‘ಶಿವರಾಮ’, ‘ರಘುನಾಥ’ರ ನಡುವೆ ನೆಪ ಮಾತ್ರಕೆ ‘ಭೀಮ’!
ಕಾರವಾರ, ನವೆಂಬರ್ 25: ಯಲ್ಲಾಪುರ ಕ್ಷೇತ್ರದ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ವಿರುದ್ಧದ ಹೋರಾಟ ಎನ್ನುವುದಕ್ಕಿಂತ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಶಿವರಾಮ್ ಹೆಬ್ಬಾರ್ ನಡುವಿನ ಜಿದ್ದಾಜಿದ್ದಿಯ ಕಾದಾಟ ಎನ್ನುವ ಮಾತು ಇಡೀ ಕ್ಷೇತ್ರದಲ್ಲಿ ಕೇಳಿಬರುತ್ತಿದೆ.
ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಶಿವರಾಮ್ ಹೆಬ್ಬಾರ್ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನದಿಂದ ರಾಜೀನಾಮೆ ಕೊಟ್ಟಿದ್ದರೂ ಅವರ ನೇರ ಅಸಮಾಧಾನ ದೇಶಪಾಂಡೆಯವರ ಮೇಲೆ ಇತ್ತು ಎನ್ನಲಾಗಿದೆ.
ಅಸಮಾಧಾನ ಹೊರಹಾಕಿದ್ದ ಹೆಬ್ಬಾರ್
ದೇಶಪಾಂಡೆ ಇರುವವರೆಗೂ ತನಗೆ ಸಚಿವ ಸ್ಥಾನ ಸಿಗುವುದಿಲ್ಲ ಎನ್ನುವ ಅಸಮಾಧಾನವನ್ನೂ ಶಿವರಾಮ್ ಹೆಬ್ಬಾರ್ ತೋಡಿಕೊಂಡಿದ್ದರು. ಇದೇ ಕಾರಣದಿಂದಲೇ ಅವರು ಶಾಸಕ ಸ್ಥಾನಕ್ಕೆ, ಕೊನೆಗೆ ಪಕ್ಷಕ್ಕೆ ರಾಜೀನಾಮೆ ಕೊಟ್ಟರು ಎನ್ನಲಾಗಿದೆ. ಇದೀಗ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಉಪಚುನಾವಣೆ ಎದುರಿಸುತ್ತಿದ್ದು, ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಸ್ಥಾನ ದಕ್ಕಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.
ಹೆಬ್ಬಾರ್ ಜೊತೆಗೆ ಜಿಲ್ಲಾ ಉಸ್ತುವಾರಿ ಬೆಂಬಲ
ಗೆಲ್ಲಲು ಶಿವರಾಮ್ ಹೆಚ್ವಾರ್ ಜಿಲ್ಲಾ ಉಸ್ತುವಾರಿ ಶಶಿಕಲಾ ಜೊಲ್ಲೆ ಅವರನ್ನೂ ತನ್ನ ಹೆಗಲಿಗೆ ಹಾಕಿಕೊಂಡು, ದೇಶಪಾಂಡೆಯ ವಿರುದ್ಧ ಜಿಲ್ಲೆಯಲ್ಲಿ ಸಚಿವನಾಗಿ ಮೆರೆಯಬೇಕೆಂದು ಪಣತೊಟ್ಟಿ ನಿಂತಂತೆ ಕಾಣುತ್ತಿದೆ. ಹೀಗಾಗಿ ಶಿವರಾಮ್ ಹೆಬ್ಬಾರ್ ಪ್ರಚಾರ ಕಾರ್ಯವೂ ಬಿರುಸಾಗಿ ಸಾಗಿದೆ.
