"ಲೈಟ್ ಕಂಬ ನಿಲ್ಲಿಸಿದರೂ ಕಾಂಗ್ರೆಸ್ ಗೆಲ್ಲುತ್ತದೆ ಅಂತಿದ್ದರು, ಈಗ ರಾಹುಲ್ ಗಾಂಧಿ ನಿಂತರೂ ಗೆಲ್ಲಲ್ಲ"
ಕಾರವಾರ, ನವೆಂಬರ್ 19: 'ಕಾಂಗ್ರೆಸ್ ಸ್ಥಿತಿ ಇಂದು ಬಹಳ ಕೆಟ್ಟದಾಗಿದೆ. ಈ ಹಿಂದೆ ಲೈಟ್ ಕಂಬವನ್ನು ಚುನಾವಣೆಗೆ ನಿಲ್ಲಿಸಿದರೂ ಕಾಂಗ್ರೆಸ್ನಿಂದ ಗೆಲ್ಲುತ್ತದೆ ಎನ್ನಲಾಗುತ್ತಿತ್ತು. ಆದರೆ, ಈಗ ರಾಹುಲ್ ಗಾಂಧಿಯೇ ಬಂದು ನಿಂತರೂ ಚುನಾವಣೆಯಲ್ಲಿ ಗೆಲ್ಲಲ್ಲ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಯಲ್ಲಾಪುರ ಪಟ್ಟಣದ ವೈಟಿಎಸ್ ಎಸ್ ಕಾಲೇಜು ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, 'ಹದಿನೈದು ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಅಭ್ಯರ್ಥಿಗಳಿಲ್ಲ. ಕಾಂಗ್ರೆಸ್ ಹಿರಿಯ ನಾಯಕರು ಪಕ್ಷದಿಂದ ಹೊರಗೆ ಹೋಗಿದ್ದಾರೆ. ಕೆಲವರು ಜೈಲಿಗೆ ಹೋದರೆ, ಕೆಲವರು ಸಿದ್ದರಾಮಯ್ಯನವರ ಜೊತೆ ಸೇರಲ್ಲ ಎಂದು ಹೊರಗೆ ತಿರುಗುತ್ತಿದ್ದಾರೆ. ಕಾಂಗ್ರೆಸ್ ಸರ್ವನಾಶವಾಗಲಿ ಎಂದು ಜನಾರ್ದನ ಪೂಜಾರಿ ಹೇಳಿದ್ದಾರೆ' ಎಂದು ಮಾತಿನಲ್ಲೇ ತಿವಿದರು.
ಸಿದ್ದರಾಮಯ್ಯ ಫೋಟೊ ಯಾರೂ ತಗೊಳ್ಳೋದಿಲ್ಲ
'ನಾನು ಸಂಸದನಾದ ನಂತರ ದೆಹಳಿಗೆ ತೆರಳಿ ಕಚೇರಿಯಲ್ಲಿ ಯಡಿಯೂರಪ್ಪನವರ ಫೋಟೊ ಹಾಕಲೆಂದು ಅಂಗಡಿಗೆ ತೆರಳಿ ಫೋಟೊ ಕೇಳಿದೆ. ಮೂರು ಅಂಗಡಿಗೆ ಹೋದರೂ ಯಡಿಯೂರಪ್ಪನವರ ಫೋಟೊ ಸಿಗಲಿಲ್ಲ. ಒಂದು ಅಂಗಡಿಯಲ್ಲಿ ಯಡಿಯೂರಪ್ಪನವರ ಫೋಟೊ ಇಲ್ಲ; ಸಿದ್ದರಾಮಯ್ಯನವರ ಫೋಟೊ ಇದೆ ಎಂದು ಕೊಟ್ಟಿದ್ದರು. ಯಾಕೆ ಎಂದು ಕೇಳಿದಾಗ, ಯಡಿಯೂರಪ್ಪನವರ ಫೋಟೊ ಬಂದಾಗ ಐದು ನಿಮಿಷದಲ್ಲಿ ಖಾಲಿಯಾಗುತ್ತದೆ. ಆದರೆ, ಸಿದ್ದರಾಮಯ್ಯನವರ ಫೋಟೊವನ್ನು ಯಾರೂ ತಗೋಳೋದಿಲ್ಲ ಎಂದು ಉತ್ತರಿಸಿದರು' ಎಂದು ವ್ಯಂಗ್ಯವಾಡಿದರು.
