ಖಾತೆ ಹಂಚಿಕೆಯಲ್ಲಿ ಎಲ್ಲರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲ: ಹೆಬ್ಬಾರ್
ಕಾರವಾರ, ಆಗಸ್ಟ್ 07: "ಕಾರ್ಯಕರ್ತನಾದವನಿಗೆ ಶಾಸಕನಾಗಬೇಕು, ಶಾಸಕನಾದ ಕೂಡಲೇ ಮಂತ್ರಿಯಾಗಬೇಕು. ಮಂತ್ರಿಯಾದ ಮೇಲೆ ಮುಖ್ಯಮಂತ್ರಿ ಸ್ಥಾನ ಬೇಕು, ಇಂತಹದೇ ಖಾತೆ ಬೇಕು ಎನ್ನುವ ಬೇಡಿಕೆ ಇರುತ್ತದೆ. ಹೈ ಇನ್ಫ್ಲುಯೆನ್ಸ್ನವರನ್ನು ಸಮಾಧಾನ ಪಡಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರಿಗೆ ಅದರ ಕಷ್ಟ ಗೊತ್ತಿರುತ್ತದೆ,'' ಎಂದು ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಕಾರವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿಗಳು ಯಾವ ಜವಾಬ್ದಾರಿ ಕೊಟ್ಟಿದ್ದಾರೋ ಸರ್ಕಾರಕ್ಕೆ, ಪಕ್ಷಕ್ಕೆ ಗೌರವ ತರುವ ರೀತಿಯಲ್ಲಿ ಕೆಲಸ ಮಾಡುತ್ತೇವೆ. ಮುಖ್ಯಮಂತ್ರಿಗಳು ನಾನು ಕೇಳಿದ ಖಾತೆಯನ್ನೇ ನೀಡಿದ್ದಾರೆ. ಕಾರ್ಮಿಕ ಖಾತೆಯ ಸಚಿವನಾಗಿಯೇ ಮುಂದುವರೆಯುತ್ತೇನೆ. ಕ್ಯಾಬಿನೆಟ್ ಹಂಚಿಕೆ ಈಗಾಗಲೇ ಮುಗಿದಿದ್ದು, ಯಾರಿಗೂ ಕೂಡ ಖಾತೆ ಕುರಿತು ಅಸಮಾಧಾನ ಇಲ್ಲ. ಅತೃಪ್ತರೊಂದಿಗೆ ರಮೇಶ ಜಾರಕಿಹೊಳಿ ಸಭೆ ನಡೆಸಿರುವ ವಿಚಾರದ ಕುರಿತು ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ, "ಈ ಕುರಿತು ನನಗೆ ಮಾಹಿತಿ ಇಲ್ಲ. ರಮೇಶ ಜಾರಕಿಹೊಳಿ ಈಗಲೂ ನನ್ನ ಸ್ನೇಹಿತ,'' ಎಂದಷ್ಟೇ ಹೇಳಿದ್ದಾರೆ.
ಭಟ್ಕಳವನ್ನೇ ಹೆಚ್ಚು ನಾನು ಒತ್ತಿ ಹೇಳುವುದಿಲ್ಲ
ಭಟ್ಕಳದಲ್ಲಿ ಐಎಸ್ಐಎಸ್ ಸಂಪರ್ಕದಲ್ಲಿದ್ದ ಓರ್ವನ ಬಂಧನ ಕುರಿತು ಪ್ರತಿಕ್ರಿಯೆ ನೀಡಿದ ಶಿವರಾಮ ಹೆಬ್ಬಾರ್, "ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಎಲ್ಲವೂ ದೆಹಲಿಯಿಂದ ಆಗಲಿದೆ. ವಿವಿಧ ಹಂತದಲ್ಲಿ ಪರಿಶೀಲನೆ ನಡೆಸಿಯೇ ಬಂಧಿಸಲಾಗಿದೆ. ಹೆಚ್ಚಿನ ತನಿಖೆಗೆ ದೆಹಲಿಗೆ ಕರೆದೊಯ್ದಿದ್ದಾರೆ. ತನಿಖೆ ಇನ್ನೂ ಆರಂಭದಲ್ಲಿದ್ದು, ದೆಹಲಿಯಲ್ಲಿ ಮತ್ತಷ್ಟು ವಿಚಾರಣೆ ನಡೆಯಲಿದೆ ಎಂದ ಅವರು, ಈ ಪ್ರಕರಣಗಳಲ್ಲಿ ಭಟ್ಕಳವನ್ನೇ ಹೆಚ್ಚು ನಾನು ಒತ್ತಿ ಹೇಳುವುದಿಲ್ಲ.''
