ಮೀಸಲಾತಿ ಹೋರಾಟ; ಲಿಂಗಾಯತರಿಗೆ ಉಜಿರೆ ಶ್ರೀಗಳ ಕಿವಿಮಾತು
ಕಾರವಾರ, ಫೆಬ್ರವರಿ 7: "ಅತಿ ಎತ್ತರಕ್ಕೇರಿದವರು ಕೆಳಗಿನವರ ಅವಕಾಶಕ್ಕೆ ಭಂಗ ತರುವಂಥದ್ದಾಗುತ್ತಿದೆ. ಇದು ಸಮಂಜಸವಲ್ಲ. ಸಂವಿಧಾನಾತ್ಮಕ ವಿಚಾರ ಹಾಗೂ ನ್ಯಾಯ ಕೂಡ ಅಲ್ಲ. ಆದರೆ ಇವತ್ತಿನ ಸರ್ಕಾರಗಳು, ಎಲ್ಲಾ ಪಕ್ಷಗಳು ಮತಕ್ಕಾಗಿ ಕಣ್ಮುಚ್ಚಿ ಕೂರುತ್ತಿವೆ. ಅವರವರ ಮತದ ಆಸೆಯಿಂದ ಆಯಾಯ ಜಾತಿಯ ಹಿತರಕ್ಷಣೆ ಕಾಪಾಡಿಕೊಂಡು ಹೋಗುತ್ತಿವೆ, ಅದು ತಪ್ಪು" ಎಂದು ಉಜಿರೆಯ ಶ್ರೀರಾಮ ಕ್ಷೇತ್ರದ ಮಠಾಧೀಶ ಬ್ರಹ್ಮಾನಂದ ಸರಸ್ವತಿ ಸಾಮೀಜಿ ಹೇಳಿದ್ದಾರೆ.
ಪಂಚಮಸಾಲಿ ಲಿಂಗಾಯತರನ್ನು ಹಿಂದುಳಿದ ವರ್ಗಗಳ 2ಎಗೆ ಸೇರಿಸಬೇಕೆಂಬುದನ್ನು ವಿರೋಧಿಸಿ ಭಟ್ಕಳದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. "ಮಾನವನ ಬದುಕಿನಲ್ಲಿ ಬೇಕುಗಳನ್ನು ನಾವೇ ಪಡೆಯಬೇಕೆಂಬುದನ್ನು ವೇದಾಂತವೇ ಹೇಳಿದೆ. ನಮ್ಮ ಬೇಕುಗಳನ್ನು ಸ್ವಪ್ರಯತ್ನದಿಂದ ಪಡೆಯಬೇಕೆಂದು ಹೇಳಿದೆ. ಮಠಾಧೀಶರುಗಳು ಲೋಕ ಕಲ್ಯಾಣಕ್ಕಾಗಿ, ಶೋಷಿತರನ್ನು ಮೇಲಕ್ಕೆತ್ತುವ ಕೆಲಸ ಮಾಡಬೇಕಿದೆ. ಎತ್ತರದಲ್ಲಿರುವ ಬಹುಸಂಖ್ಯಾತ ಆನೆ ಬಿದ್ದರೆ ಸಣ್ಣಪುಟ್ಟ ಜನಾಂಗಗಳು ಇಲಿ, ಇರುವೆ ಸಿಕ್ಕಿದಂತಾಗಿ ಅಪ್ಪಚ್ಚಿಯಾಗಿ ಬಿಡುತ್ತವೆ. ಸರ್ಕಾರ ಈ ಬಗ್ಗೆ ತೀವ್ರ ಗಮನ ನೀಡುವ ಅಗತ್ಯವಿದೆ" ಎಂದರು.