"ಅನರ್ಹ ಶಾಸಕರು ಸಕ್ಕರೆ, ಬಿಜೆಪಿ ಹಾಲು, ಬೆರೆಯುವುದು ಬಲು ಸುಲಭ"
"ನೆರೆ, ಬರ ಸಮರ್ಥಿಸಿದ ಏಕೈಕ ನಾಯಕ ಯಡಿಯೂರಪ್ಪ"
'2018ರಲ್ಲಿ ಐದು ವರ್ಷ ಸಿದ್ದರಾಮಯ್ಯ ಸರ್ಕಾರ ಬೇಡ ಎಂದು, ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ ಹೆಚ್ಚು ಸ್ಥಾನ ಕೊಟ್ಟರು. ಆದರೆ, ಮೈತ್ರಿ ಸರ್ಕಾರ ಬಂದಿತ್ತು. ಮೈತ್ರಿ ಸರ್ಕಾರ ಸರಿಯಾಗಿ ಕೆಲಸ ಮಾಡದಾಗ ಹದಿನೇಳು ಶಾಸಕರು ವಿರೋಧ ಪಕ್ಷಕ್ಕೆ ಬೆಂಬಲ ಕೊಡುವ ಮೂಲಕ ಕಲ್ಯಾಣ ಕರ್ನಾಟಕಕ್ಕೆ ಸಹಕಾರ ನೀಡಿದರು. ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಭ್ರದಗೊಳಿಸಲು ಹೆಬ್ಬಾರ್ ಗೆಲ್ಲಿಸಿ. ಯಡಿಯೂರಪ್ಪ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹಾಲಿಗೆ ಬೆಂಬಲ ಬೆಲೆ, ರೈತರ ಅಭಿವೃದ್ಧಿಗೆ ನಾನಾ ಯೋಜನೆ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಬಂದಿದೆ. ನೆರೆ ಹಾಗೂ ಬರವನ್ನು ಸಮರ್ಥವಾಗಿ ಎದುರಿಸಿದ ಏಕೈಕ ನಾಯಕ ಯಡಿಯೂರಪ್ಪ' ಎಂದು ಹೇಳಿದರು.
"ಒಳ್ಳೆಯವರು ಬಿಜೆಪಿಗೆ ಬರ್ತಾರೆ"
ಇದೇ ಸಂದರ್ಭ ಸಂಸದ ಅನಂತಕುಮಾರ್ ಹೆಗಡೆ ಮಾತನಾಡಿ, 'ಕಾಂಗ್ರೆಸ್ ಈ ದೇಶದಲ್ಲಿ ಇರಬಾರದು. ಅಯೋಧ್ಯೆ ತೀರ್ಪಿನ ಸಂಬಂಧ ಮುಸ್ಲಿಮರು ಮಾತನಾಡಿಲ್ಲ. ಆದರೆ, ಖುರ್ಚಿಗೆ ಬೆಂಕಿ ಬಿದ್ದ ಹಾಗೆ ಆಗಿದ್ದು ಕಾಂಗ್ರೆಸ್ಗೆ. ಒಳ್ಳೆಯವರು ಕಾಂಗ್ರೆಸ್ನಲ್ಲಿ ಯಾರು ಇದ್ದಾರೋ ಅವರು ಬಿಜೆಪಿಗೆ ಬರುತ್ತಾರೆ, ನಾವು ಕರೆದುಕೊಳ್ತೇವೆ. ಶೀಘ್ರದಲ್ಲೇ ಜಿಲ್ಲೆಯ ಇನ್ನೊಬ್ಬ ಮುಖಂಡ ಬಿಜೆಪಿಗೆ ಬರ್ತಾರೆ. ಸಿದ್ದರಾಮಣ್ಣ ಸಹ ಬಿಜೆಪಿ ಬರಲು ಕ್ಯೂನಲ್ಲಿ ನಿಂತಿದ್ದಾರೆ. ಕಾಂಗ್ರೆಸ್ 70 ವರ್ಷದಿಂದ ಮಾಡಿದ್ದು ಕೇವಲ ಭಾಷಣ, ಸೋಗಲಾಡಿತನ. ಕಾಂಗ್ರೆಸ್ ಈ ದೇಶಕ್ಕೆ ದೊಡ್ಡ ರೋಗ. ಈ ದೇಶದಲ್ಲಿ ಕಾಂಗ್ರೆಸ್ ತೊಲಗಿಸಲು ಎಲ್ಲರೂ ಮುಂದಾಗಬೇಕು' ಎಂದು ವಾಗ್ದಾಳಿ ನಡೆಸಿದರು.
