ನಿಷೇಧಿತ ಲೈಟ್ ಫಿಶಿಂಗ್ಗೆ ತೆರಳಿದ್ದ ಬೋಟ್ ಮುಳುಗಡೆ: ಐವರು ಮೀನುಗಾರರ ರಕ್ಷಣೆ
ಕಾರವಾರ, ಡಿಸೆಂಬರ್ 21: ಅಂಕೋಲಾ ತಾಲ್ಲೂಕಿನ ಬೆಳಂಬಾರ ಮೂಲದ ಸುರೇಶ್ ಖಾರ್ವಿ ಎಂಬುವವರಿಗೆ ಸೇರಿದ ಬೋಟೊಂದು ರಾತ್ರಿ ವೇಳೆ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಯಾಂತ್ರಿಕ ದೋಷದಿಂದ 15 ನಾಟಿಕಲ್ ದೂರದಲ್ಲಿನ ನೇತ್ರಾಣಿ ಗುಡ್ಡದ ಸಮೀಪ ಗಾಳಿಯ ರಭಸಕ್ಕೆ ಮುಳುಗಡೆಯಾಗಿರುವ ಘಟನೆ ವರದಿಯಾಗಿದೆ.
ಶನಿವಾರದಂದು ಭಟ್ಕಳ ಮಾವಿನಕುರ್ವಾ ಬಂದರಿನಿಂದ ಮತ್ಯ್ಯಾಂಜನೇಯ ಎಂಬ ಬೋಟ್ ಸುಮಾರು ಮಧ್ಯಾಹ್ನ 3 ಗಂಟೆಗೆ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದ ಮಧ್ಯದಲ್ಲಿ ಬೋಟಿನಲ್ಲಿನ ಯಾಂತ್ರಿಕ ದೋಷದಿಂದ ಮಾವಿನಕುರ್ವಾ ಬಂದರಿನಿಂದ ಸುಮಾರು 15 ನಾಟಿಕಲ್ ದೂರದಲ್ಲಿ ಭಾನುವಾರದಂದು ತಡರಾತ್ರಿ 11 ಗಂಟೆಗೆ ಗಾಳಿಯ ರಭಸಕ್ಕೆ ನೇತ್ರಾಣಿ ಗುಡ್ಡದ ಸಮೀಪದಲ್ಲಿ ಬೋಟ್ ಮುಳುಗಿದೆ.
ಕಾರವಾರ: ಸೀಬರ್ಡ್ ಪ್ರಾಜೆಕ್ಟ್'ನ ಡಿಜಿ ಕೊರೊನಾಕ್ಕೆ ಬಲಿ
ಬೋಟ್ ನಲ್ಲಿದ್ದ ಐವರು ಮೀನುಗಾರರನ್ನು ಇನ್ನೊಂದು ಬೋಟ್ ಸಹಾಯದಿಂದ ರಕ್ಷಿಸಲಾಗಿದ್ದು, ಈ ಮೀನುಗಾರರ ಪೈಕಿ ಭಟ್ಕಳದ ತಲಗೋಡದ ಶ್ರೀಕಾಂತ ಖಾರ್ವಿ, ನಾಗೇಶ ಖಾರ್ವಿ ಹಾಗೂ ಅಳ್ವೇಕೋಡಿ ಮೂಲದ ರಮೇಶ ಮೋಗೆರ ಎನ್ನಲಾಗಿದೆ. ಇವರೊಟ್ಟಿಗೆ ಅಂಕೋಲಾದ ಬೆಳಂಬಾರ ಮೂಲದ ಇಬ್ಬರು ಮೀನುಗಾರರಾದ ಕಿರಣ್ ಖಾರ್ವಿ ಹಾಗೂ ಸುದರ್ಶನ ಖಾರ್ವಿ ಕೂಡ ರಕ್ಷಣೆಗೊಳಗಾಗಿದ್ದಾರೆ.
ಬೋಟ್ನಲ್ಲಿದ್ದವರನ್ನು ನವದುರ್ಗಾ ಬೋಟ್ ಮುಖಾಂತರ ಮಾವಿನಕುರ್ವಾ ಬಂದರಿಗೆ ಸುರಕ್ಷಿತವಾಗಿ ಸೋಮವಾರದಂದು ಮುಂಜಾನೆ ಬಂದು ತಲುಪಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ಬೋಟ್ ಸಂಪೂರ್ಣ ಮುಳುಗಿರುವ ಕಾರಣ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಸ್ಥಳಕ್ಕೆ ಕರಾವಳಿ ಕಾವಲುಪಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾತ್ರಿ ಅರಬ್ಬಿ ಸಮುದ್ರ ಭಾಗದಲ್ಲಿ ನಿಷೇಧಿತ ಲೈಟ್ ಫಿಶಿಂಗ್ ಗೆ ಈ ಬೋಟು ತೆರಳಿತ್ತು ಎಂದು ಪ್ರಾಥಮಿಕ ಮಾಹಿತಿ ದೊರೆತಿದ್ದು, ಅಂಕೋಲಾ ಬೋಟ್ ಅನ್ನು ಭಟ್ಕಳ ಮೂಲದ ಬೋಟ್ ಮಾಲೀಕನೋರ್ವ ಲೈಟ್ ಫಿಶ್ಶಿಂಗ್ಗಾಗಿ ಬೋಟನ್ನು ಬಾಡಿಗೆಗೆ ತೆಗೆದುಕೊಂಡಿದ್ದ ಎಂಬ ಬಗ್ಗೆಯೂ ದೂರು ಕೇಳಿ ಬಂದಿದೆ. ಈ ಕುರಿತು ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.