ದಲೈಲಾಮ ಹತ್ಯೆ ಸಂಚು:ಬೌದ್ಧ ಬಿಕ್ಕುಗಳಿಗೆ ಸಮಾಧಾನಪಡಿಸಿದ ಅಧಿಕಾರಿಗಳು
ಕಾರವಾರ, ಅಕ್ಟೋಬರ್.05: ಬೌದ್ಧಗುರು ದಲೈಲಾಮ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಸುದ್ದಿ ಇದೀಗ ಟಿಬೇಟಿಯನ್ನರನ್ನು ತಲ್ಲಣಗೊಳಿಸಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಟಿಬೇಟಿಯನ್ನರ ನಿರಾಶ್ರಿತರ ಕೇಂದ್ರದಲ್ಲಿರುವ ಬೌದ್ಧ ಸನ್ಯಾಸಿಗಳಲ್ಲಿ ಈ ಸುದ್ದಿ ಸಂಚಲನ ಸೃಷ್ಟಿಸಿದೆ.
ಬೌದ್ಧಗುರು ದಲೈಲಾಮಾ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಆಗಸ್ಟ್ 5ರ ರಾತ್ರಿ ರಾಮನಗರದಲ್ಲಿ ಬಂಧಿತನಾಗಿದ್ದ ಜಾರ್ಖಂಡ್ ಮೂಲದ ಉಗ್ರ ಮುನೀರ್ ಬಾಯ್ಬಿಟ್ಟಿದ್ದ. ದಲೈಲಾಮಾರನ್ನ ಬಾಂಬ್ ನಿಂದ ಸ್ಫೋಟಿಸಿ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ಮಾಹಿತಿಯನ್ನು ಆತ ವಿಚಾರಣೆಯ ವೇಳೆ ಬಿಚ್ಚಿಟ್ಟಿದ್ದ.
ರಾಮನಗರದಲ್ಲಿ ನಡೆದಿತ್ತು ಬೌದ್ಧಗುರು ದಲೈಲಾಮ ಹತ್ಯೆಗೆ ಸಂಚು
ಬೌದ್ಧ ಧರ್ಮಗುರು ದಲೈಲಾಮಾ ಅವರು ರೋಹಿಂಗ್ಯಾಗಳಿಗೆ ವಿರೋಧಿಯಾಗಿದ್ದರು. ರೋಹಿಂಗ್ಯಾಗಳಿಗೆ ವಿರೋಧಿಯಾಗಿದ್ದರಿಂದ ಜೆಎಂಬಿ ಉಗ್ರ ಸಂಘಟನೆ ಹತ್ಯೆಗೆ ಸಂಚು ರೂಪಿಸಿತ್ತು ಎಂದು ಆತ ಹೇಳಿಕೆ ನೀಡಿದ್ದ. ಈ ಸುದ್ದಿ ಹೊರಬೀಳುತ್ತಿದ್ದಂತೆ, ನಿರಾಶ್ರಿತರ ನೆಲೆಯಲ್ಲಿ ಎಲ್ಲವೂ ಸುರಕ್ಷಿತವಾಗಿದೆ ಎಂದು ಸರ್ಕಾರ, ಅಧಿಕಾರಿಗಳು ಇಲ್ಲಿನ ಬಿಕ್ಕುಗಳಿಗೆ ಸಮಾಧಾನಿಸುತ್ತಿದ್ದಾರೆ.
ಆದರೆ, ದೇವರಂತೆ ಪೂಜಿಸಲಾಗುವ ಗುರುವಿನ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಸಂಗತಿ ಬಿಕ್ಕುಗಳಲ್ಲಿ ಒಳಗೊಳಗೆ ಆತಂಕ ಉಂಟುಮಾಡಿದೆ. ದೆಹಲಿ, ಬೆಂಗಳೂರಿನಲ್ಲಿರುವ ಟಿಬೆಟಿಯನ್ ರಾಜಕೀಯ ಪ್ರಮುಖರು ಕಾಲಕಾಲಕ್ಕೆ ಇಲ್ಲಿಯ ಪ್ರಮುಖರಿಗೆ ಮಾಹಿತಿಗಳನ್ನು ರವಾನಿಸುತ್ತಿದ್ದಾರೆ.
ಉಗ್ರ ಮುನೀರ್ ನ ಖಾಂದಾನ್ ರಾಮನಗರದಲ್ಲೇ ಬಿಡಾರ ಹೂಡಿತ್ತು
ಬೌದ್ಧ ಮುಖಂಡರು ನಿರಾಶ್ರಿತರ ಕೇಂದ್ರದಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಇನ್ನೊಂದೆಡೆ, ದಲೈಲಾಮಾ ದೀರ್ಘಾಯುಷ್ಯಕ್ಕಾಗಿ ಬೌದ್ಧ ಸನ್ಯಾಸಿಗಳು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಈ ಕುರಿತ ಸಂಕ್ಷಿಪ್ತ ಲೇಖನ ಇಲ್ಲಿದೆ.
