ಸಿಎಂ, ರಾಜ್ಯಾಧ್ಯಕ್ಷರ ತವರಿಗೆ ಬಂಪರ್; ಉತ್ತರ ಕನ್ನಡಕ್ಕೆ ‘ನೋ ಆಫರ್’
ಕಾರವಾರ, ನವೆಂಬರ್ 26: ರಾಜ್ಯ ಸರ್ಕಾರದ ನಿಗಮ ಮಂಡಳಿಗಳ ಅಧ್ಯಕ್ಷ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಮುಂದುವರೆದಿದ್ದು, ಬಹುಪಾಲು ಮುಖ್ಯಮಂತ್ರಿಯ ತವರೂರು ಶಿವಮೊಗ್ಗ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ದಕ್ಷಿಣ ಕನ್ನಡದವರಿಗೆ ಹೆಚ್ಚಿನ ಪ್ರಾಧಾನ್ಯ ನೀಡಲಾಗಿದ್ದು, ಜಿಲ್ಲೆಯ ಬಿಜೆಪಿ ನಾಯಕರಿಗೆ ಈವರೆಗೂ ಯಾವುದೇ ನಿಗಮಗಳಲ್ಲಿ ಅವಕಾಶ ಸಿಗದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಬಿಜೆಪಿಯ ಭದ್ರಕೋಟೆ ಎಂದೇ ಕರೆಯಲ್ಪಟ್ಟ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು ಐದು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗಾಗಿ ದುಡಿದವರಿಗೆ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ ಹುದ್ದೆ ಒಂದಿಬ್ಬರಿಗಾದರೂ ಸಿಗಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಪ್ರಬಲ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಒಂದು ವರ್ಷ ಅಧಿಕಾರ ಪೂರೈಸಿದ ನಂತರ ಶಾಸಕರಿಗೆ ನೀಡಿದ್ದರು. ಇನ್ನುಳಿದಿರುವ ನಿಗಮ ಮಂಡಳಿಗಳಿಗೆ ಪಕ್ಷದ ಮುಖಂಡರುಗಳಿಗೆ ಕೊಡುವ ತೀರ್ಮಾನ ಮಾಡಿ ಈಗಾಗಲೇ ಹಲವು ನಿಗಮ ಮಂಡಳಿಗಳಿಗೆ ನೇಮಕ ಸಹ ಮಾಡಲಾಗಿದೆ. ಮುಂದೆ ಓದಿ...
ಸಚಿವ ಸಂಪುಟ ವಿಸ್ತರಣೆ; ಕಾರವಾರದ ಕರಾವಳಿ ಭಾಗಕ್ಕೆ ಸಿಗಲಿದೆಯಾ ಪ್ರಾತಿನಿಧ್ಯ?
ಯಾವ ಮುಖಂಡರಿಗೂ ಅವಕಾಶ ಸಿಕ್ಕಿಲ್ಲ
ಈಗಾಗಲೇ 30ಕ್ಕೂ ಅಧಿಕ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಜಿಲ್ಲೆಯ ಯಾವ ಮುಖಂಡರಿಗೂ ಈ ಪಟ್ಟಿಯಲ್ಲಿ ಅವಕಾಶ ಸಿಗದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕೆ.ಜಿ ನಾಯ್ಕ, ಅಂಕೋಲಾದ ಭಾಸ್ಕರ್ ನಾರ್ವೇಕರ್, ಕಾರವಾರದ ಗಣಪತಿ ಉಳ್ವೇಕರ್ ಸೇರಿದಂತೆ ಪಕ್ಷದ ಹಲವು ನಾಯಕರು ನಿಗಮ ಮಂಡಳಿಗಳ ಅಧ್ಯಕ್ಷ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದರು. ಆದರೆ ಯಾರಿಗೂ ಈವರೆಗೆ ಅವಕಾಶ ಸಿಕ್ಕಿಲ್ಲ. ಹಲವು ನಿಗಮಗಳ ಅಧ್ಯಕ್ಷ ಸ್ಥಾನ ನೆರೆಯ ಶಿವಮೊಗ್ಗ, ಮಂಗಳೂರು ಪಾಲಾಗಿದ್ದು, ಜಿಲ್ಲೆಯ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳ ನಿರಾಸಕ್ತಿಯಿಂದಲೇ ಮುಖಂಡರಿಗೆ ಅವಕಾಶ ಸಿಗುತ್ತಿಲ್ಲ ಎನ್ನುವ ಮಾತು ಸಹ ಕೇಳಿ ಬಂದಿದೆ.
