ಕಾರವಾರ; ಸರ್ಕಾರಿ ಬಸ್ಸಲ್ಲಿ ಹೋಗುವವರಿಗೂ ಟೋಲ್ ಹೊರೆ, ಇದು ಯಾವ ನ್ಯಾಯ?
ಕಾರವಾರ, ಫೆಬ್ರವರಿ 15: ಜಿಲ್ಲೆಯ ಭಟ್ಕಳ ಗಡಿಯವರೆಗೆ ವಿಸ್ತರಣೆಗೊಂಡಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಿಸಲಾಗಿರುವ ಎರಡು ಟೋಲ್ ಕೇಂದ್ರಗಳಲ್ಲಿ ಟೋಲ್ ಸಂಗ್ರಹ ಆರಂಭವಾಗುತ್ತಿದ್ದಂತೆಯೇ, ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಮೇಲೆ ಸಾರಿಗೆ ಸಂಸ್ಥೆ ಬರೆ ಎಳೆದಿದೆ.
ಟೋಲ್ ಕೇಂದ್ರಗಳಿರುವ ಮಾರ್ಗದಲ್ಲಿ ಸಂಚರಿಸುವ ಬಸ್ ಗಳ ಟಿಕೆಟ್ ದರವನ್ನು 9 ರೂಪಾಯಿವರೆಗೆ ಹೆಚ್ಚಿಸಲಾಗಿದ್ದು, ಗುರುವಾರದಿಂದಲೇ ಹೊಸ ದರ ಜಾರಿಗೆ ಬಂದಿದೆ. ಇದರಿಂದಾಗಿ ಕಾರವಾರ, ಅಂಕೋಲಾ, ಕುಮಟಾ ಹಾಗೂ ಜಿಲ್ಲೆಯ ವಿವಿಧ ಕಡೆಗಳಿಂದ ಮಂಗಳೂರಿಗೆ ತೆರಳುವ ಹಾಗೂ ಜಿಲ್ಲೆಯ ಮಾರ್ಗವಾಗಿ ಗೋವಾಕ್ಕೆ ಹೋಗುವ ಪ್ರಯಾಣಿಕರು ಈಗ ಹೆಚ್ಚು ಹಣ ತೆರಬೇಕಾಗಿದೆ. ಹೀಗಾಗಿ ತನ್ನ ಮೇಲಿನ ಟೋಲ್ ಹೊರೆಯನ್ನು ಪ್ರಯಾಣಿಕರ ಮೇಲೆ ವರ್ಗಾಯಿಸಿರುವ ಸಾರಿಗೆ ಸಂಸ್ಥೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೆ.29ರ ತನಕ ಫಾಸ್ಟ್ ಟ್ಯಾಗ್ ಶುಲ್ಕ ಪಾವತಿಸದೆ ಮುನ್ನಡೆಯಿರಿ
ಎಲ್ಲ ಸಾರಿಗೆ ಬಸ್ ಗಳ ಟಿಕೆಟ್ ದರ 9 ರೂ ಏರಿಕೆ
ಕಾರವಾರ- ಅಂಕೋಲಾ ಮಾರ್ಗವಾಗಿ ಬೇಲೆಕೇರಿ ಬಳಿ ಇರುವ ಟೋಲ್ ಕೇಂದ್ರದಲ್ಲಿ ಹಾದು ಹೋಗುವ ಎಲ್ಲ ಸಾರಿಗೆ ಬಸ್ ಗಳ ಟಿಕೆಟ್ ದರ 9 ರೂಪಾಯಿ ಹೆಚ್ಚಾಗಿದೆ. ಕುಮಟಾ ತಾಲ್ಲೂಕಿನ ಹೊಳೆಗದ್ದೆ ಬಳಿ ಇರುವ ಟೋಲ್ ಕೇಂದ್ರವನ್ನು ಹಾದು ಹೋಗುವ ಎಲ್ಲ ಬಸ್ ಗಳ ದರವೂ 9 ರೂಪಾಯಿ ಹೆಚ್ಚಿಸಲಾಗಿದೆ. ಹಾಗಾಗಿ ಸಾಮಾನ್ಯ, ಎಕ್ಸ್ ಪ್ರೆಸ್ ಬಸ್ ಗಳಲ್ಲಿ ಸಂಚರಿಸುವ ಪ್ರಯಾಣಿಕರು ಟೋಲ್ ಶುಲ್ಕದ ಬಾಬ್ತು ಟಿಕೆಟ್ ಗೆ ಹೆಚ್ಚು ಹಣ ಕೊಡಬೇಕಾಗಿದೆ.