ಉಪಚುನಾವಣೆಗಾಗಿ ಯಲ್ಲಾಪುರದಲ್ಲಿ 'ಶತ್ರು'ಗಳಾದ ಅಪ್ಪ- ಮಗ
ಹೆಬ್ಬಾರ್ ವಿರುದ್ಧ ತೊಡೆ ತಪಟ್ಟಿದ ದೇಶಪಾಂಡೆ
ಇತ್ತ ದೇಶಪಾಂಡೆ ಕೂಡ ಹೆಬ್ಬಾರ್ ವಿರುದ್ಧ ತೊಡೆ ತಟ್ಟಿ, ನೆಪ ಮಾತ್ರಕ್ಕೆ ಭೀಮಣ್ಣ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಅವರಿಗೆ ಯಲ್ಲಾಪುರ- ಮುಂಡಗೋಡ ಹಳೆಯ ಕ್ಷೇತ್ರವಾಗಿದ್ದು, ಆರು ಬಾರಿ ಇಲ್ಲಿ ಶಾಸಕರಾಗಿ ಅಧಿಕಾರ ಚಲಾಯಿಸಿದವರಾಗಿದ್ದಾರೆ. ಈ ಉಪಚುನಾವಣೆಯಲ್ಲಿ ಹೆಬ್ಬಾರ್ ಗೆದ್ದು ಉಸ್ತುವಾರಿಯಾಗಿ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದರೆ ತಮಗೆ ಆಪತ್ತು ಎಂದು ಅರಿತಿರುವ ದೇಶಪಾಂಡೆ, ಕ್ಷೇತ್ರವನ್ನು 'ಕೈ'ವಶ ಮಾಡಿಕೊಳ್ಳಲೇಬೇಕು ಎಂದು ಕುಳಿತಿದ್ದಾರೆ. ಒಂದು ವೇಳೆ ಹೆಬ್ಬಾರ್ ಗೆದ್ದು ಸಚಿವರಾದರೆ, ದೇಶಪಾಂಡೆಯವರ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ಉಂಟಾಗಲಿದೆ ಎನ್ನುವುದು ಎರಡೂ ಪಕ್ಷಗಳ ಕಾರ್ಯಕರ್ತರ ಮನದಾಳ.
ಭೀಮಣ್ಣಗೆ ಸ್ಪರ್ಧಿಸುವುದು ಅನಿವಾರ್ಯ
ಇತ್ತ ಕಾಂಗ್ರೆಸ್ನಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಭೀಮಣ್ಣ ನಾಯ್ಕಗೆ, ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಪಕ್ಷ ಟಿಕೆಟ್ ನೀಡಿದ್ದಕ್ಕಾಗಿ ಸ್ಪರ್ಧಿಸಲೇಬೇಕಾದ ಅನಿವಾರ್ಯತೆ. ಅದರೊಂದಿಗೆ, ಗೆಲ್ಲಲೇಬೇಕೆಂಬ ಆತಂಕವೂ ಅವರಲ್ಲಿ ಮನೆ ಮಾಡಿದೆ. ಈ ಹಿಂದೆ ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗಲೂ ಸೋಲನನುಭವಿಸಿದ್ದ ಭೀಮಣ್ಣಂಗೆ, ಇಲ್ಲೂ ಸೋತರೆ ಪಕ್ಷದಲ್ಲಿ, ಕ್ಷೇತ್ರದ ಜನರಿಂದ ಮುಜುಗರ ಎದುರಿಸಬೇಕಾಗಿದೆ.
ಒಟ್ಟಾರೆ ಮೂವರ ಭವಿಷ್ಯ ಮತದಾರನ ಕೈಯಲ್ಲೇ ಇದ್ದು, 'ಕಮಲ' ಮುಡಿದು ಸರ್ಕಾರ ಉಳಿಸುತ್ತಾನೋ ಅಥವಾ 'ಕೈ' ಹಿಡಿದು ಇಬ್ಬರ ಪ್ರತಿಷ್ಠೆ ಎತ್ತಿ ಹಿಡಿಯುತ್ತಾನೋ ಕಾದು ನೋಡಬೇಕಾಗಿದೆ.
"ಡಮ್ಮಿ ಕ್ಯಾಂಡಿಡೇಟ್" ಎಂದು ಮಾವನ ಇದಿರಾಗಿ ಪ್ರಚಾರಕ್ಕಿಳಿದ ಕುಮಾರ್ ಬಂಗಾರಪ್ಪ