ಎಸ್ಟಿ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ; ಶ್ರೀಗಳು
"ಕಾಲಕಾಲಕ್ಕೆ ರಾಜ್ಯ ಸರ್ಕಾರಗಳು ಬಹುಸಂಖ್ಯಾತರಿರುವ ಜನಾಂಗಗಳ ಪ್ರೀತಿ, ವಿಶ್ವಾಸ ಯಾವ ರೀತಿ ಗಳಿಸಿ ಅದನ್ನು ವೋಟ್ ಬ್ಯಾಂಕ್ ಆಗಿ ಹೇಗೆ ಪರಿವರ್ತಿಸಬೇಕೆಂಬ ಏಕಮೇವ ಉದ್ದೇಶವನ್ನು ಸಾಧಿಸುತ್ತಿದೆ. ಅದು ಸರಿ ಅಲ್ಲ, ಸ್ವಲ್ಪ ಜನಕ್ಕೆ ಪ್ರತಿಬಾರಿಯೂ ಮೋಸ ಮಾಡಬಹುದು. ಆದರೆ ತುಂಬಾ ಜನಕ್ಕೆ ಪ್ರತಿಬಾರಿ ಮೋಸ ಮಾಡಲಾಗುವುದಿಲ್ಲ. ಸದ್ಯ ಹಿಂದುಳಿದ ವರ್ಗಗಳ 2ಎನಲ್ಲಿರುವವರು ಯಾವುದೇ ಹೊಸ ವಸ್ತುಗಳನ್ನು ಕೇಳುತ್ತಿಲ್ಲ, ಬದಲಿಗೆ ಯಥಾಸ್ಥಿತಿ ಕೇಳುತ್ತಿದ್ದಾರೆ. ಲಿಂಗಾಯತರು ವಸ್ತುಗಳನ್ನು ಕೇಳುತ್ತಿದ್ದಾರೆ. ಅವರು ತುಂಬಾ ಎತ್ತರಕ್ಕೆ ಹೋದವರು, ತುಂಬಾ ಅವಕಾಶಗಳನ್ನು ಬಳಸಿಕೊಂಡವರು. ಮತ್ತೆ ಇಡೀ ಅವಕಾಶವನ್ನು ಕಬಳಸಿಕೊಳ್ಳಬೇಕೆಂಬ ಚಿಂತನೆ ಸರಿಯಲ್ಲ, ಸಮಂಜಸವೂ ಅಲ್ಲ, ನ್ಯಾಯವೂ ಅಲ್ಲ" ಎಂದು ಹೇಳಿದರು.
2ಎ ಮೀಸಲಾತಿ ಹೋರಾಟ; ಪಾದಯಾತ್ರೆ ಅಂತ್ಯವಾಗಲಿದೆಯೇ?
ಸರ್ಕಾರ ಪ್ರಯತ್ನಿಸಬೇಕು
"ಈಗಾಗಲೇ ಎಷ್ಟು ಶೇಕಡಾ ಮೀಸಲಾತಿ ಹಿಂದುಳಿದ 2ಎನಲ್ಲಿರುವ ಜಾತಿಗಳಿಗೆ ಕೊಟ್ಟಿದ್ದಾರೋ, ಅದನ್ನು ಯಥಾಸ್ಥಿತಿ ಕಾಯ್ದುಕೊಂಡು ಹೋಗಲು ಸರ್ಕಾರ ಪ್ರಯತ್ನಿಸುವ ಅಗತ್ಯವಿದೆ. ರಾಜ್ಯಾಂಗದ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗದ ಎತ್ತರದಲ್ಲಿ ನ್ಯಾಯಾಂಗವಿದೆ. ಆ ಇಬ್ಬರು ಮಾಡುವ ತಪ್ಪನ್ನು ಶೋಧಿಸಿ ಜನರಿಗೆ ಹಂಚಲು ನ್ಯಾಯಾಂಗದ ವ್ಯವಸ್ಥೆಯನ್ನು ಸಂವಿಧಾನ ನೀಡಿದೆ. ಆ ಇಬ್ಬರ ಚಿಂತನೆ ಒಬ್ಬರ ಪರವಾಗಿ ಇರುತ್ತದೆ, ದೋಷ ಇರುತ್ತದೆ. ಮೇಲ್ವರ್ಗದ, ಹೆಚ್ಚು ಜನಸಂಖ್ಯೆ, ಹೆಚ್ಚು ಮತ ಇರುವ ಜಾತಿಯನ್ನು ಕಬಳಿಸಿ, ಆ ಮತಗಳ ಮೈಲೇಜು ಪಡೆಯುವ ಉದ್ದೇಶ ಹೊಂದಿರುತ್ತದೆ. ನ್ಯಾಯಾಂಗ ಎಲ್ಲರಿಗೂ ಸಮಾನವಾದ ನ್ಯಾಯ ಒದಗಿಸುವ ಕೆಲಸ ಮಾಡುತ್ತದೆ" ಎಂದರು.
