ತೀಳ್ಮಾತಿ ತೀರದಲ್ಲಿ ಬರಿದಾಗುತ್ತಿದೆ ಕಪ್ಪು ಮರಳು; ಅಕ್ರಮವಾಗಿ ಒಯ್ಯುತ್ತಿರುವ ಪ್ರವಾಸಿಗರು
ಕಾರವಾರ, ಜನವರಿ 30: ವಿಶ್ವದಲ್ಲೇ ಅತಿ ವಿರಳವಾಗಿರುವ, ದೇಶದ ಏಕೈಕ ಕಪ್ಪು ಮರಳಿನ ಕಡಲತೀರ ಕಾರವಾರ ತಾಲೂಕಿನ ಮಾಜಾಳಿಯಲ್ಲಿದೆ. ಕಪ್ಪು ಮರಳಿಗಾಗಿಯೇ ಪ್ರಸಿದ್ಧಿಯಾಗಿರುವ ಇಲ್ಲಿನ ತೀಳ್ಮಾತಿ ನೋಡಲು ಬರುವ ಪ್ರವಾಸಿಗರು ಇಲ್ಲಿಂದ ಮರಳನ್ನು ಒಯ್ಯುತ್ತಿದ್ದಾರೆನ್ನಲಾಗಿದ್ದು, ಕಡಲತೀರದಿಂದ ಕಪ್ಪು ಮರಳು ಬರಿದಾಗುತ್ತಿದೆ.
ಕಾರವಾರದಿಂದ ಎಂಟು ಕಿ.ಮೀ ದೂರದಲ್ಲಿರುವ ತೀಳ್ಮಾತಿ ಕಡಲತೀರವು, ಮೀನುಗಾರರೇ ಹೆಚ್ಚಾಗಿ ವಾಸವಾಗಿರುವ ಮಾಜಾಳಿ ಗ್ರಾಮದಲ್ಲಿದೆ. ಕಪ್ಪು ಮರಳಿಗೆ ಹೆಸರುವಾಸಿಯಾದ ಈ ತೀರಕ್ಕೆ ಯಾವುದೇ ರಕ್ಷಣೆಯಿಲ್ಲ.
ಕೆಐಡಿಬಿ ಸ್ವಾಧೀನಪಡಿಸಿಕೊಂಡಿರುವ ಜಮೀನು ಬಳಕೆಗೆ ಕ್ರಮ; ಮುಡಗೇರಿಯಲ್ಲಿ ನೌಕಾನೆಲೆ ಕೈಗಾರಿಕಾ ವಸಾಹತು
ಇದಕ್ಕೆ ಗುಡ್ಡಗಳನ್ನು ಇಳಿದು ಸಾಗಬೇಕಾಗಿದ್ದು, ಹೀಗಾಗಿ ಇಲ್ಲಿ ಮೀನುಗಾರಿಕೆಗೆ ಮಾತ್ರ ಮೀನುಗಾರರು ಇರುತ್ತಾರೆಯೇ ಹೊರತು ಬಾಕಿ ಸಮಯದಲ್ಲಿ ಯಾರೂ ಇರುವುದಿಲ್ಲ. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಸಮಯ ಕಳೆಯುತ್ತಾರೆ. ರಾತ್ರಿ ಹೊತ್ತಿನಲ್ಲಿ ಇದು ನಿರ್ಜನ ಪ್ರದೇಶವಾಗಿದೆ.
ಹೀಗಾಗಿ ಇಲ್ಲಿಂದ ಇತ್ತೀಚಿನ ದಿನಗಳಲ್ಲಿ ಕಪ್ಪು ಮರಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ತಮ್ಮ ಮನೆಯಲ್ಲಿ ಅಕ್ವೇರಿಯಂಗೆ ಬಳಸಲು ಹಾಗೂ ಕೆಲವು ಅಕ್ವೇರಿಯಂ ವ್ಯಾಪಾರಸ್ಥರು ಲಾಭಕ್ಕಾಗಿ ಇಲ್ಲಿಂದ ಕಪ್ಪು ಮರಳು ಸಾಗಾಟ ಮಾಡುತ್ತಿದ್ದಾರೆನ್ನಲಾಗಿದೆ. ಈ ತೀರ ಗೋವಾಕ್ಕೆ ಹೊಂದುಕೊಂಡಿದ್ದು, ಆ ಭಾಗದಿಂದಲೂ ಸಾಕಷ್ಟು ಜನ ದೋಣಿಯ ಮೇಲೆ ಬಂದು ಚೀಲಗಟ್ಟಲೆ ಮರಳನ್ನು ಒಯ್ಯುತ್ತಿದ್ದಾರೆಂದು ಸ್ಥಳೀಯ ಕೆಲ ಮೀನುಗಾರರು ಆರೋಪಿಸಿದ್ದಾರೆ.
ತಜ್ಞರ ಪ್ರಕಾರ, ಕಪ್ಪು ಇಗ್ನಾಸಿಯಸ್ ಬಂಡೆಗಳ ಸವೆತದಿಂದಾಗಿ ಈ ಕಡಲತೀರ ರೂಪುಗೊಂಡಿದ್ದು, ಇಲ್ಲಿ ಕಪ್ಪು ಎಳ್ಳಿನಂತೆ ಹೋಲುವ ಸಣ್ಣ ಜಲ್ಲಿಕಲ್ಲುಗಳು ಕಾಣಸಿಗುತ್ತವೆ. ಹೀಗಾಗಿ ಸ್ಥಳೀಯರು ಇದನ್ನು ತೀಳ್ (ಎಳ್ಳು) ಮಾತಿ ಎಂದು ಹೆಸರಿಸಿದ್ದಾರೆ ಎನ್ನಲಾಗಿದೆ.