ಬಿಎಸ್ ವೈ ಮುಖ್ಯಮಂತ್ರಿ ಆಗಲಿಲ್ಲ ಎಂದು ವಿಷ ಸೇವಿಸಿದ ಕಾರ್ಯಕರ್ತ
ಕಾರವಾರ, ಮೇ 22: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗದ ಹಿನ್ನಲೆಯಲ್ಲಿ ಮನನೊಂದ ಬಿಜೆಪಿ ಕಾರ್ಯಕರ್ತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಉಂಚಳ್ಳಿಯಲ್ಲಿ ಇಂದು ಮಂಗಳವಾರ ನಡೆದಿದೆ.
ಸುರೇಶ್ ಪೂಜಾರಿ (30) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಿಜೆಪಿ ಕಾರ್ಯಕರ್ತ.
ನಿಮಗಾಗಿ ಬದುಕುವುದೇ ನನ್ನ ಬದುಕು!: ಯಡಿಯೂರಪ್ಪ ಪತ್ರ
ಈತ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗದ ಕಾರಣ ತಾನು ವಿಷ ಸೇವಿಸುತ್ತಿದ್ದುದಾಗಿ ಜನರ ಮುಂದೆ ಹೇಳಿಕೊಂಡಿದ್ದಾನೆ. ಮದ್ಯ ಸೇವನೆಯ ಚಟವನ್ನೂ ಹೊಂದಿದ್ದ ಈತ ಬೆಳಗ್ಗೆ ವಿಷ ಸೇವಿಸಿದ್ದಾನೆ.
ತೀವ್ರ ಅಸ್ವಸ್ಥಗೊಂಡಿರುವ ಅವರನ್ನು ಶಿರಸಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷ ಸೇವಿಸಿದಾತನ ಬಳಿ ವರದಿ ಪಡೆದುಕೊಂಡಿದ್ದೇವೆ. ಆತ ಕುಡಿದ ಅಮಲಿನಲ್ಲಿ ವಿಷ ಸೇವಿಸಿರುವುದಾಗಿ ಹೇಳಿದ್ದಾನೆ. ಸದ್ಯ ಆತ ಸುಧಾರಿಸಿಕೊಳ್ಳುತ್ತಿದ್ದಾನೆ ಎಂದು ಬನವಾಸಿ ಠಾಣೆಯ ಪಿಎಸ್ಐ ತಿಳಿಸಿದ್ದಾರೆ.
ಯಲ್ಲಾಪುರ ಕ್ಷೇತ್ರದ ಮಾಜಿ ಶಾಸಕ ವಿ.ಎಸ್.ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.