ಕಾರವಾರದಿಂದ ಅಂಕೋಲಾ ಹೋಗುವ ಸಾಮಾನ್ಯ ಬಸ್ ದರ 33 ರೂಪಾಯಿ ಇತ್ತು. ಗುರುವಾರದಿಂದ ಅದು 42 ರೂಪಾಯಿ ಆಗಿದೆ. ಅಲ್ಲದೇ, ಕಾರವಾರದಿಂದ ಕುಮಟಾಕ್ಕೆ ತೆರಳಲು ಹಿಂದಿನ ದರ 65 ರೂಪಾಯಿ ಇದ್ದು, ಗುರುವಾರದಿಂದ ಪ್ರಯಾಣಿಕರು 74 ರೂಪಾಯಿ ಟಿಕೆಟ್ ದರವನ್ನು ತೆತ್ತು ಪ್ರಯಾಣಿಸುವಂತಾಗಿದೆ.
ಟೋಲ್ ದಾಟಿದರೆ ಮಾತ್ರ ಹೆಚ್ಚಳ
ಟೋಲ್ ಕೇಂದ್ರಕ್ಕಿಂತ ಮೊದಲಿನ ಸ್ಥಳಗಳಿಗೆ ಈ ಹಿಂದಿನ ಟಿಕೆಟ್ ದರವೇ ಇದೆ. ಟೋಲ್ ಗೇಟ್ ನಂತರದ ಸ್ಥಳಗಳಲ್ಲಿ ಇಳಿಯುವ ಪ್ರಯಾಣಿಕರಿಗೆ ಮಾತ್ರ ಈ ದರ ಹೆಚ್ಚಳ ಹೊರೆಯಾಗಲಿದೆ. ಹೀಗಾಗಿ ಕೇಂದ್ರ ದಾಟಿದ ನಂತರ ಸಿಗುವ ಎಲ್ಲ ಸ್ಥಳಗಳಿಗೆ ತೆರಳುವ ಪ್ರಯಾಣಿಕರು ಹೆಚ್ಚು ಹಣ ತೆರಬೇಕಾಗಿದೆ. ಉದಾಹರಣೆಗೆ ಕಾರವಾರ ಮತ್ತು ಅವರ್ಸಾ, ಅಂಕೋಲಾ ಹಾಗೂ ಕುಮಟಾ, ಹೊನ್ನಾವರ ಹಾಗೂ ಭಟ್ಕಳ ಮಾರ್ಗಗಳ ನಡುವೆ ಸಂಚರಿಸುವ ಸಾಮಾನ್ಯ ಬಸ್ನ ಟಿಕೆಟ್ ದರದಲ್ಲಿ ವ್ಯತ್ಯಾಸವಾಗಿಲ್ಲ.
‘ಕಾರವಾರ ಅಂಕೋಲಾ ಮಾರ್ಗದಲ್ಲಿ ಬಸ್ ಗೆ 240 ರೂಪಾಯಿ ಟೋಲ್ ಇದೆ. ಒಂದು ಬಸ್ ನಲ್ಲಿ ಅಂಕೋಲಾಕ್ಕೆ ಹೋಗುವವರು ಕನಿಷ್ಠ 30 ಮಂದಿಯಾದರೂ ಇರುತ್ತಾರೆ. 9 ರೂಪಾಯಿನಂತೆ 270 ರೂಪಾಯಿ ಆಗುತ್ತದೆ. ಸಣ್ಣ ಪ್ರಮಾಣದಲ್ಲಿ ಶುಲ್ಕ ಪಡೆದರೆ ತೊಂದರೆ ಇಲ್ಲ. ಆದರೆ, ಏಕಾಏಕಿ 9 ರೂಪಾಯಿ ಹೆಚ್ಚು ಮಾಡಿದರೆ ಅದು ಸುಲಿಗೆಯಲ್ಲವೇ' ಎಂಬುದು ಪ್ರಯಾಣಿಕರ ಪ್ರಶ್ನೆಯಾಗಿದೆ.
