ಗಣರಾಜ್ಯೋತ್ಸವಕ್ಕೆ ಭಯೋತ್ಪಾದನಾ ಕೃತ್ಯದ ಸಂಚು: 9 ಮಂದಿ ಉಗ್ರರಲ್ಲಿ ಭಟ್ಕಳದವನೂ ಭಾಗಿ
ಕಾರವಾರ, ಜನವರಿ 17: ದೇಶದ ರಾಜಧಾನಿ ನವದೆಹಲಿಯಲ್ಲಿ ಜ.26ರ ಗಣರಾಜ್ಯೋತ್ಸವದಂದು ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಒಂಬತ್ತು ಮಂದಿ ಉಗ್ರರು ಸಂಚು ರೂಪಿಸಿದ್ದಾರೆ ಎನ್ನುವ ಮಾಹಿತಿ ದೊರೆತಿದ್ದು, ಇವರ ಪೈಕಿ ಓರ್ವ ಭಟ್ಕಳ ಮೂಲದವನು ಎನ್ನಲಾಗಿದೆ.
ದೆಹಲಿಯ ಪೊಲೀಸರು ಒಂಬತ್ತು ಮಂದಿ ಶಂಕಿತ ಉಗ್ರರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಓರ್ವನನ್ನು ಅಫೀಫ್ ಜಿಲಾನಿ (41) ಎಂದು ಗುರುತಿಸಲಾಗಿದೆ.
ಭಟ್ಕಳದ ಬಂದರು ರಸ್ತೆಯಲ್ಲಿ ಮನೆ
ಭಟ್ಕಳದ ಬಂದರು ರಸ್ತೆಯಲ್ಲಿ ಈತನ ಮನೆ ಇದ್ದು, ಹತ್ತು ವರ್ಷಗಳ ಹಿಂದೆ ಭಟ್ಕಳ ಬಿಟ್ಟು ಹೋಗಿದ್ದ. ಮುಂಬೈ ಮೂಲಕ ಸೌದಿಗೆ ತೆರಳಿದ್ದ ಈತ, ಅಲ್ಲಿ ಉದ್ಯಮಿಯಾಗಿ ಕಾಣಿಸಿಕೊಂಡಿದ್ದ. ಸದ್ಯ ಕುಟುಂಬದವರೊಂದಿಗೆ ಕರಾಚಿಯಲ್ಲಿ ನೆಲೆಸಿದ್ದಾನೆ ಎನ್ನಲಾಗಿದೆ.
ಕರ್ನಾಟಕದ ಐಸಿಸ್ ಬಾಸ್ ಪಾಷಾ ಬಂಧನ: ಯಾರು ಈತ?
ಈ ಹಿಂದೆ ಅಫೀಫ್ ಹಸನ್ ಸಿದ್ದಿಬಾಪ ಎಂದು ಕರೆಯಿಸಿಕೊಳ್ಳುತ್ತಿದ್ದ ಜಿಲಾನಿ, 2011- 12ರಲ್ಲಿ ಉತ್ತರ ವಾಜಿರಿಸ್ತಾನದಲ್ಲಿ ಉಗ್ರ ಚಟುವಟಿಕೆಗಾಗಿ ತರಬೇತಿ ಪಡೆದಿದ್ದ. ನಂತರ ಉಗ್ರ ಸಂಘಟನೆ ಐಸಿಸ್ ಸೇರಲು ಸಿರಿಯಾಕ್ಕೆ ತೆರಳಿದ್ದ ಎನ್ನಲಾಗಿದೆ. ಹೆಚ್ಚಿನ ತರಬೇತಿಗಾಗಿ ಅನ್ಸರ್-ಅಲ್ ತೌಹಿದ್ ನ ಭಾಗವಾಗಿದ್ದ ಈತ, ಕರಾಚಿಗೆ ಸ್ಥಳಾಂತರಗೊಂಡ ನಂತರ ಇತ್ತೀಚಿನ ಕೆಲ ವರ್ಷಗಳಲ್ಲಿ ಇಂಡಿಯನ್ ಮುಜಾಹಿದ್ದೀನ್ ಸೇರಿಕೊಂಡಿದ್ದ.
