ಕಾರವಾರದಲ್ಲಿ 'ವೆಲ್ಕಂ ಟು ಮಹಾರಾಷ್ಟ್ರ' ಎನ್ನುತ್ತಿದೆ ಬಿಎಸ್ಎನ್ಎಲ್!
ಕಾರವಾರ, ಡಿಸೆಂಬರ್ 03: ರಾಜ್ಯದ ಗಡಿ ಜಿಲ್ಲೆ ಉತ್ತರ ಕನ್ನಡದ ಕಾರವಾರವನ್ನು ಕರ್ನಾಟಕದ ಕಾಶ್ಮೀರ ಅಂತಲೇ ಕರೆಯಲಾಗುತ್ತದೆ. ಗೋವಾ ರಾಜ್ಯ ಸಮೀಪದಲ್ಲೇ ಇದ್ದು, ಕಾರವಾರವನ್ನು ಗೋವಾಕ್ಕೆ ಸೇರಿಸಬೇಕು ಎಂದು ಕೆಲ ಮರಾಠಿ ಸಂಘಟನೆಗಳು ಹಿಂದಿನಿಂದಲೂ ಕ್ಯಾತೆ ತೆಗೆದುಕೊಂಡು ಬಂದಿದ್ದಾರೆ. ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ ಪವಾರ್ ಸಹ ಕಾರವಾರ, ಬೆಳಗಾವಿ, ನಿಪ್ಪಾಣಿ ಸೇರಿದಂತೆ ಕರ್ನಾಟಕದ ಗಡಿ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಹೇಳಿಕೆ ನೀಡಿ ಟೀಕೆಗೊಳಗಾಗಿದ್ದರು.
ಇದರ ಬೆನ್ನಲ್ಲೇ ಕಳೆದ ಕೆಲ ದಿನಗಳಿಂದ ಕಾರವಾರದ ವಿವಿಧೆಡೆ ಓಡಾಟ ನಡೆಸಿದ ಬಿಎಸ್ ಎನ್ಎಲ್ ಗ್ರಾಹಕರ ಮೊಬೈಲ್ಗೆ ವೆಲ್ ಕಮ್ ಟು ಮಹಾರಾಷ್ಟ್ರ ಬಿಎಸ್ ಎನ್ಎಲ್ ನೆಟ್ವರ್ಕ್ ಎನ್ನುವ ಸಂದೇಶ ಬರುತ್ತಿರುವುದು ಗೊಂದಲ ಮೂಡಿಸಿದೆ.
ಬಿಎಸ್ಎನ್ಎಲ್ನಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ: ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ
ಈ ಸಂದೇಶ ನೋಡಿದ ಸ್ಥಳೀಯರು ಒಮ್ಮೆ ಕಕ್ಕಾಬಿಕ್ಕಿಯಾಗಿದ್ದು, ಸದ್ದಿಲ್ಲದೇ ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಿದರಾ? ಅನ್ನುವ ಅನುಮಾನ ಮೂಡುವಂತಾಗಿದೆ. ಈ ವಿಚಾರ ಕನ್ನಡಪರ ಸಂಘಟನೆಗಳ ಪಿತ್ತ ನೆತ್ತಿಗೇರುವಂತೆ ಮಾಡಿದ್ದು ಕೂಡಲೇ ಉಂಟಾಗಿರುವ ಸಮಸ್ಯೆಯನ್ನು ಸರಿಪಡಿಸಿ ಎಂದು ಬಿಎಸ್ ಎನ್ಎಲ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕಾರವಾರಕ್ಕೆ ಗೋವಾ ಗಡಿ ಕೆಲವೇ ಕಿಲೋ ಮೀಟರ್ಗಳ ಅಂತರದಲ್ಲಿದ್ದು ಈ ಮೊದಲು ಗಡಿ ಭಾಗದ ಗ್ರಾಮಗಳಲ್ಲಿ ಕೆಲವೊಮ್ಮೆ ಮಾತ್ರ ಮಹಾರಾಷ್ಟ್ರಕ್ಕೆ ಸ್ವಾಗತ ಎನ್ನುವ ಸಂದೇಶ ಬರುತ್ತಿತ್ತು. ಆದರೆ ಇದೀಗ ಕಾರವಾರದ ಕೆಎಚ್ ಬಿ ಕಾಲೋನಿ, ಹಬ್ಬುವಾಡ ಹಾಗೂ ಬೀಚ್ನಲ್ಲಿ ತಿರುಗಾಡಿದ ಬಿಎಸ್ ಎನ್ಎಲ್ ಗ್ರಾಹಕರಿಗೂ ಈ ರೀತಿ ಸಂದೇಶ ಬರುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ.
ಈ ಬಗ್ಗೆ ಬಿಎಸ್ ಎನ್ಎಲ್ ಅಧಿಕಾರಿಗಳನ್ನು ವಿಚಾರಿಸಿದರೆ, ತಾಲ್ಲೂಕಿನ ಅಸ್ನೋಟಿ, ಮಾಜಾಳಿ ಹಾಗೂ ನಗರದಲ್ಲಿ ನೆಟ್ವರ್ಕ್ ಗಳನ್ನ ಮೇಲ್ದರ್ಜೆಗೇರಿಸುವ ಕಾರ್ಯ ಕೈಗೊಳ್ಳಲಾಗಿದ್ದು ಈ ವೇಳೆ ತಾಂತ್ರಿಕ ತೊಂದರೆಯಿಂದ ಈ ಸಂದೇಶ ಬಂದಿರುವ ಸಾಧ್ಯತೆಗಳಿವೆ. ದೂರುಗಳು ಕೇಳಿಬಂದ ಕೂಡಲೇ ಪರಿಶೀಲಿಸಿ ಸಮಸ್ಯೆ ಪರಿಹರಿಸಲಾಗಿದೆ ಎಂದಿದ್ದಾರೆ.
Recommended Video
ಗಡಿ ವಿಚಾರವಾಗಿ ಕರ್ನಾಟಕ ಮಹಾರಾಷ್ಟ್ರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವ ಈ ಸಂದರ್ಭದಲ್ಲೇ ಬಿಎಸ್ ಎನ್ಎಲ್ ನೆಟ್ವರ್ಕ್ ನ ಎಡವಟ್ಟು ಸಾಕಷ್ಟು ಟೀಕೆಗೂ ಗುರಿಯಾಗಿದೆ.