ಕಾರವಾರಕ್ಕೆ ಸಚಿವರ ಸಭೆಗೆ ಬರುತ್ತಿದ್ದ ಕಾರು ಪಲ್ಟಿ: ಓರ್ವ ಅಧಿಕಾರಿ ಸಾವು
ನೈಟ್ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿ
"ಭಯೋತ್ಪಾದನೆ ಮತ್ತು ದೇಶದ್ರೋಹಿ ಘಟನೆಗಳು ಯಾವ ತಾಲೂಕು, ಯಾವುದೇ ಜಿಲ್ಲೆ, ಯಾವ ಸಮಾಜ, ಯಾವುದೇ ಧರ್ಮದಿಂದಾಗಲಿ ಅದನ್ನು ನಿರ್ಲಕ್ಷಿಸುವ ಮಾತೇ ಇಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿದೆ. ಪೊಲೀಸ್ ಇಲಾಖೆ ಸೂಕ್ತವಾಗಿ ಸರಿಯಾದ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲಿದೆ. ಈಗಾಗಲೇ ಶೇಕಡಾವಾರು ಕೋವಿಡ್ ಪಾಸಿಟಿವಿಟಿ ದರದ ಆಧಾರದಲ್ಲಿ ಗಡಿ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂಗೆ ಕ್ರಮ ಕೈಗೊಳ್ಳಲಾಗಿದೆ. ಉತ್ತರ ಕನ್ನಡದಲ್ಲಿ ಈ ದರ ಶೇ.1ಕ್ಕಿಂತಲೂ ಕಡಿಮೆ ಇದೆ,'' ಎಂದು ಹೇಳಿದರು.
200 ಕೋಟಿಯಷ್ಟು ರಸ್ತೆಗಳ ದುರಸ್ತಿಗೆ ಅನುದಾನ
"ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿ, 200 ಕೋಟಿಯಷ್ಟು ರಸ್ತೆಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸ್ವಲ್ಪ ಮಳೆ ತಹಬದಿಗೆ ಬಂದಿದ್ದು, ಮುಂದೇನು ಕೆಲಸಗಳಾಗಬೇಕು ಎನ್ನುವುದನ್ನು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ಮುಖ್ಯಮಂತ್ರಿಗಳು ಸೂಚನೆಯಂತೆ ರಾಜ್ಯದ ಪ್ರವಾಹ ಪೀಡಿತ ಎಲ್ಲಾ ಜಿಲ್ಲೆಗಳಲ್ಲಿ ಸಚಿವರು ಪರಿಶೀಲನೆ ನಡೆಸಲಿದ್ದು, ನಾನು ಕೂಡ ಮಧ್ಯಾಹ್ನ ವಿವಿಧೆಡೆ ತೆರಳಿ ಪರಿಶೀಲಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಿದ್ದೇನೆ. ಇನ್ನು ಕಳಚೆ ಗ್ರಾಮ ಸ್ಥಳಾಂತರಕ್ಕೆ ಜಾಗ ಗುರುತು ಮಾಡಿಡಲಾಗಿದೆ. ಜಾಗದ ಕೊರತೆ ಇಲ್ಲ. ಅಲ್ಲಿನ ಜನರೊಂದಿಗೆ ಚರ್ಚೆ ಮಾಡಿ ಮುಂದುವರಿಯುತ್ತೇವೆ,'' ಎಂದು ತಿಳಿಸಿದರು.
ಚಿಕಿತ್ಸೆಗೆ ವಿಶೇಷ ವ್ಯವಸ್ಥೆ ಮಾಡಲು ಸೂಚನೆ
ಇನ್ನು ಕಾರವಾರಕ್ಕೆ ಸಭೆಗೆ ಬರುವಾಗ ಅಪಘಾತ ನಡೆದು ಅಧಿಕಾರಿ ಮೃತಪಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಸಚಿವ ಶಿವರಾಮ ಹೆಬ್ಬಾರ್, "ದುರದೃಷ್ಟವಶಾತ್ ಇವತ್ತು ಕಾರವಾರದ ಸಭೆಗೆ ಬರುವಾಗ ಕಾರು ಅಪಘಾತವಾಗಿ ಸಿದ್ದಾಪುರದ ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸ್ಥಳದಲ್ಲೇ ಮೃತಪಟ್ಟಿರುವುದು ಬಹಳ ದುಃಖದ ಸಂಗತಿ. ಉಳಿದ ಮೂವರು ಅಧಿಕಾರಿಗಳು ವೈದ್ಯರ ಮಾಹಿತಿಯಂತೆ ಅಪಾಯದಿಂದ ಪಾರಾಗಿದ್ದು, ಮಣಿಪಾಲ ಕೆಎಂಸಿಗೆ ದಾಖಲಿಸಿ ಚಿಕಿತ್ಸೆಗೆ ವಿಶೇಷ ವ್ಯವಸ್ಥೆ ಮಾಡಲು ಉಡುಪಿ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಯಾವುದೇ ತಿರುವು ಇಲ್ಲದ ನೇರ ಹೆದ್ದಾರಿಯಲ್ಲಿ, ಯಾವುದೇ ನಿರೀಕ್ಷೆ ಇಲ್ಲದ ಜಾಗದಲ್ಲಿ ಅಪಘಾತವಾಗಿದೆ. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುವೆ. ಈ ಅಪಘಾತವನ್ನು ಯಾರೂ ನಿರೀಕ್ಷಿಸಿರಲಿಲ್ಲ,'' ಎಂದು ಬೇಸರ ವ್ಯಕ್ತಪಡಿಸಿದರು.