ಬಂಧನಕ್ಕೆ ಬಲೆ ಹೆಣೆದಿರುವ ಪೊಲೀಸರು
ಭಟ್ಕಳದಲ್ಲಿದ್ದ ಈತನ ತಂದೆ ಕಳೆದ ವರ್ಷ ಅನಾರೋಗ್ಯದಿಂದ ಸಾವನಪ್ಪಿದ್ದಾರೆ. ಈತನಿಗೆ ಕಿರಿಯ ಸಹೋದರ ಇದ್ದಾನೆ. ಬೆಂಗಳೂರು ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಭಟ್ಕಳದ ಅಫಾಕ್ ಲಂಕಾನ ದೂರದ ಸಂಬಂಧಿಯಾಗಿರುವ ಈತನು ಪೋಲಿಸರಿಗೆ ಬೇಕಾಗಿದ್ದವನಾಗಿದ್ದ. ಅಂದಿನಿಂದ ಇಂದಿನವರೆಗೂ ಪೊಲೀಸರು ಈತನ ಬಂಧನಕ್ಕೆ ಬಲೆ ಹೆಣೆದಿದ್ದಾರೆ.
ಆತಂಕದ ವಿಷಯ ಎಂದ ಭಟ್ಕಳ ಶಾಸಕ
'ದೇಶದಲ್ಲಾಗುತ್ತಿರುವ ಒಂದಿಲ್ಲೊಂದು ಭಯೋತ್ಪಾದನೆ ಚಟುವಟಿಕೆಗಳಲ್ಲಿ ಭಟ್ಕಳದ ಹೆಸರು ಕೇಳಿ ಬರುತ್ತಿರುವುದು ದುರದೃಷ್ಟಕರ ಸಂಗತಿ. ಭಯೋತ್ಪಾದನೆ ಎಂಬುದು ಮನುಕುಲಕ್ಕೆ ಮಾರಕವಾಗಿ ಕಾಡುತ್ತಿರುವ ಇಂತಹ ಸಂದರ್ಭದಲ್ಲಿ ಮಲ್ಲಿಗೆ ನಗರಿ ಭಟ್ಕಳದಲ್ಲಿ ದೇಶದ್ರೋಹಿಗಳು ತಯಾರಾಗುತ್ತಿದ್ದಾರೆ ಎಂಬ ಮಾಹಿತಿಗಳು ನಮ್ಮ ಕ್ಷೇತ್ರಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸುತ್ತಿದ್ದು, ಕ್ಷೇತ್ರದ ಜನರಲ್ಲಿ ಆತಂಕ ಸೃಷ್ಟಿಸಿದೆ' ಎಂದು ಭಟ್ಕಳ ಶಾಸಕ ಸುನೀಲ್ ನಾಯ್ಕ ಹೇಳಿದ್ದಾರೆ.
ಬೆಂಗಳೂರಲ್ಲಿ ಪಂಜಾಬ್ ಪೊಲೀಸರ ಕೈಗೆ ಸಿಕ್ಕ ಖಲಿಸ್ತಾನದ ಉಗ್ರ ಓರ್ವ ಟೆಕ್ಕಿ
ಭಯೋತ್ಪಾದನಾ ನಿಗ್ರಹ ದಳ ನಿಯೋಜಿಸಲು ಆಗ್ರಹ
'ಮುಂದಿನ ದಿನಗಳಲ್ಲಿ ಇಂತಹ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸುವ ಮತ್ತು ಕ್ಷೇತ್ರದ ಜನರ ಸುರಕ್ಷತೆಯ ನಿಟ್ಟಿನಲ್ಲಿ ಕೇಂದ್ರದ ಭಯೋತ್ಪಾದನಾ ನಿಗ್ರಹ ದಳವನ್ನು ಭಟ್ಕಳದಲ್ಲಿ ನಿಯೋಜಿಸಬೇಕೆಂಬ ಒತ್ತಾಯ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಿದ್ದೇವೆ' ಎಂದೂ ಅವರು ತಿಳಿಸಿದ್ದಾರೆ.