ವೇದಿಕೆಯಲ್ಲಿ ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ದಿನಕರ ಶೆಟ್ಟಿ, ಸುನೀಲ್ ನಾಯ್ಕ, ರೂಪಾಲಿ ನಾಯ್ಕ, ಹಳಿಯಾಳ ಕ್ಷೇತ್ರದ ಮಾಜಿ ಶಾಸಕ ಸುನೀಲ್ ಹೆಗಡೆ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ, ಹಿರಿಯ ಮುಖಂಡ ಪ್ರಮೋದ ಹೆಗಡೆ ಮುಂತಾದವರು ಇದ್ದರು.
15 ಕ್ಷೇತ್ರಗಳ ಉಪಚುನಾವಣೆ: ಬಿಜೆಪಿಯಿಂದ 40 ಸ್ಟಾರ್ ಪ್ರಚಾರಕರು
ಸಮಾವೇಶಕ್ಕೆ ಕಾಲೇಜು ಕ್ರೀಡಾಂಗಣ ಬಳಕೆ
ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ನಾಮಪತ್ರ ಸಲ್ಲಿಸುವ ಹಿನ್ನಲೆಯಲ್ಲಿ ಯಲ್ಲಾಪುರ ಪಟ್ಟಣದ ವೈಟಿಎಸ್ ಎಸ್ ಕಾಲೇಜಿನ ಆವರಣದ ಕ್ರೀಡಾಂಗಣದಲ್ಲೇ ಸಮಾವೇಶ ಹಮ್ಮಿಕೊಂಡಿರುವುದಕ್ಕೆ ಕೆಲವರಿಂದ ಆಕ್ಷೇಪ ವ್ಯಕ್ತವಾಯಿತು. ಬೆಳಿಗ್ಗೆ 11 ಗಂಟೆಯಿಂದ ಸಮಾವೇಶ ಆರಂಭಗೊಂಡಿದ್ದು, ಸಮೀಪದಲ್ಲೇ ಪಾಠ ನಡೆಯುತ್ತಿತ್ತು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದ್ದರೂ ಸಮಾವೇಶಕ್ಕೆ ತಾಲ್ಲೂಕು ಆಡಳಿತ ಅನುಮತಿ ನೀಡಿದೆ ಎಂದು ಆಕ್ಷೇಪ ಕೇಳಿ ಬಂದಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿದ ತಾಲ್ಲೂಕು ಆಡಳಿತದ ಅಧಿಕಾರಿಗಳು, ಸಮಾವೇಶ ನಡೆಸಲು ಶಾಲಾ ಕಾಲೇಜು ಆವರಣವನ್ನು ನೀಡಬಹುದಾಗಿದೆ. ಅದಕ್ಕೂ ಮುನ್ನ ಶಾಲಾ ಆಡಳಿತ ಮಂಡಳಿಯಿಂದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಸಮಾವೇಶಕ್ಕಾಗಿ ಅನುಮತಿ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.