ನವದೆಹಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಟ್ಕಳದ ಟ್ಯಾಕ್ಸಿ ಚಾಲಕನಿಗೆ ಅವಕಾಶ
ಭಟ್ಕಳ, ಜನವರಿ 23: ನವದೆಹಲಿಯಲ್ಲಿ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಸಮಾರಂಭಲ್ಲಿ ಪಾಲ್ಗೊಂಡು ಕಾರ್ಯಕ್ರಮ ವೀಕ್ಷಿಸಲು ಭಟ್ಕಳ ತಾಲೂಕಿನ ಹಾಡುವಳ್ಳಿಯ ಹಲ್ಯಾಣಿ ಗ್ರಾಮದ ಟ್ಯಾಕ್ಸಿ ಚಾಲಕ ನಾಗರಾಜ ಗೊಂಡ ಅವರಿಗೆ ಅವಕಾಶ ಲಭಿಸಿದೆ. ರಾಜ್ಯ ಪರಿಶಿಷ್ಟ ಪಂಗಡದ ಪ್ರತಿನಿಧಿಯಾಗಿ ಇವರು ಆಯ್ಕೆಯಾಗಿದ್ದಾರೆ.
ಗಣರಾಜ್ಯೋತ್ಸವ ಸಮಾರಂಭ ವೀಕ್ಷಣೆಗಾಗಿ ಅವಕಾಶ ನೀಡಲು ಮೈಸೂರು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಅರ್ಜಿ ಸಲ್ಲಿಕೆಗೆ ಆಹ್ವಾನಿಸಿತ್ತು. ಇದರಲ್ಲಿ ಪರಿಶಿಷ್ಠ ಪಂಗಡಕ್ಕೆ ಸೇರಿರುವ ಹಾಗೂ ಬುಡಕಟ್ಟು ಸಾಂಸ್ಕೃತಿಕ ಕಲೆಯ ಹಿನ್ನೆಲೆ ಹೊಂದಿರುವ ನಾಗರಾಜ ಗೊಂಡ ಅವರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಒಟ್ಟು ರಾಜ್ಯದಲ್ಲಿ 3,20,013 ಅರ್ಜಿ ಸಲ್ಲಿಕೆಯಾಗಿದ್ದು, ಅದರಲ್ಲಿ ನಾಗರಾಜ ಗೊಂಡ ಹಾಗೂ ಹಾಸನ ಮೂಲದ ಓರ್ವ ಮಹಿಳೆ ಆಯ್ಕೆಗೊಂಡಿದ್ದಾರೆ.
ಮೋದಿ ಗಮನ ಸೆಳೆಯುವಂತೆ ಸಂಸತ್ನಲ್ಲಿ ಸಂಚಲನ ಸೃಷ್ಟಿಸಿದ ಕನ್ನಡತಿ!
ಮೂಲತಃ ಹಾಡುವಳ್ಳಿಯ ಹರ್ಗಿಮಕ್ಕಿ ಮನೆ, ಹಿರೇಬೇಳು, ಹಲ್ಯಾಣಿಯ ನಿವಾಸಿಯಾಗಿರುವ ನಾಗರಾಜ ಗೊಂಡ ಅವರು ಭಟ್ಕಳದಲ್ಲಿ ಟ್ಯಾಕ್ಸಿ ಚಾಲಕರಾಗಿ ತಮ್ಮ ಜೀವನ ಸಾಗಿಸುತ್ತಿದ್ದು, ಕೃಷಿ ಕುಟುಂಬದಿಂದ ಬಂದವರಾಗಿದ್ದಾರೆ. ಗುರುವಾರದಂದು, ಅಂದರೆ ಜ.21ರಂದು ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಒಟ್ಟು 13 ದಿನಗಳ ಕಾಲ ಪ್ರಯಾಣದ ಅವಕಾಶ ಇವರಿಗೆ ಲಭಿಸಿದೆ.
ಫೆ.3ರಂದು ವಾಪಸ್ಸಾಗಲಿದ್ದು, ದೆಹಲಿಯಲ್ಲಿ ತಂಗಲಿರುವ ಇವರು ರಾಷ್ಟ್ರಪತಿ ಭವನ, ಸಂಸತ್ ಭವನ, ಪ್ರಧಾನಮಂತ್ರಿಗಳ ಕಚೇರಿ ಸೇರಿದಂತೆ ದೇಶದ ಪ್ರಮುಖ ಸ್ಥಳಗಳನ್ನು ಭೇಟಿ ಮಾಡುವ ಉತ್ತಮ ಪ್ರಯಾಣದ ಅವಕಾಶ ಪಡೆದುಕೊಂಡಿದ್ದಾರೆ.
Recommended Video
ನಾಗರಾಜ ಗೊಂಡ ಅವರ ಆಯ್ಕೆ ಭಟ್ಕಳ ತಾಲ್ಲೂಕಿಗೆ ಹಾಗೂ ಗೊಂಡ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದ್ದು, ಸಮಾಜದ ಎಲ್ಲಾ ಹಿರಿಯರು, ಮುಖಂಡರು ಬಂಧು-ಬಾಂಧವರು ಹಾಗೂ ವಿಶೇಷವಾಗಿ ಅವರ ಕುಟುಂಬದವರು ಹಾಗೂ ಗೊಂಡ ಯುವ ಪಗ್ರತಿ ಸಂಘ ಸಂತಸ ವ್ಯಕ್ತಪಡಿಸಿದ್ದಾರೆ.