ಎಂಎಲ್ಸಿ ಚುನಾವಣೆ: ಬಿಜೆಪಿಯಿಂದ ಅಭ್ಯರ್ಥಿ ಆಯ್ಕೆ ಕಸರತ್ತು ಶುರು!
ಕಾರವಾರ, ಅಕ್ಟೋಬರ್ 08; ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ವಿಧಾನ ಪರಿಷತ್ ಸ್ಥಾನಕ್ಕೆ ಕೆಲ ದಿನಗಳಲ್ಲಿಯೇ ಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಅಭ್ಯರ್ಥಿ ಆಯ್ಕೆ ಕಸರತ್ತು ಪ್ರಾರಂಭವಾಗಿದೆ. ಇನ್ನು ಬಿಜೆಪಿ ನಾಯಕರಿಂದ ಅಭ್ಯರ್ಥಿ ಆಯ್ಕೆಯ ಸಲಹೆ ಪಡೆಯುವ ನಿಟ್ಟಿನಲ್ಲಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಜಿಲ್ಲೆಗೆ ಆಗಮಿಸಲಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಹಿನ್ನಲೆಯ ಪೂರ್ವಭಾವಿ ಸಭೆಯನ್ನು ಮಾಡುವ ಉದ್ದೇಶದಿಂದ ಜಿಲ್ಲೆಯ ಯಲ್ಲಾಪುರಕ್ಕೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಆಗಮಿಸಲಿದ್ದು, ಬಿಜೆಪಿಯ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ. ಕಳೆದ ಹಲವು ದಿನಗಳಿಂದ ಅನೇಕರು ಬಿಜೆಪಿಯಿಂದ ಅಭ್ಯರ್ಥಿಯಾಗಲು ತೆರೆಮರೆಯ ಪ್ರಯತ್ನ ನಡೆಸುತ್ತಿದ್ದರು.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಯಿಂದ ಕೈಬಿಟ್ಟ ಬಳಿಕ ವರುಣ್ ಕೊಟ್ಟ ಪ್ರತಿಕ್ರಿಯೆ
ಆದರೆ ಬಿಜೆಪಿ ಮಾತ್ರ ಇನ್ನೂ ಅಭ್ಯರ್ಥಿ ಆಯ್ಕೆಯ ಸಂಬಂಧ ಯಾವ ನಿಲುವಿಗೂ ಬಂದಿರಲಿಲ್ಲ. ಆದರೀಗ ಕೋಟಾ ಶ್ರೀನಿವಾಸ್ ಪೂಜಾರಿ ಜಿಲ್ಲೆಗೆ ಆಗಮಿಸಿ ಅಭ್ಯರ್ಥಿ ಆಯ್ಕೆಯ ಪ್ರಯತ್ನಕ್ಕೆ ಚಾಲನೆ ನೀಡಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷದಿಂದ ಹೆಚ್ಚಿನ ಬಾರಿ ವಿಧಾನ ಪರಿಷತ್ಗೆ ಅಭ್ಯರ್ಥಿ ಆಯ್ಕೆಯಾಗಿದ್ದರು. ಈವರೆಗೆ ಬಿಜೆಪಿ ಅಭ್ಯರ್ಥಿ ಗೆಲ್ಲಲು ಆಗಿರಲಿಲ್ಲ.
ಉತ್ತರಕನ್ನಡ: ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಒಳಜಗಳದ ಭಾರೀ ಸದ್ದು!
ಆದರೆ ಸದ್ಯ ಬಿಜೆಪಿ ಸರ್ಕಾರವಿದ್ದು, ಜಿಲ್ಲೆಯ 5 ಕ್ಷೇತ್ರದಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. ಈ ಬಾರಿ ಶತಾಯುಗತಾಯ ಗೆಲ್ಲಲೇ ಬೇಕು ಎಂದು ಬಿಜೆಪಿ ನಾಯಕರು ಪ್ರಯತ್ನಕ್ಕೆ ಇಳಿದಿದ್ದು, ಚುನಾವಣೆ ಮೂರ್ನಾಲ್ಕು ತಿಂಗಳು ಇರುವಾಗಲೇ ಅಭ್ಯರ್ಥಿ ಆಯ್ಕೆಯ ಕಸರತ್ತು ಪ್ರಾರಂಭಿಸಿದ್ದಾರೆ. ಜಿಲ್ಲೆಯಿಂದ ಕಳೆದ ಎರಡು ಭಾರಿ ವಿಧಾನ ಪರಿಷತ್ಗೆ ಹಳಿಯಾಳದ ಎಸ್. ಎಲ್. ಘೋಟ್ನೆಕರ್ ಆಯ್ಕೆಯಾಗಿದ್ದರು.
ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಘೋಟ್ನೇಕರ್ ಸುಲಭವಾಗಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಹಳಿಯಾಳ ಕ್ಷೇತ್ರದಿಂದಲೇ ವಿಧಾನಸಭೆ ಚುನಾವಣೆಗೆ ನಿಲ್ಲಬೇಕು ಎಂದು ಆಸಕ್ತಿ ವಹಿಸಿದ್ದು, ತಾನು ವಿಧಾನ ಪರಿಷತ್ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಘೋಟ್ನೇಕರ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಘೋಟ್ನೇಕರ್ ಮನವೊಲಿಸುವ ಪ್ರಯತ್ನ ಸಹ ನಡೆದಿದ್ದು, ಘೋಟ್ನೇಕರ್ ಪರಿಷತ್ ಚುನಾವಣೆಗೆ ನಿಲ್ಲಲು ಬಹುತೇಕ ಒಪ್ಪುವುದಿಲ್ಲ ಎಂಬ ಸುದ್ದಿ ಇದೆ.
ಎಂಎಲ್ಸಿ ಚುನಾವಣೆಗ; ಘೋಟ್ನೇಕರ್ ನಿರಾಸಕ್ತಿ, ನಿವೇದಿತ್ ಆಳ್ವಾ ಕಣಕ್ಕೆ?
ಇನ್ನು ಕಾಂಗ್ರೆಸ್ ಪಕ್ಷವೂ ಘೋಟ್ನೇಕರ್ ಹೊರತುಪಡಿಸಿ ಜಿಲ್ಲೆಯಾದ್ಯಂತ ತಿರುಗಾಟ ನಡೆಸಿ ಚುನಾವಣೆ ಗೆಲ್ಲುವ ಪ್ರಬಲ ನಾಯಕರ ಕೊರತೆ ಎದುರಿಸುತ್ತಿದೆ. ಇದು ಬಿಜೆಪಿಗೆ ವರದಾನವಾಗಿದ್ದು, ಇನ್ನೊಂದೆಡೆ ಗ್ರಾಮ ಪಂಚಾಯತ್, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಸದಸ್ಯರಲ್ಲಿ ಹೆಚ್ಚಿನ ಸಂಖ್ಯೆ ಬಿಜೆಪಿ ಬೆಂಬಲಿಗರೇ ಇರುವುದರಿಂದ ಬಿಜೆಪಿಯಿಂದ ಅಭ್ಯರ್ಥಿಯಾಗುವವರಿಗೆ ಗೆಲುವು ಸುಲಭವಾಗಿದೆ. ಇದೇ ಕಾರಣಕ್ಕೆ ಬಿಜೆಪಿಯಿಂದ ಟಿಕೆಟ್ಗೆ ಭಾರೀ ಪೈಪೋಟಿ ನಡೆದಿದ್ದು, ಈಗಾಗಲೇ ಹತ್ತಕ್ಕೂ ಅಧಿಕ ನಾಯಕರು ಪ್ರಯತ್ನ ನಡೆಸಿದ್ದಾರೆ. ಆದರೆ ಯಾರಿಗೆ ಟಿಕೆಟ್ ಅಂತಿಮವಾಗಿ ಸಿಗಲಿದೆ? ಎನ್ನುವುದನ್ನು ಕಾದು ನೋಡಬೇಕಾಗಿದೆ.
ಸಮರ್ಥ ನಾಯಕರಿಗೆ ಅವಕಾಶ; ಮೇಲ್ಮನೆಗೆ ಈ ಬಾರಿ ಆಯ್ಕೆಯಾಗುವ ಸದಸ್ಯರು ಸಮರ್ಥವಾಗಿ ಪಕ್ಷ ಹಾಗೂ ಸರ್ಕಾರವನ್ನು ಎದುರಿಸಬೇಕು ಎನ್ನುವುದು ಪಕ್ಷದ ನಾಯಕರ ಹಾಗೂ ಆರ್ಎಸ್ಎಸ್ ಪ್ರಮುಖರ ಚಿಂತನೆ. ಮೇಲ್ಮನೆ ಎನ್ನುವುದು ಬುದ್ಧಿವಂತರ ಸದನ ಎಂದೇ ಕರೆಯಲಾಗುತ್ತದೆ. ಈ ನಿಟ್ಟಿನಲ್ಲಿ ಸಮರ್ಥ ನಾಯಕರಿಗೆ ಹಾಗೂ ಪಕ್ಷಕ್ಕಾಗಿ ದುಡಿಯುವವರಿಗೆ ಮೇಲ್ಮನೆ ಟಿಕೆಟ್ ಕೊಡುವ ಸಾಧ್ಯತೆ ಇದೆ.