ಸಭೆ ನಡೆಸಿದ ಎಸ್ಪಿ
ನಿರಾಶ್ರಿತರ ಶಿಬಿರಕ್ಕೆ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಗುರುವಾರ ಮುಂಡಗೋಡದ ಟಿಬೆಟಿಯನ್ ಕಾಲೊನಿಗಳಿಗೆ ತೆರಳಿ ಸಭೆ ನಡೆಸಿದ್ದಾರೆ.
ಈ ವೇಳೆ ಎಲ್ಲ ಪ್ರಮುಖ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಶಿಬಿರದ ವಿವಿಧೆಡೆ ಅಗತ್ಯವಿದ್ದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಬಂದುಹೋಗುವವರ ಕಡ್ಡಾಯ ಪರಿಶೀಲನೆ ಮುಂತಾದ ವಿಚಾರಗಳನ್ನು ಈ ವೇಳೆ ಚರ್ಚಿಸಲಾಗಿದೆ.
ಪೊಲೀಸ್ ಇಲಾಖೆ ಕಾರ್ಯಕ್ರಮಗಳು
ನಿವಾಸಿಗಳಲ್ಲಿ ಸುರಕ್ಷತಾಭಾವ ಮೂಡಿಸಲು ಪೊಲೀಸ್ ಇಲಾಖೆ ಕಾರ್ಯಕ್ರಮಗಳನ್ನೂ ಏರ್ಪಡಿಸುತ್ತಿದೆ. "ಮುಂದಿನ ದಿನಗಳಲ್ಲಿ ಗುಪ್ತಚರ ಇಲಾಖೆಯ ಸಿಬ್ಬಂದಿಯನ್ನೂ ಒಳಗೊಂಡ ಜಂಟಿ ಸಮಿತಿ ರಚಿಸಿಕೊಂಡು ಶಿಬಿರಕ್ಕೆ ಭೇಟಿ ನೀಡಲಾಗುವುದು.
ಆಗ ಕಂಡುಬರುವ ಮಾಹಿತಿಗಳ ಅನ್ವಯ ಕ್ರಮ ಕೈಗೊಳ್ಳಲಾಗುವುದು. ಮುಂಡಗೋಡದ ಶಿಬಿರಕ್ಕೆ ಯಾವುದೇ ಭದ್ರತಾ ಬೆದರಿಕೆ ಇಲ್ಲ" ಅಂತ ವಿನಾಯಕ ಪಾಟೀಲ ಸ್ಪಷ್ಟನೆ ನೀಡಿದ್ದಾರೆ.
ಒಡೆಯರಪಾಳ್ಯದ ಟಿಬೇಟಿಯನ್ ಕ್ಯಾಂಪ್ ಗೆ ಬಿಗಿ ಪೊಲೀಸ್ ಬಂದೋಬಸ್ತ್
12 ರಾಜ್ಯಗಳಲ್ಲಿ ನೆಲೆಕಂಡುಕೊಂಡರು
60ರ ದಶಕದ ಆರಂಭದಲ್ಲಿ ಹಿಮಾಚಲ ಪ್ರದೇಶದ ಮೂಲಕ ಬಂದ ಟಿಬೇಟಿಯನ್ನರು ದೇಶದ 12 ರಾಜ್ಯಗಳಲ್ಲಿ ನೆಲೆಕಂಡುಕೊಂಡರು. ಅಂತೆಯೇ, ಕರ್ನಾಟಕದಲ್ಲಿಯೂ ನೆಲೆನಿಂತ ಅವರಿಗೆ ಸರ್ಕಾರ ಮುಂಡಗೋಡ ತಾಲ್ಲೂಕಿನಲ್ಲಿ ನಿರಾಶ್ರಿತರ ಕೇಂದ್ರಗಳನ್ನು ನಿರ್ಮಿಸಿಕೊಟ್ಟಿತ್ತು.
ಗೆಲುಕ್ಪಾ ಪಂಗಡ
ಮುಂಡಗೋಡ ತಾಲ್ಲೂಕಿನ 10 ಕ್ಯಾಂಪ್ಗಳಲ್ಲಿ 16 ಸಾವಿರದಷ್ಟು ಟಿಬೇಟಿಯನ್ನರಿದ್ದಾರೆ. ಅವರಲ್ಲಿ 7,800 ಬೌದ್ಧ ಬಿಕ್ಕುಗಳು, 280 ಬೌದ್ಧ ಬಿಕ್ಷುಣಿಯರಿದ್ದಾರೆ. 10 ಮೊನ್ಯಾಸ್ಟ್ರಿಗಳಲ್ಲಿ ಬೌದ್ಧ ಅಧ್ಯಯನ ನಿರಂತರವಾಗಿ ನಡೆಯುತ್ತಿದೆ.
ಪ್ರಮುಖ ಐದು ಪಂಗಡಗಳ ಅನುಯಾಯಿಗಳು ಬುದ್ಧನೊಂದಿಗೆ ದಲೈಲಾಮ ಅವರನ್ನೂ ನಿತ್ಯ ಪೂಜಿಸುತ್ತಾರೆ. 'ಗೆಲುಕ್ಪಾ' ಪಂಗಡಕ್ಕೆ ಸೇರಿರುವ ಅನುಯಾಯಿಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.