ಅನಂತಕುಮಾರ್ ವಿವಾದಾತ್ಮಕ ಹೇಳಿಕೆಯೇ ಸರಿ ಎಂದ ಜಿಲ್ಲಾ ಬಿಜೆಪಿ ಕಾರ್ಯಕರ್ತರು
ಕಾರವಾರ, ಫೆಬ್ರವರಿ 05: ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಪಕ್ಷದ ಹೈಕಮಾಂಡ್ ಕೆಂಗಣ್ಣಿಗೆ ಸಂಸದ ಅನಂತಕುಮಾರ್ ಹೆಗಡೆ ಒಂದೆಡೆ ಗುರಿಯಾಗಿದ್ದರೆ, ಇನ್ನೊಂದೆಡೆ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಪಕ್ಷದ ತೀರ್ಮಾನವನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಟೀಕಿಸಿದ್ದಾರೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ 'ಮತ್ತೆ ಮತ್ತೆ ಸಾವರ್ಕರ್' ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ಸ್ವಾತಂತ್ರ್ಯಹೋರಾಟಗಾರರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೆಗಡೆಯ ಈ ಹೇಳಿಕೆಗೆ ದೇಶದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ದೇಶದ ನಾನಾ ಕಡೆ ಕಾಂಗ್ರೆಸ್ ಅನಂತಕುಮಾರ್ ಹೇಳಿಕೆಯ ವಿರುದ್ಧ ಪ್ರತಿಭಟನೆ ಕೂಡ ಮಾಡುವ ಮೂಲಕ, ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿತ್ತು.
ಹೈಕಮಾಂಡ್ ನಿಂದ ಅನಂತಕುಮಾರ್ ಗೆ ಶೋಕಾಸ್ ನೋಟಿಸ್
ಮಂಗಳವಾರ ನಡೆದ ಸಂಸತ್ ಕಲಾಪದಲ್ಲೂ ಕಾಂಗ್ರೆಸ್ ಹಾಗೂ ಇತರೆ ಪಕ್ಷದವರು ಅನಂತಕುಮಾರ್ ಹೇಳಿಕೆಯನ್ನು ಖಂಡಿಸಿದ್ದು, ಕ್ಷಮೆ ಕೋರುವಂತೆ ಆಗ್ರಹಿಸಿದ್ದರು. ಈ ನಡುವೆ ಅನಂತಕುಮಾರ್ ಹೆಗಡೆ ಹೇಳಿಕೆಯ ಬಗ್ಗೆ ಬಿಜೆಪಿ ಪಕ್ಷದಲ್ಲಿಯೇ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ಅನಂತಕುಮಾರ್ ಹೆಗಡೆಗೆ ಶೋಕಾಸ್ ನೋಟಿಸ್ ನೀಡಿತ್ತು. ಬಿಜೆಪಿಯ ಕೇಂದ್ರ ಶಿಸ್ತು ಪಾಲನಾ ಸಮಿತಿ ಶೋಕಾಸ್ ನೋಟಿಸ್ ನೀಡಿ ವಿವರಣೆ ಕೇಳಿತ್ತು.
ಅಗ್ಗದ ಪ್ರಚಾರಕ್ಕೆ ಅನಂತಕುಮಾರ್ ಹೆಗಡೆ ಹೇಳಿಕೆ; ದೇಶಪಾಂಡೆ
ಅನಂತಕುಮಾರ್ ಹೇಳಿಕೆ ಸಮರ್ಥಿಸಿಕೊಂಡ ಬಿಜೆಪಿ ಕಾರ್ಯಕರ್ತರು
ಆದರೆ, ಜಿಲ್ಲೆಯ ಬಿಜೆಪಿಯ ಕಾರ್ಯಕರ್ತರು ಬಹಿರಂಗವಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹೈಕಮಾಂಡ್ ಶೋಕಾಸ್ ನೋಟಿಸ್ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ವಾಟ್ಸಪ್ ಗ್ರೂಪ್ ಗಳಲ್ಲಿ ಅನಂತಕುಮಾರ್ ಹೆಗಡೆಯ ಹೇಳಿಕೆಯನ್ನು ಸಮರ್ಥಿಸಿಕೊಂಡು, ‘ಶೋಕಾಸ್ ನೋಟಿಸ್ ನೀಡಲಿ, ವಿಪ್ ಜಾರಿ ಮಾಡಲಿ. ತತ್ವ ಸಿದ್ಧಾಂತದ ರಾಜಿಯೇ ಇಲ್ಲ' ಎನ್ನುವ ಸಂದೇಶಗಳನ್ನು ಹರಿಬಿಟ್ಟಿದ್ದಾರೆ. ವಾಟ್ಸಪ್, ಫೇಸ್ಬುಕ್ ನಲ್ಲಿ, ‘ನಮ್ಮ ಪಕ್ಷ, ಪಕ್ಷಕ್ಕಾಗಿ ತನ್ನನ್ನು ಅರ್ಪಿಸಿಕೊಂಡ ವ್ಯಕ್ತಿಯ ಬಗ್ಗೆ ತಪ್ಪಾಗಿ ಯೋಚಿಸುತ್ತಿದೆ' ಎಂದು ಹೈಕಮಾಂಡ್ ವಿರುದ್ಧವೇ ಕೆಲವರು ಟೀಕೆ ಸಹ ಮಾಡಿದ್ದಾರೆ.