ಜಿಲ್ಲೆಯಿಂದ ಸಿದ್ದಿ ಸಮುದಾಯದ ಶಾಂತಾರಾಮ್ ಸಿದ್ದಿಯನ್ನು ಬಿಜೆಪಿ ವಿಧಾನ ಪರಿಷತ್ಗೆ ಆಯ್ಕೆ ಮಾಡಿ ಎಲ್ಲರಲ್ಲಿ ಅಚ್ಚರಿ ಮೂಡಿಸಿತ್ತು. ವನವಾಸಿ ಕಲ್ಯಾಣ ಸಂಸ್ಥೆ ಮೂಲಕ ಸಮಾಜದಲ್ಲಿ ದುಡಿಯುತ್ತಿದ್ದ ಶಾಂತಾರಾಮ್ ಸಿದ್ದಿ ಉತ್ತಮ ವಾಗ್ಮಿ ಸಹ ಆಗಿದ್ದರಿಂದ ಅವರನ್ನು ಆಯ್ಕೆ ಮಾಡಲಾಗಿತ್ತು. ಅದೇ ಮಾದರಿಯಲ್ಲಿಯೇ ಈ ಬಾರಿ ಸಹ ಸಮರ್ಥ ನಾಯಕರಿಗೆ ಜಿಲ್ಲೆಯಿಂದ ಟಿಕೆಟ್ ಸಿಗುವ ಸಾಧ್ಯತೆ ಇದೆ.
ಸದ್ಯ ಟಿಕೆಟ್ ರೇಸ್ನಲ್ಲಿ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಕೆ. ಜಿ. ನಾಯ್ಕ, ಉಪಾಧ್ಯಕ್ಷ ನಾಗರಾಜ ನಾಯಕ, ಆರ್. ಡಿ. ಹೆಗಡೆ, ಭಾಸ್ಕರ್ ನಾರ್ವೇಕರ್, ಗಣಪತಿ ಉಳ್ವೇಕರ್, ನಾಗರಾಜ್ ನಾಯಕ ತೊರ್ಕೆ, ಮೋಹನದಾಸ ನಾಯಕ, ವೆಂಕಟರಮಣ ಹೆಗಡೆ ಸೇರಿದಂತೆ ಹಲವರು ಪ್ರಯತ್ನಕ್ಕೆ ಇಳಿದಿದ್ದಾರೆ. ಇವರಲ್ಲಿ ಯಾರನ್ನು ಪಕ್ಷ ಆಯ್ಕೆ ಮಾಡಲಿದೆ? ಎನ್ನುವುದು ಕುತೂಹಲ ಮೂಡಿಸಿದೆ.
ಸಣ್ಣ ಸಮುದಾಯಕ್ಕೆ ಅವಕಾಶ?; ಬಿಜೆಪಿಯಲ್ಲಿ ಇತ್ತೀಚಿನ ದಿನದಲ್ಲಿ ಸಣ್ಣ ಸಮುದಾಯದವರನ್ನು ಗುರುತಿಸಿ ಟಿಕೆಟ್ ಕೊಡುವ ಸಂಪ್ರದಾಯವನ್ನು ರೂಢಿಸಿಕೊಂಡು ಬರಲಾಗುತ್ತಿದೆ. ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಸವಿತಾ ಸಮುದಾಯದ ಅಶೋಕ್ ಗಸ್ತಿ, ಪರಿಷತ್ಗೆ ಸಿದ್ದಿ ಸಮುದಾಯದ ಶಾಂತರಾಮ್ ಸಿದ್ದಿ ಆಯ್ಕೆ ಮಾಡಿದ್ದು ಇದಕ್ಕೆ ಸಾಕ್ಷಿಯಾಗಿದೆ.
Recommended Video
ಜಿಲ್ಲೆಯಿಂದ ಈವರೆಗೆ ಆಯ್ಕೆಯಾದವರು ಜಿಲ್ಲೆಯ ಮಟ್ಟಿಗೆ ಪ್ರಬಲ ಸಮುದಾಯದವರಲ್ಲ. ಈ ನಿಟ್ಟಿನಲ್ಲಿ ಸಣ್ಣ ಸಮುದಾಯದ ನಾಯಕನನ್ನು ಗುರುತಿಸಿ ಪಕ್ಷ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬರುವ ಕಾರ್ಯವನ್ನು ಮಾಡುವ ಮೂಲಕ ಭವಿಷ್ಯದಲ್ಲಿ ವಿಧಾನಸಭೆ ಚುನಾವಣೆಗೆ ಸಣ್ಣ-ಸಣ್ಣ ಸಮುದಾಯದ ಮತವನ್ನು ಸೆಳೆಯುವ ಪ್ರಯತ್ನ ಸಹ ನಾಯಕರುಗಳು ಮಾಡಲಿದ್ದಾರೆ ಎನ್ನುವುದು ಪಕ್ಷದ ಕೆಲ ನಾಯಕರ ಅಭಿಪ್ರಾಯ.