ಹುಸಿಯಾದ ನಾಯಕರ ನಿರೀಕ್ಷೆ
ವನ್ಯಜೀವಿ ಮಂಡಳಿಗೆ ಅನಂತ್ ಹೆಗಡೆ ಆಶೀಸರ, ಯಕ್ಷಗಾನ ಅಕಾಡೆಮಿಗೆ ಎಂ.ಎ ಹೆಗಡೆ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಯಲ್ಲಾಪುರದ ಪ್ರಮೋದ್ ಹೆಗಡೆಯವರಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅವಕಾಶ ಸಿಕ್ಕಿದೆ. ಆದರೆ ಈ ಮೂರು ಹುದ್ದೆಗಳು ಒಂದೇ ಸಮುದಾಯಕ್ಕೆ ಕೊಟ್ಟಿದ್ದು, ಪಕ್ಷಕ್ಕಾಗಿ ಹೆಚ್ಚಿನ ಮಟ್ಟದಲ್ಲಿ ದುಡಿದವರಿಗೆ ಅವಕಾಶ ಸಿಕ್ಕಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು. ಉಳಿದ ನಿಗಮ ಮಂಡಳಿಗಳಿಗಾದರೂ ಪಕ್ಷಕ್ಕಾಗಿ ದುಡಿದ ಇತರೆ ವರ್ಗದವರಿಗೆ ಅವಕಾಶ ಕೊಡಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಇಲ್ಲಿಯವರೆಗೂ ನಿಗಮ ಮಂಡಳಿಗಳಿಗೆ ಜಿಲ್ಲೆಯ ನಾಯಕರಿಗೆ ಅವಕಾಶ ಸಿಗದಿರುವುದು ನಿರೀಕ್ಷೆಗಳು ಹುಸಿಯಾಗುವಂತೆ ಕಾಣುತ್ತಿದೆ.
ಸ್ಥಳೀಯ ಸಂಸ್ಥೆಗಳ ಚುಕ್ಕಾಣಿ ಹಿಡಿದು ‘ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ' ಹೊಡೆದ ರೂಪಾಲಿ ನಾಯ್ಕ
ಉಳ್ವೇಕರ್ ಕೈ ತಪ್ಪಿದ ಕೆಎಫ್ ಡಿಸಿ
ಜಿಲ್ಲೆಯಲ್ಲಿ ಪಕ್ಷಕ್ಕಾಗಿ ದುಡಿದ ಮೀನುಗಾರ ಮುಖಂಡ ಗಣಪತಿ ಉಳ್ವೇಕರ್ ಅವರಿಗೆ ಈ ಬಾರಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ (ಕೆಎಫ್ ಡಿಸಿ) ಅಧ್ಯಕ್ಷ ಹುದ್ದೆ ಸಿಗುವ ಸಾಕಷ್ಟು ನಿರೀಕ್ಷೆ ಇತ್ತು. ನಗರಸಭೆ ಅಧ್ಯಕ್ಷರಾಗಿ ಪಕ್ಷ ಸಂಘಟಿಸಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಕಳೆದ ಬಾರಿ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದ ಉಳ್ವೇಕರ್ ಅವರಿಗೆ ಕೆಎಫ್ ಡಿಸಿ ಅಧ್ಯಕ್ಷ ಸ್ಥಾನ ಕೊಡುವ ಮೂಲಕ ಮೀನುಗಾರ ಸಮುದಾಯದವರಿಗೆ ಅವಕಾಶ ಕೊಡುತ್ತದೆ ಎನ್ನಲಾಗಿತ್ತು.
ಕಾರವಾರ- ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ, ಸಂಸದ ಅನಂತಕುಮಾರ್ ಹೆಗಡೆ ಸೇರಿ ಹಲವರು ಗಣಪತಿ ಉಳ್ವೇಕರ್ ಅವರಿಗೆ ನಿಗಮ ಅಧ್ಯಕ್ಷ ಸ್ಥಾನ ಕೊಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಬಗ್ಗೆ ಉಳ್ವೇಕರ್ ಸಹ ತನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗಲಿದೆ ಎನ್ನುವ ನಿರೀಕ್ಷೆ ಹೊಂದಿದ್ದರು. ಆದರೆ ಕೆಎಫ್ ಡಿಸಿ ಅಧ್ಯಕ್ಷ ಸ್ಥಾನವನ್ನ ಮಂಗಳೂರಿನ ನಿತೀನ್ ಕುಮಾರ್ ಎನ್ನುವವರಿಗೆ ಈ ಬಾರಿ ನೀಡಲಾಗಿದೆ.
Recommended Video
ಬಿಜೆಪಿ ನಾಯಕರ ನಡೆ ಬಗ್ಗೆ ಬೇಸರ
ಕಳೆದ ಬಾರಿ ಹೊನ್ನಾವರದ ಮೀನುಗಾರ ಯುವಕ ಪರೇಶ್ ಮೇಸ್ತಾ ಸಾವಿನ ಪ್ರಕರಣವೇ ಬಿಜೆಪಿಗೆ ಹೆಚ್ಚಿನ ಲಾಭವಾಗಿ ಹಲವು ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಈ ನಿಟ್ಟಿನಲ್ಲಿ ಜಿಲ್ಲೆಯ ಮೀನುಗಾರ ಮುಖಂಡರಲ್ಲಿ ಒಬ್ಬರಿಗಾದರೂ ಅವಕಾಶ ಕೊಟ್ಟು ಆ ಋಣವನ್ನು ಬಿಜೆಪಿ ತೀರಿಸುತ್ತದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಇದೀಗ ಉಳ್ವೇಕರ್ ಅವರಿಗೆ ಅಧ್ಯಕ್ಷ ಸ್ಥಾನ ಕೈತಪ್ಪಿದ್ದು, ಈ ಬಗ್ಗೆ ಉಳ್ವೇಕರ್ ಸಹ ಪಕ್ಷದ ನಾಯಕರ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.