ನೋಟಿಸ್ ಗೆ ಕಾರ್ಯಕರ್ತರ ಬಹಿರಂಗ ಅಸಮಾಧಾನ
ಬಿಜೆಪಿಯಲ್ಲಿ, ಕಳೆದ ಕೆಲವು ವರ್ಷಗಳಿಂದ ಪಕ್ಷದ ತೀರ್ಮಾನಗಳಿಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕುವ ಪ್ರಕರಣ ಜಿಲ್ಲೆಯಲ್ಲಿ ಸಾಕಷ್ಟು ಕಡಿಮೆಯಾಗಿತ್ತು. ಆದರೆ, ಇದೀಗ ಅನಂತಕುಮಾರ್ ಹೆಗಡೆಗೆ ಹೈಕಮಾಂಡ್ ನೀಡಿರುವ ಶೋಕಾಸ್ ನೋಟಿಸ್, ಬಹಿರಂಗವಾಗಿ ಕಾರ್ಯಕರ್ತರು ಅಸಮಾಧಾನ ಹೊರಹಾಕುವಂತೆ ಪ್ರೇರೇಪಿಸಿದೆ. ಈ ಬಗ್ಗೆ ಪಕ್ಷದ ನಾಯಕರು ಯಾವ ಕ್ರಮಕ್ಕೆ ಮುಂದಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಅನಂತಕುಮಾರ್ ಹೆಗಡೆ ವಿರುದ್ಧ ಲೋಕಸಭೆಯಲ್ಲಿ ತೀವ್ರ ಆಕ್ರೋಶ
‘ಗಾಂಧಿಯಿಂದ ಸ್ವಾತಂತ್ರ್ಯಕ್ಕೆ ತಡವಾಯ್ತು’
ಅತ್ತ ಸಂಸದ ಅನಂತಕುಮಾರ್ ಹೆಗಡೆ, ವಿವಾದಕ್ಕೆ ಗುರಿಯಾಗಿರುವ ತಮ್ಮ ಹೇಳಿಕೆಯಲ್ಲಿ ಗಾಂಧೀಜಿಯವರ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲ ಎಂದು ನುಣುಚಿಕೊಳ್ಳಲು ಯತ್ನಿಸಿದರೆ, ಇತ್ತ ಅವರ ಆಪ್ತ ಕಾರ್ಯದರ್ಶಿ ತಮ್ಮ ವಾಟ್ಸಪ್ ನಲ್ಲಿ ‘ಗಾಂಧಿಯಿಂದಲೇ ಸ್ವಾತಂತ್ರ್ಯಕ್ಕೆ ತಡವಾಯ್ತು' ಎಂದು ಹಾಕಿಕೊಂಡಿದ್ದಾರೆ.
‘ಗಾಂಧಿ ಒಬ್ಬರಿಂದ ದೇಶಕ್ಕೆ ಸ್ವಾತಂತ್ರ್ಯಬಂದಿಲ್ಲ. ಗಾಂಧಿ ಇಲ್ಲದಿದ್ದರೆ 1947ಕ್ಕೂ ಮೊದಲೇ ನಮಗೆ ಸ್ವಾತಂತ್ರ್ಯ ಬರುತ್ತಿತ್ತು. ಗಾಂಧಿ ಶಾಂತಿ ಮಂತ್ರ ಹೇಳಿಕೊಂಡು ತಡಮಾಡಿದರು' ಎಂದು ಹಾಕಿಕೊಂಡಿದ್ದಾರೆ.
‘ತನ್ನ ಹೆಸರನ್ನು ಇನ್ನೊಂದು ಕುಟುಂಬಕ್ಕೆ ಬಳುವಳಿ ಕೊಟ್ಟಿದ್ದು ಈ ದೇಶಕ್ಕೆ ಗಾಂಧಿಯ ಮಹಾನ್ ಕೊಡುಗೆ. ಮತ್ತೊಂದು ದುರಂತ ನೆಹರು. ಅಂಥ ಒಬ್ಬ ಮೋಜುಗಾರನನ್ನು ಈ ದೇಶಕ್ಕೆ ಪ್ರಧಾನಿ ಮಾಡಿದ್ದೂ ಇನ್ನೊಂದು ದೊಡ್ಡ ಬಳುವಳಿ. ದೇಶವನ್ನು ಇಬ್ಭಾಗ ಮಾಡಿ, ಶಾಶ್ವತ ಹೊಡೆದಾಟಕ್ಕೆ ದಾರಿ ಮಾಡಿಕೊಟ್ಟಿದ್ದಾರೆ' ಎಂದು ಬರೆದುಕೊಂಡಿದ್ದಾರೆ.
‘ವಾಸ್ತವ ಸತ್ಯವನ್ನು ಅನಂತಕುಮಾರ್ ಹೆಗಡೆ ಹೇಳಿದ್ದಾರೆ. ಸತ್ಯ ಎಂದಿಗೂ ಸಿಹಿ ಆಗೋದಿಕ್ಕೆ ಸಾಧ್ಯವಿಲ್ಲ. ಸತ್ಯ ಕಹಿಯಾಗಿಯೇ ಇರುತ್ತೆ ಅಲ್ವಾ?' ಎಂದು ತಮ್ಮ ವಾಟ್ಸಪ್ ಸ್ಟೇಟಸ್ನಲ್ಲಿ ಹಾಕಿಕೊಳ್ಳುವ ಮೂಲಕ ಗಾಂಧಿ ಹಾಗೂ ನೆಹರು ಬಗೆಗೆ ಹೀಯಾಳಿಸಿದ್ದಾರೆ.