ಉತ್ತರಕನ್ನಡ: ಪಕ್ಷ ನಿಷ್ಠರನ್ನು ದೂರ ಮಾಡಿಕೊಳ್ಳುತ್ತಿದೆಯೇ ಬಿಜೆಪಿ?
ಕಾರವಾರ, ಸೆಪ್ಟೆಂಬರ್ 22; 'ಪಕ್ಷ ನಿಷ್ಠೆಯೇ ಮೊದಲು, ಉಳಿದೆಲ್ಲವೂ ನಂತರ' ಎನ್ನುತ್ತಿದ್ದ ಭಾರತೀಯ ಜನತಾ ಪಾರ್ಟಿ ಪಕ್ಷ ನಿಷ್ಠರನ್ನು, ಪ್ರಾಮಾಣಿಕರನ್ನು ದೂರ ಮಾಡಿಕೊಳ್ಳುತ್ತಿದೆಯೇ? ಎಂಬ ಪ್ರಶ್ನೆ ಇತ್ತೀಚಿಗೆ ದಟ್ಟವಾಗಿ ಪಕ್ಷದ ಕಾರ್ಯಕರ್ತರಿಗೆ ಕಾಡಲಾರಂಭಿಸಿದೆ.
ಜಿಲ್ಲಾ ಬಿಜೆಪಿಗಾಗಿ ಸರ್ವಸ್ವವನ್ನೇ ತ್ಯಜಿಸಿ ದುಡಿಯುತ್ತಿರುವವರನ್ನು ಮೂಲೆಗುಂಪಾಗಿಸಿ, ನಿನ್ನೆ ಮೊನ್ನೆ ಬಂದವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಬಗ್ಗೆ ಪಕ್ಷದೊಳಗೇ ಅಸಮಾಧಾನ ಭುಗಿಲೆದ್ದಿದೆ.
ಶಿಷ್ಯ ಘೋಟ್ನೇಕರ್ ವಿರುದ್ಧ 'ಗೇಮ್ ಪ್ಲಾನ್’ ಆರಂಭಿಸಿದ್ರಾ ದೇಶಪಾಂಡೆ?
ಬಿಜೆಪಿಲ್ಲಿರುವ ಬಹುತೇಕರು ಆರ್ಎಸ್ಎಸ್ ಹಿನ್ನೆಲೆಯವರು. ಹಿಂದೂ ಸಂಘಟನೆಗಳಿಗೆ ಸೇರಿದವರಾಗಿರುವ ಕಾರಣ ಇಲ್ಲಿ 'ಸೇವೆಯೇ ಸಮರ್ಪಣೆ' ಎನ್ನುವ ಮನೋಭಾವಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿತ್ತು.
ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಹಲವು ವರ್ಷದಿಂದ ಸಂಘಟನೆ ಮಾಡಿ ಪಕ್ಷ ಕಟ್ಟಿದವರಿಗೆ ಹೆಚ್ಚಿನ ಆದ್ಯತೆ ಎನ್ನುವ ಧ್ಯೇಯವನ್ನ ಇಟ್ಟುಕೊಂಡಿದ್ದು, ಇತ್ತೀಚಿನವರೆಗೂ ಪಕ್ಷದಲ್ಲಿ ಇದನ್ನು ಪಾಲಿಸಿಕೊಂಡು, ಬಿಜೆಪಿಯ ಕಮಲದ ಬೇರು ಗಟ್ಟಿ ಮಾಡಿಕೊಂಡು ಬಂದಿದ್ದ ಹಿರಿಯ ಮುಖಂಡರುಗಳು, ಕಾರ್ಯಕರ್ತರನ್ನು ಪಕ್ಷ ಇದೀಗ ನಿರ್ಲಕ್ಷಿಸಲಾರಂಭಿಸಿದೆ ಎನ್ನುವ ಮಾತು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.
ವರಿಷ್ಠರು, ದೇಶಪಾಂಡೆ ಎದುರೇ ಟಿಕೆಟ್ ಕೇಳಿದ ಘೋಟ್ನೇಕರ್!
ಪಕ್ಷ ಸಂಘಟನೆಗಾಗಿ ದುಡಿದವರಿಗಿಂತ ನಿನ್ನೆ ಮೊನ್ನೆ ಬಂದವರಿಗೆ ಪಕ್ಷ ಹೆಚ್ಚಿನ ಆದ್ಯತೆ ನೀಡುತ್ತಿರುವುದಕ್ಕೆ ಇಂಥ ನಿಷ್ಠರುಗಳು ಬೇಸರಿಸಿಕೊಳ್ಳಲಾರಂಭಿಸಿದ್ದಾರೆ. ಅಷ್ಟೇ ಅಲ್ಲ, ಪಕ್ಷದ ಇತರ ನಾಯಕರೊಂದಿಗೇ ತಮ್ಮ ಅಸಮಾಧಾನ ತೋರ್ಪಡಿಸಿಕೊಳ್ಳಲು ಶುರು ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಹೆಗಡೆ ಬಗ್ಗೆ ಹೇಳಿಕೆ; ಸ್ಪಷ್ಟನೆ ಕೊಟ್ಟ ಆನಂದ್ ಅಸ್ನೋಟಿಕರ್
ಹೊನ್ನಾವರದ ಎನ್. ಎಸ್. ಹೆಗಡೆ, ಕಾರವಾರದ ವಕೀಲ ನಾಗರಾಜ ನಾಯಕ, ಕುಮಟಾದ ನಾಗರಾಜ ನಾಯಕ ತೊರ್ಕೆ, ಶಿರಸಿಯ ರೇಖಾ ಹೆಗಡೆ, ಭಟ್ಕಳದ ಶಿವಾನಿ ಶಾಂತರಾಮ, ಕುಮಟಾದ ಎಂ. ಜಿ. ಭಟ್, ಭಟ್ಕಳದ ಗೋವಿಂದ ನಾಯ್ಕ ಹೀಗೆ ಅತಿ ಹಿರಿಯ ಬಿಜೆಪಿಗರೂ ಈ ನಿಷ್ಠರ ಪಟ್ಟಿಯಲ್ಲಿದ್ದು, ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಇವರು ಪಕ್ಷಕ್ಕಾಗಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು ಪ್ರಾಮಾಣಿಕವಾಗಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದರೂ ಈವರೆಗೆ ಪಕ್ಷ ಒಳ್ಳೆಯ ಸ್ಥಾನಮಾನ ನೀಡಿಲ್ಲ. ನಾಗರಾಜ ನಾಯಕ, ಶಿವಾನಿ ಶಾಂತಾರಾಮ, ಗೋವಿಂದ ನಾಯ್ಕ ಈ ಹಿಂದೆ ಶಾಸಕ ಸ್ಥಾನದ ಆಕಾಂಕ್ಷಿಗಳಾಗಿದ್ದರು.