"ಮಹಾತ್ಮ ಗಾಂಧಿಯವರು ಶಾಂತಿಯುತ ಹೋರಾಟ ಮಾಡಿದ್ದರು. ನೀವು ನಡೆಸುವ ಹೋರಾಟ ಯಾರಿಗೂ ತೊಂದರೆ ಕೊಡುವಂತೆ ಇರಬಾರದು. ಉಗ್ರ ಹೋರಾಟ ಸರಿಯಲ್ಲ. ಸಂವಿಧಾನಾತ್ಮಕವಾಗಿ, ಪ್ರಜಾಸತ್ತಾತ್ಮಕವಾಗಿ ಸರ್ಕಾರದ ಗಮನ ಸೆಳೆಯಬೇಕೆಂಬ ಚಿಂತನೆ ಮಾಡಬೇಕು. ನಾರಾಯಣ ಗುರುಗಳೂ ಕೂಡ ಅದನ್ನೇ ಮಾಡಿದ್ದರು. ಯಾವ ಸಮಾಜವೂ ಉಗ್ರತೆ ಪ್ರದರ್ಶನ ಮಾಡಬಾರದು. ದೊಂಬಿ, ಗಲಾಟೆ ಚಿಂತನೆ ಇರಬಾರದು. ಸರ್ಕಾರದ ಚಿಂತನೆ ಹರಿಸುವಂತೆ ಶಾಂತಿಯುತವಾಗಿರಬೇಕು. ಕಾನೂನಿನ ಚೌಕಟ್ಟಿನಲ್ಲಿ ಯಾವ ರೀತಿ ಮುಂದುವರಿಯಬಹುದು ನೋಡಿ. ಸುಪ್ರೀಂ ಕೋರ್ಟ್ ಇದೆ" ಎಂದು ಕರೆ ನೀಡಿದರು.
ರಾಜಕಾರಣ ಸುಮ್ಮನಿರಲು ಬಿಡುವುದಿಲ್ಲ
"ಉತ್ತರದಲ್ಲಿ ರೈತರು ಮಾಡಿರುವಂತೆ ಮಾಡಬೇಡಿ. ಆದರೆ ಹೋರಾಟದಲ್ಲಿ ತಮ್ಮನ್ನು ತಾವು ನಿಸ್ವಾರ್ಥವಾಗಿ ಅರ್ಪಿಸಿಕೊಳ್ಳಬೇಕು. ಹೊಸ ಅವಕಾಶವನ್ನು ಕೇಳದೆ, ಯಥಾಸ್ಥಿತಿ ಕಾಯ್ದುಕೊಳ್ಳಲು ಕೇಳುತ್ತಿರುವ ಉದ್ದೇಶದಲ್ಲಿ ಯಾವುದೇ ತಪ್ಪು ಇಲ್ಲ. ಒಂದುವೇಳೆ ಹಿಂದುಳಿದ ವರ್ಗಗಳ ಆಯೋಗ ಕೂಡ ತಪ್ಪು ವರದಿ ನೀಡಿದರೆ, ಅದರಿಂದ ನೆಮ್ಮದಿ ಇರದಿದ್ದರೆ ಹಿಂದುಳಿದ ವರ್ಗಗಳ ನಿವೃತ್ತ ನ್ಯಾಯಾಧೀಶರುಗಳಿಂದ ಸಮೀಕ್ಷೆಗೆ ಒಂದು ಆಯೋಗ ರಚಿಸಿ, ವರದಿಯನ್ನು ಮುಖ್ಯಮಂತ್ರಿ, ರಾಜ್ಯಪಾಲರು, ರಾಷ್ಟ್ರಪತಿಗೆ ಸಲ್ಲಿಸಬೇಕು. ವಸುದೈವ ಕುಟುಂಬಕಂ ಎಂದು ಬೋರ್ಡ್ ಗಳನ್ನು ಹಾಕುತ್ತೇವೆ. ಆದರೆ ನಮ್ಮ ದೇಶದಲ್ಲಿ ರಾಜಕಾರಣ ಕಾಲಕಾಲಕ್ಕೆ ಜನರನ್ನು ನೆಮ್ಮದಿಯಿಂದಿರಲು ಬಿಡುವುದಿಲ್ಲ ಎಂಬುದು ಬಹಳ ಬೇಸರದ ಸಂಗತಿ. ಮತ್ತೆ ಮತ್ತೆ ಜಾತಿಗಳಲ್ಲೇ ಭಾಗಗಳನ್ನು ಮಾಡುತ್ತಾ ಅದನ್ನು ಹಂಚುತ್ತಿವೆ. ಇದು ಯಾಕಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಆ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾದರೆ ಇವುಗಳನ್ನು ನಿರ್ಮೂಲ ಮಾಡಬಹುದು" ಎಂದರು.
ರಾಜಕೀಯ ಎಂಬ ವೈರಸ್
ಯಾವುದೇ ಕಾರಣಕ್ಕೂ ಈ ಹೋರಾಟಕ್ಕೆ ರಾಜಕೀಯದ ಲವಲೇಶ ಪ್ರವೇಶವಾಗಬಾರದು. ಒಂದುವೇಳೆ ಪ್ರವೇಶವಾದರೆ ವೈರಸ್ ಸೋಂಕಿದಂತಾಗುತ್ತದೆ, ಹೋರಾಟ ಯಶಸ್ಸಾಗುವುದಿಲ್ಲ ಎಂದೂ ಈ ವೇಳೆ ಹೋರಾಟಗಾರರಿಗೆ ಕರೆ ನೀಡಿದರು.
