ಸಿದ್ದಾಪುರ ಬಳಿ ಹಳ್ಳಕ್ಕೆ ಬಿದ್ದ ಕಾರು; ನಾಲ್ವರ ದುರ್ಮರಣ
ಕಾರವಾರ, ಅಕ್ಟೋಬರ್ 15: ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹೆಗ್ಗರಣಿ ಬಳಿ ಕಾರೊಂದು ಹಳ್ಳಕ್ಕೆ ಬಿದ್ದು ಕೊಚ್ಚಿಹೋಗಿದ್ದು, ನಾಲ್ವರು ಮೃತಪಟ್ಟಿದ್ದಾರೆ.
ಹುಬ್ಬಳ್ಳಿ ಮೂಲದ ಅಕ್ಷತಾ, ನಿಶ್ಚಲ್, ಸುಷ್ಮಾ ಹಾಗೂ ರೋಷನ್ ಎಂಬುವವರು ಮೃತಪಟ್ಟಿದ್ದಾರೆನ್ನಲಾಗುತ್ತಿದೆ. ಉಂಚಳ್ಳಿ ಜಲಪಾತ ವೀಕ್ಷಿಸಿ ಬುಧವಾರ ರಾತ್ರಿಯ ವೇಳೆ ಉರಿಗೆ ವಾಪಸ್ಸಾಗುತ್ತಿದ್ದ ಹುಬ್ಬಳ್ಳಿ ಮೂಲದ ನಾಲ್ವರಿದ್ದ ಕೋಡಣಮನೆ ಗ್ರಾಮದ ಬಳಿ ರಸ್ತೆ ಪಕ್ಕದಲ್ಲಿದ್ದ ಹಳ್ಳಕ್ಕೆ ಕಾರು ಬಿದ್ದಿದೆ.
ಮಳೆಯಾಗುತ್ತಿದ್ದ ಹಿನ್ನಲೆಯಲ್ಲಿ ರಸ್ತೆ ತಿರುವು ತಿಳಿಯದೇ ಹಳ್ಳಕ್ಕೆ ಬಿದ್ದಿದ್ದು ಕಾರು ನೀರಿನಲ್ಲೇ ಸುಮಾರು ಅರ್ಧ ಕಿಲೋ ಮೀಟರ್ ದೂರ ಹೋಗಿ ಬಿದ್ದಿದ್ದು, ಗುರುವಾರ ಮಧ್ಯಾಹ್ನದ ಹೊತ್ತಿದೆ ಕಾರು ಹಳ್ಳಕ್ಕೆ ಬಿದ್ದಿರುವುದನ್ನ ಸ್ಥಳೀಯರೊಬ್ಬರು ಗಮನಿಸಿದ್ದರಿಂದ ಘಟನೆ ಬೆಳಕಿಗೆ ಬಂದಿದ್ದು ತಕ್ಷಣ ವಿಷಯವನ್ನು ಪೊಲೀಸರಿಗೆ ತಿಳಿಸಿ ಕಾರನ್ನು ಮೇಲೆತ್ತುವ ಕಾರ್ಯ ಮಾಡಿದ್ದರು.
ಕಾರಿನಲ್ಲಿದ್ದ ನಾಲ್ವರು ಹುಬ್ಬಳ್ಳಿ ಮೂಲದವರಾಗಿದ್ದು, ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದರು. ಬುಧವಾರ ಮುಂಡಗೋಡ ತಾಲೂಕಿನ ಪಾಳಾ ಗ್ರಾಮದಲ್ಲಿನ ತನ್ನ ಸ್ನೇಹಿತನನ್ನು ನೋಡಲು ಬಂದಿದ್ದು, ಇದಾದ ನಂತರ ಫಾಲ್ಸ್ ವೀಕ್ಷಣೆ ಮಾಡಿ ಬರಲು ತೆರಳಿದ್ದರು ಎನ್ನಲಾಗಿದೆ.
ಮೃತಪಟ್ಟ ನಾಲ್ವರಲ್ಲಿ ಮೂವರ ಮೃತದೇಹ ದೊರೆತಿದ್ದು ನೀರಿನಲ್ಲಿ ನಾಪತ್ತೆಯಾದ ಮತ್ತೋರ್ವರ ಶವಕ್ಕೆ ಹುಡುಕಾಟ ನಡೆಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್, ಶಿರಸಿ ಡಿವೈಎಸ್ಪಿ ಜಿ.ಟಿ.ನಾಯಕ ಸೇರಿದಂತೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Recommended Video