ಜಗದ ಗಮನ ಸೆಳೆದ ಮುರ್ಡೇಶ್ವರದ ವಿದ್ಯುದಲಂಕಾರ!
ಕಾರವಾರ, ಜೂನ್ 18: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುರ್ಡೇಶ್ವರದ ಶಿವನ ಮೂರ್ತಿಗೆ ಮಾಡಲಾದ ಎಲ್ಇಡಿ ವಿದ್ಯುದಲಂಕಾರಕ್ಕೆ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ದೊರೆತಿದೆ.
ಅಮೆರಿಕಾದ ಇ- ಗ್ಲೋಬಲ್ ಫಿಲಿಪ್ಸ್ ಆಯೋಜಿಸಿದ್ದ ಸರ್ಟಿಫೈಡ್ ಸಿಸ್ಟಮ್ ಇಂಟಿಗ್ರೇಟರ್ ಸಮಿಟ್ನಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಈ ಸ್ಪರ್ಧೆಯಲ್ಲಿ ಜಗತ್ತಿನ 24 ಪ್ರಾಜೆಕ್ಟ್ ಗಳಿಗೆ ಒಟ್ಟು 6,871 ಮತಗಳು ಚಲಾವಣೆಯಾಗಿದ್ದವು. ಅದರಲ್ಲಿ ಮುರ್ಡೇಶ್ವರದ ವಿದ್ಯುದಲಂಕಾರಕ್ಕೆ 2500 ಮತಗಳು ಬಿದ್ದಿದ್ದವು. ಹೀಗಾಗಿ ಈ ವಿದ್ಯುದಲಂಕಾರ ಮಾಡಿದ ಬೆಂಗಳೂರಿನ ಸಂಚನಾ ಗುರು ಡಿಸ್ಟ್ರಿಬ್ಯೂಟರ್ಸ್ಗೆ ಈ ವರ್ಷದ ಪ್ರಶಸ್ತಿ ಘೋಷಿಸಲಾಗಿದೆ.
ಅರಬ್ಬಿ ಸಮುದ್ರದ ದಡದಲ್ಲಿ ಸ್ಥಾಪಿತವಾಗಿರುವ ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆಯು 123 ಅಡಿ (37 ಮೀ.) ಎತ್ತರವಿದೆ. ಇದು ವಿಶ್ವದ ಎರಡನೇ ಅತಿ ಎತ್ತರದ ಶಿವನ ಪ್ರತಿಮೆಯಾಗಿದೆ. ಇಲ್ಲಿನ ವಾಸ್ತುಶಿಲ್ಪ, ಧಾರ್ಮಿಕ ಮಹತ್ವ, ಇತಿಹಾಸದಿಂದಾಗಿ ಈ ದೇವಾಲಯವು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಶಿವನ ಪ್ರತಿಮೆಯ ಸೌಂದರ್ಯ ಮತ್ತು ಸೊಬಗನ್ನು ಇನ್ನಷ್ಟು ಹೆಚ್ಚಿಸಲು ಬೆಳಕಿನ ವಿನ್ಯಾಸ ಮಾಡಿಸುವುದು ಮುರುಡೇಶ್ವರ ದೇಗುಲದ ಟ್ರಸ್ಟ್ಗೆ ಅವಶ್ಯಕತೆಯಾಗಿತ್ತು. ಹೆಚ್ಚಿನ ಕಾರ್ಯಕ್ಷಮತೆಯ, ಕ್ರಿಯಾತ್ಮಕವಾಗಿ ಶಿವನ ಪ್ರತಿಮೆಯನ್ನು ಹೈಲೈಟ್ ಮಾಡುವ ಹಾಗೂ ವಾಸ್ತುಶಿಲ್ಪ ಮತ್ತು ಗೋಚರಿಸುವಿಕೆಯ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದ ಎಲ್ಇಡಿ ಬೆಳಕಿನ ವ್ಯವಸ್ಥೆಯು ಅಗತ್ಯವಾಗಿತ್ತು.
Recommended Video
ಅದರಂತೆ 2020ರ ಸೆಪ್ಟೆಂಬರ್ನಲ್ಲಿ ಸಂಚನಾ ಗುರು ಡಿಸ್ಟ್ರಿಬ್ಯೂಟರ್ಸ್ ಮೂಲಕ ನವೀನ್ ಮೇಸ್ತಾ ಎನ್ನುವವರು ಈ ಲೈಟಿಂಗ್ ಡಿಸೈನ್ ಮಾಡಿದ್ದರು. ಈ ವಿದ್ಯುದಲಂಕಾರದಿಂದಾಗಿ ರಾತ್ರಿಯ ವೇಳೆ ಮೂರ್ತಿಯು ಅಚ್ಚಾಗಿ ನೀಲಿ ಬೆಳಕಿನಲ್ಲಿ ಗೋಚರಿಸುತ್ತದೆ. ಇದು ಪ್ರವಾಸಿಗರ ಪ್ರಮುಖ ಕೇಂದ್ರಬಿಂದುವೂ ಆಗಿದೆ.