ಹಾಗೋ ಹೀಗೋ ಹತ್ತು ವರ್ಷದ ನಂತರ ಉದ್ಘಾಟನೆ ಕಂಡಿತು ಮಂಗಳೂರು ಪಂಪ್ ವೆಲ್ ಮೇಲ್ಸೇತುವೆ
ಮಲೆನಾಡಿನ ಪ್ರಯಾಣಿಕರಿಗೂ ಹೊರೆ
ಬಳಸದ ರಸ್ತೆಗೆ ಹೆಚ್ಚುವರಿ ಟೋಲ್ ವಸೂಲಿ ಮಾಡುತ್ತಿರುವ ಸಾರಿಗೆ ಸಂಸ್ಥೆಯ ಕಾರ್ಯ ವೈಖರಿಗೆ ಪ್ರಯಾಣಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಶುಕ್ರವಾರ ಯಲ್ಲಾಪುರದಿಂದ ಕಾರವಾರಕ್ಕೆ ತೆರಳುತ್ತಿದ್ದ ಮುಂಡಗೋಡ- ಕಾರವಾರದ ಬಸ್ ನಲ್ಲಿ ಯಲ್ಲಾಪುರದಿಂದ ಅಂಕೋಲಾಕ್ಕೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ 70 ರೂ. ಟಿಕೆಟ್ ಹಣ ಹಾಗೂ 9 ರೂ. ಟೋಲ್ ಶುಲ್ಕ ಸೇರಿ ಒಟ್ಟು 79 ರೂಪಾಯಿ ತೆಗೆದುಕೊಳ್ಳಲಾಗಿದೆ. ಅಗಸೂರಿನಿಂದ ಅಂಕೋಲಾಗೆ ತೆರಳುತ್ತಿದ್ದ ಪ್ರಯಾಣಿಕರಿಗೂ ಹೆಚ್ಚುವರಿಯಾಗಿ 9 ರೂ. ಪಡೆಯಲಾಗಿದೆ. ಈ ಕುರಿತು ಬಸ್ಸಿನಲ್ಲಿರುವ ನಿರ್ವಾಹಕ ಹಾಗೂ ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆದಿದೆ. ನಿರ್ವಾಹಕ ತಮಗೆ ಸಂಸ್ಥೆ ನಿರ್ಧರಿಸಿದ ಹಣವನ್ನೇ ನಾವು ಪಡೆಯುತ್ತಿದ್ದೇವೆ. ಈ ಕುರಿತು ನಮ್ಮ ಅಧಿಕಾರಿಗಳ ಜೊತೆಗೆ ಮಾತನಾಡಿ ಎಂದು ಸಲಹೆ ನೀಡಿದ್ದಾರೆ.
ಇದೇ ರೀತಿ ಶಿರಸಿಯಿಂದ ಕುಮಟಾಕ್ಕೆ ತೆರಳುತ್ತಿರುವ ಬಸ್ಸಿನ ಪ್ರಯಾಣಿಕರಿಗೂ 9 ರೂ. ಹೆಚ್ಚುವರಿಯಾಗಿ ಟೋಲ್ ಶುಲ್ಕ ಎಂದು ತೆಗೆದುಕೊಳ್ಳಲಾಗುತ್ತಿದೆ. ಅಲ್ಲಿಯೂ ಪ್ರಯಾಣಿಕರು ಮತ್ತು ನಿರ್ವಾಹಕರ ಮಧ್ಯೆ ವಾಗ್ವಾದ ನಡೆದಿರುವ ವರದಿಯಾಗಿದೆ. ಬಾಳೇಗುಳಿಯಿಂದ ಅಂಕೋಲಾ ಬಸ್ ನಿಲ್ದಾಣಕ್ಕೆ ನಾಲ್ಕು ಕಿಲೋ ಮೀಟರ್ ಅಂತರವಿದೆ. ಯಾವುದಾದರೂ ಕಾರ್ಯಕ್ಕೆ ಯಲ್ಲಾಪುರದಿಂದ ಅಂಕೋಲಾಗೆ ತೆರಳಿರುವ ಪ್ರಯಾಣಿಕ ಅಂಕೋಲಾದಲ್ಲಿ ತನ್ನ ಚಿಕ್ಕಪುಟ್ಟ ಕೆಲಸ ಮುಗಿಸಿಕೊಂಡು, ಅಂಕೋಲಾದಿಂದ ಕಾರವಾರಕ್ಕೆ ತೆರಳುವ ಬೇರೊಂದು ಬಸ್ ಏರಿದಾಗಲೂ ಆತ 9 ರೂ. ಮತ್ತೆ ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ.
