾಗಿ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಭಾರತದ ಈ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 5 ರೂ ಇಳಿಕೆ!
ಪ್ರಕರಣದ ವಿವರ:
ಕಳೆದ 2018ರ ಮಾರ್ಚ್ ತಿಂಗಳಿನಲ್ಲಿ ಭಟ್ಕಳದ ಸಂಶುದ್ದೀನ್ ಸರ್ಕಲ್ನಲ್ಲಿರುವ ಜೆ.ಅಬ್ದುರಹೀಮ್ ಪೆಟ್ರೋಲ್ ಬಂಕ್ ನಲ್ಲಿ ತಮ್ಮ ಕಾರಿಗೆ 57 ಲೀಟರ್ ಪೆಟ್ರೋಲ್ ಹಾಕಿಸಿಕೊಂಡಿದ್ದ (ಕಾರಿನ ಟ್ಯಾಂಕ್ ನ ಒಟ್ಟು ಸಾಮರ್ಥ್ಯ 60 ಲೀ.) ಭಟ್ಕಳದ ಮುಖ್ಯ ರಸ್ತೆಯ ನಿವಾಸಿ, ಉದ್ಯಮಿ ಮಹ್ಮದ್ ಅನ್ಸಾರ್ ಎಂಬುವವರು, ನಂತರ ಸಾಗರ ರಸ್ತೆ ಮಾರ್ಗವಾಗಿ 1.5 ಕಿ.ಮೀ. ತೆರಳುವಷ್ಟರಲ್ಲಿ ಕಾರು ಬಂದ್ ಆಗಿತ್ತು.
ನಂತರ ಅನ್ಸಾರ್ ಸಾಗರ ರಸ್ತೆ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದವರ ಸಹಕಾರದೊಂದಿಗೆ ಮೆಕ್ಯಾನಿಕ್ ಅನ್ನು ಸ್ಥಳಕ್ಕೆ ಕರೆಯಿಸಿಕೊಂಡು ಪರಿಶೀಲಿಸಲಾಗಿ, ಕಾರಿಗೆ ಹಾಕಲಾಗಿದ್ದ ಪೆಟ್ರೋಲ್ನಲ್ಲಿ ನೀರು ಮಿಶ್ರಣವಾಗಿರುವ ಬಗ್ಗೆ ತಿಳಿದು ಬಂದಿತ್ತು.
Recommended Video
ಬಳಿಕ ಅನ್ಸಾರ್ ಭಟ್ಕಳ ನಗರ ಠಾಣೆಯಲ್ಲಿ ಪೆಟ್ರೋಲ್ ಬಂಕ್ ವಿರುದ್ಧ ದೂರು ದಾಖಲಿಸಿದ್ದಲ್ಲದೇ, ತಮಗೆ ಪರಿಹಾರ ನೀಡುವಂತೆ ಕಾರವಾರ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ದೂರಿಗೆ ಸಂಬಂಧಿಸಿದಂತೆ ಭಟ್ಕಳ ನಗರ ಠಾಣಾ ಪೊಲೀಸರು ಬಂಕ್ ಮಾಲೀಕ ಫೈಮಾನ್ರನ್ನು ಕೂಡ ಈ ಹಿಂದೆಯೇ ಬಂಧಿಸಿದ್ದರು.