ಬಿಜೆಪಿಯ ಟಿಕೆಟ್ ನಿರೀಕ್ಷೆಯಲ್ಲಿದ್ದರೂ ಪಕ್ಷದ 'ಅಚ್ಚರಿಯ ಆಯ್ಕೆ'ಯಲ್ಲಿ ಟಿಕೆಟ್ ವಂಚಿತರಾಗಿದ್ದರು. ಆದರೂ ಬೇಸರಿಸದೇ, ಪಕ್ಷದ ಮೇಲೆ ಮುನಿಸಿಕೊಳ್ಳದೇ ಸಂಘಟನೆಯಲ್ಲಿ ತೊಡಗಿ ಪಕ್ಷದಲ್ಲಿ ಇನ್ನೂ ಹೆಚ್ಚು ಸಕ್ರಿಯವಾಗಿ ತಮ್ಮ ಕಾರ್ಯಚಟುವಟಿಕೆ ಮುಂದುವರಿಸಿದ್ದಾರೆ.
ಇತ್ತೀಚಿಗೆ ಕುಮಟಾದ ಎಂ. ಜಿ. ಭಟ್ ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಕಳೆದುಕೊಂಡರೆ ಸಂಘಟನೆಗೆ ಹಾಗೂ ಸಮಾಜಕ್ಕೆ ನಷ್ಟವೇ ಹೊರತು ವ್ಯಕ್ತಿಗಲ್ಲ ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿರುವುದು ಹಾಗೂ ಇತ್ತೀಚಿನ ಜಿಲ್ಲಾ ಬಿಜೆಪಿಯೊಳಗಿನ ಕೆಲ ಬೆಳವಣಿಗೆಗಳನ್ನು ಗಮನಿಸಿದರೆ ನಿಷ್ಠರು ಬಿಜೆಪಿಯಿಂದ ದೂರವಾಗಲಿದ್ದಾರೆಯೇ? ಎಂಬುದನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ಬೇಕಾಗಿಲ್ಲ. ಇದೇ ರೀತಿ ಹಲವು ನಾಯಕರು ಪಕ್ಷಕ್ಕಾಗಿ ದುಡಿದಿದ್ದರೂ ಅವರನ್ನ ನಿರ್ಲಕ್ಷ ಮಾಡಲಾಗುತ್ತಿದೆ ಎನ್ನುವ ಆರೋಪ ಕಾರ್ಯಕರ್ತರದ್ದು.
ಜಿಲ್ಲೆಗೆ ಸಂಬಂಧಿಸಿದಂತೆ ಅದೆಷ್ಟೋ ನಿಗಮ ಮಂಡಳಿಗಳು, ಪ್ರಾಧಿಕಾರಗಳಿದ್ದರೂ ಇಂಥ ನಿಷ್ಠರಿಗೆ ಅವುಗಳನ್ನು ನೀಡುವ ಕಾರ್ಯ ಇನ್ನೂ ನಡೆದಿಲ್ಲ. ಬಿಜೆಪಿ ಸರ್ಕಾರದ ಆಡಳಿತ ಪೂರ್ಣಗೊಳ್ಳುತ್ತ ಬಂದರೂ ನಿಷ್ಠರನ್ನು ಮುನ್ನೆಲೆಗೆ ತರುವುದಕ್ಕಿಂತಲೂ, ಸಾಮಾಜಿಕ ಜಾಲತಾಣಗಳನ್ನು ನೆಚ್ಚಿಕೊಂಡವರು, ಬೇರೆ ಪಕ್ಷದಿಂದ ಅಥವಾ ಇತ್ತೀಚಿಗೆ ಪಕ್ಷ ಸೇರ್ಪಡೆಗೊಂಡವರು, ಸಂಘ ಪರಿವಾರದ ಗಂಧ- ಗಾಳಿಯೂ ಗೊತ್ತಿಲ್ಲದವರನ್ನೆಲ್ಲ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು, ಸ್ಥಳೀಯ ಸಂಸ್ಥೆಗಳಲ್ಲಿ, ಇನ್ನಿತರ ಉತ್ತಮ ಸ್ಥಾನಮಾನಗಳನ್ನು ಪಕ್ಷ ನೀಡುತ್ತಿರುವುದು ಪಕ್ಷ ನಿಷ್ಠರಿಗೆ ಕೊಂಚ ಬೇಸರಕ್ಕೆ ಕಾರಣವಾಗಿದೆ.
Recommended Video
ಇದು ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯೂ ದಟ್ಟವಾಗಿದೆ ಎನ್ನುತ್ತವೆ ಬಿಜೆಪಿಯದ್ದೇ ಮೂಲಗಳು.