"ಪಂಚಮಸಾಲಿ ಲಿಂಗಾಯತರು ತಮ್ಮನ್ನು ಪ್ರವರ್ಗ 2ಎಗೆ ಸೇರಿಸಬೇಕೆಂಬ ಚಿಂತನೆ ನಡೆಸುತ್ತಿದ್ದಾರೆ. ಇದನ್ನು ವಿರೋಧಿಸಿ, ಯಥಾಸ್ಥಿತಿ ಕಾಯಲು ಫೆ.22ರಂದು ಭಟ್ಕಳದಲ್ಲಿ ಶಾಂತಿಯುತ ಬೃಹತ್ ಪ್ರತಿಭಟನೆ ನಡೆಯಲಿದೆ. 2ಎಗೆ ಲಿಂಗಾಯತರು ಸೇರ್ಪಡೆಯಾದರೆ ಈಗಿರುವ ಜನಸಂಖ್ಯೆಗೆ ಮೀಸಲಾತಿಯನ್ನು ಹೆಚ್ಚುವರಿಯಾಗಿ ಹೆಚ್ಚಿಸಬೇಕು. ಅದನ್ನು ಆಯೋಗ, ಕೇಂದ್ರ ಸರ್ಕಾರ ಗಮನ ಹರಿಸಬೇಕು. ಸರ್ಕಾರ ಹಿಂದೆಮುಂದೆ ನೋಡಿದಲ್ಲಿ ಸಂವಿಧಾನಾತ್ಮಕವಾಗಿ ಹೈಕೋರ್ಟ್, ಸುಪ್ರೀಂ ಕೋರ್ಟ್ ಮೂಲಕ ಹೋರಾಟವನ್ನು ಶಾಂತಿಯುತವಾಗಿ ನಡೆಸಲು ತೀರ್ಮಾನಿಸಿದ್ದಾರೆ. ಸನ್ಯಾಸಿಗಳು ಯಾವತ್ತೂ ಹೋರಾಟಗಳ ಮುಂದಾಳತ್ವ ತೆಗೆದುಕೊಳ್ಳಬಾರದು, ಮಾರ್ಗದರ್ಶಕರಾಗಿರಬೇಕು. ಸಮಾಜ ಒಡೆಯಬಾರದು. ಗೊಂದಲ, ಅಶಾಂತಿಗೆ ಒಳಗಾಗಬಾರದು" ಎಂದರು.
ಯಥಾಸ್ಥಿತಿಯಲ್ಲಿರಲಿ
"ಸರ್ಕಾರದ ನಡುವೆ ಕ್ರಾಂತಿಕಾರಿ ಹೋರಾಟ ಮಾಡಬಾರದು. ಕಲ್ಲು ಹೊಡೆಯುವುದು, ಬೆಂಕಿ ಹಚ್ಚುವುದು ವಿದ್ಯಾವಂತ, ಭಾರತೀಯರ ಲಕ್ಷಣವಲ್ಲ. ರಾಜಕೀಯ ಪಕ್ಷಗಳು ಅವರಿಗೆ ಪ್ರಚೋದನೆ ನೀಡಿ ಹಾಗೆ ಮಾಡಿಸುವ ಕಾರ್ಯವೂ ಸರಿಯಲ್ಲ, ಅದನ್ನು ವಿರೋಧಿಸುತ್ತೇವೆ. ಈಗಿರುವ ಮೀಸಲಾತಿ ಯಥಾಸ್ಥಿತಿಯಲ್ಲಿದ್ದರೆ ಅದು ರಾಜ್ಯ ಸರ್ಕಾರ, ಮಂತ್ರಿಗಳಿಗೂ ಸುಭಿಕ್ಷ. ನಾವೆಲ್ಲ ಅವಧೂತ ಪೀಠದಿಂದ ಬಂದವರು. ಎಲ್ಲಾ ಜಾತಿಗಳಿಗೆ ಕಣ್ಣಾಗಿರಬೇಕು. ಆ ಜನಾಂಗವನ್ನು ಸಂರಕ್ಷಿಸಬೇಕೆಂಬುದು ಪೀಠತ್ವ ಸನ್ಯಾಸತ್ವದ ಲಕ್ಷಣ. ಒಂದು ಜಾತಿಯನ್ನು ಎತ್ತಿಕಟ್ಟುವುದು ಸರಿಯಲ್ಲ" ಎಂದರು.