ಚತುಷ್ಪಥ ಬಳಸದಿದ್ದರೂ ಹಣ ತೆರಬೇಕೇಕೆ?
ಚತುಷ್ಪಥ ಹೆದ್ದಾರಿಯನ್ನು ಕಂಡ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಜನತೆಯಷ್ಟೇ ಅಲ್ಲದೆ, ಮಲೆನಾಡು ಭಾಗದ ಜನರು ಚತುಷ್ಪಥ ಬಳಕೆ ಮಾಡದಿದ್ದರೂ ಟೋಲ್ ಗೇಟ್ ಗಳಿಗೆ ಹಣ ತೆರಬೇಕಾಗಿ ಬಂದಿದೆ. ಸಾರಿಗೆ ಸಂಸ್ಥೆ ಟೋಲ್ ಶುಲ್ಕ ವಸೂಲಿ ಮಾಡುವುದಾದರೆ ಒಬ್ಬ ಪ್ರಯಾಣಿಕನಿಗೆ ದಿನಕ್ಕೆ ಒಂದು ಬಾರಿ ವಸೂಲಿ ಮಾಡಿ, ಅದಕ್ಕೆ ಪ್ರತ್ಯೇಕ ರಸೀದಿ ಕೊಡಬೇಕು. ಮತ್ತು ಆ ರಸೀದಿ ಹೋಗಿ ಬರುವಾಗ ಅಥವಾ ಬೇರೊಂದು ಬಸ್ಸಿನಲ್ಲಿ ಪ್ರಯಾಣಿಸಿದಾಗ ಬಳಕೆಯಾಗುವಂತಿರಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಈ ಬಗ್ಗೆ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗೀಯ ನಿಯಂತ್ರಕ ಪ್ರವೀಣ್ ಶೇಟ್ ಅವರನ್ನು ಕೇಳಿದರೆ, 'ಟೋಲ್ ಗೇಟ್ ದಾಟುವ ಪ್ರಯಾಣಿಕರಿಂದ ಮಾತ್ರ ಹೆಚ್ಚುವರಿ ಟೋಲ್ ಶುಲ್ಕ ಪಡೆಯಲಾಗುತ್ತದೆ. ಈ ಬಗ್ಗೆ ನಿರ್ವಾಹಕರ ಟಿಕೆಟ್ ಮಶೀನ್ ನಲ್ಲೇ ದರ ನಿಗದಿ ಮಾಡಲಾಗಿದ್ದು, ಟೋಲ್ ಗೇಟ್ ದಾಟುವವರಿಗೆ ಸ್ವಯಂಚಾಲಿತವಾಗಿ ಅದು ಹೆಚ್ಚುವರಿ ಶುಲ್ಕ ನಮೂದಿಸುತ್ತದೆ. ಯಲ್ಲಾಪುರದಿಂದ ಅಂಕೋಲಾಕ್ಕೆ ತೆರಳುವ ಪ್ರಯಾಣಿಕರಿಗೆ ಹೆಚ್ಚುವರಿಯಾಗಿ ಶುಲ್ಕ ವಸೂಲು ಮಾಡಿರುವ ಬಗ್ಗೆ ಪರಿಶೀಲಿಸಲಾಗುವುದು' ಎನ್ನುತ್ತಾರೆ.