ಲಿಂಗಾಯತರಿಗೆ 2ಎ ಮೀಸಲಿಗೆ ವಿರೋಧ: ಭಟ್ಕಳದಲ್ಲಿ ಬೃಹತ್ ಪ್ರತಿಭಟನೆ
ಭಟ್ಕಳ, ಫೆಬ್ರವರಿ 22: ಪಂಚಮಸಾಲಿ ಲಿಂಗಾಯತರನ್ನು ಹಿಂದುಳಿದ ವರ್ಗಗಳ 2ಎಗೆ ಸೇರಿಸದಂತೆ ಒತ್ತಾಯಿಸಿ ಹಿಂದುಳಿದ ವರ್ಗಗಳ 2ಎ ಹಿತರಕ್ಷಣಾ ವೇದಿಕೆ ಭಟ್ಕಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಮಾವೇಶ ಆಯೋಜನೆ ಮಾಡಿದೆ. ಸೋಮವಾರ ಮಧ್ಯಾಹ್ನ 2ಕ್ಕೆ ಮೆರವಣಿಗೆ ಆರಂಭಗೊಳ್ಳಲಿದೆ.
ಧರ್ಮಸ್ಥಳ ಉಜಿರೆಯ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಆಯೋಜನೆಗೊಂಡಿರುವ ಈ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಮಾವೇಶಕ್ಕೆ ಭಟ್ಕಳ ತಾಲ್ಲೂಕಿನಾದ್ಯಂತ ವ್ಯಾಪಕ ಬೆಂಬಲ ದೊರೆತಿದೆ. 2ಎ ಮೀಸಲಾತಿ ಪಟ್ಟಿಯಲ್ಲಿರುವ ಜಿಲ್ಲಾ ವ್ಯಾಪ್ತಿಯ 20 ವಿವಿಧ ಸಣ್ಣಪುಟ್ಟ ಸಮಾಜಗಳು ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದೆ.
ಮೀಸಲಾತಿ ಬೇಡಿಕೆ; ಬೆಂಗಳೂರಲ್ಲಿ ಲಿಂಗಾಯತರ ಬೃಹತ್ ಹೋರಾಟ
ಹೋರಾಟವನ್ನು ಯಶಸ್ವಿಗೊಳಿಸಲು ಎಲ್ಲ ಸಿದ್ಧತೆಯನ್ನು ನಡೆಸಲಾಗಿದ್ದು, ಭಟ್ಕಳ ಪೊಲೀಸ್ ಮೈದಾನದಲ್ಲಿ ಸಮಾವೇಶಕ್ಕೆ ವೇದಿಕೆ ಸಿದ್ಧಗೊಂಡಿದೆ. ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕರ್ತರ ತಂಡ ವಿವಿಧ ಹಂತಗಳಲ್ಲಿ ಸಭೆ ನಡೆಸಿ ಜನಜಾಗೃತಿ ಮೂಡಿಸಿದ್ದು, ಭಾನುವಾರ ಮಳೆಯಲ್ಲೂ ಬೈಕ್ ಜಾಥಾ ನಡೆಸುವ ಮೂಲಕ ಪ್ರತಿಭಟನೆಗೆ ಎಲ್ಲರನ್ನೂ ಆಹ್ವಾನಿಸಿದ್ದಾರೆ.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ; 500 ಕೋಟಿ ಅನುದಾನ
ಮೊದಲು ಮೆರವಣಿಗೆ
ಸೋಮವಾರ ಮಧ್ಯಾಹ್ನ 2 ಗಂಟೆಗೆ ಭಟ್ಕಳದ ಪುರವರ್ಗ ಕಾಸ್ಮುಡಿ ಕಟ್ಟೆಯಿಂದ ಪ್ರತಿಭಟನಾ ಮೆರವಣಿಗೆ ವಿದ್ಯುಕ್ತವಾಗಿ ಆರಂಭಗೊಳ್ಳಲಿದ್ದು, ಚೌಥನಿ ಮಾರ್ಗವಾಗಿ ಹೂವಿನ ಮಾರುಕಟ್ಟೆ, ಮುಖ್ಯರಸ್ತೆಯ ಮೂಲಕ ಹಾದು ಶಂಸುದ್ದೀನ್ ವೃತ್ತದ ಮೂಲಕ ಪೊಲೀಸ್ ಮೈದಾನದಲ್ಲಿ ಪ್ರತಿಭಟನಾಕಾರರು ಸಮಾವೇಶಗೊಳ್ಳಲಿದ್ದಾರೆ.
ಯಾರು-ಯಾರು ಭಾಗಿ?
ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಭಟ್ಕಳ ಶಾಸಕ ಸುನಿಲ್ ನಾಯ್ಕ, ಕುಮಟಾ ಶಾಸಕ ದಿನಕರ ಶೆಟ್ಟಿ, ಕಾರವಾರ ಶಾಸಕಿ ರೂಪಾಲಿ ನಾಯ್ಕ, ಮೂಡಬಿದ್ರೆ ಶಾಸಕ ಉಮಾಕಾಂತ ಕೊಟ್ಯಾನ, ಕಾರ್ಕಳ ಶಾಸಕ ಸುನೀಲಕುಮಾರ, ರಾಜ್ಯ ಆರ್ಯ ಈಡಿಗ ಸಂಘದ ಬೆಂಗಳೂರು ಅಧ್ಯಕ್ಷ ತಿಮ್ಮೇಗೌಡ, ಜೆ.ಪಿ.ಟ್ರಸ್ಟ್ ಅಧ್ಯಕ್ಷ ಜೆ.ಪಿ.ಸುಧಾಕರ, ಬಿಲ್ಲವ ಮಹಾಮಂಡಲದ ರಾಜ್ಯಾಧ್ಯಕ್ಷ ರಾಜಶೇಖರ ಕೋಟ್ಯಾನ, ಕರ್ನಾಟಕ ಪ್ರದೇಶ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಶ್ರೀನಿವಾಸ ಬಾಬು, ಕೆಪಿಎಸ್ಸಿ ಮಾಜಿ ಸದಸ್ಯ ಡಾ.ಲಕ್ಷ್ಮೀನಾರಾಯಣ, ಶಾಸಕ ಕುಮಾರ ಬಂಗಾರಪ್ಪ, ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ ಹಾಗೂ ಮುಖ್ಯ ಉಪನ್ಯಾಸಕ ನಿವೃತ್ತ ಪ್ರಾಧ್ಯಾಪಕ ಡಾ.ಶ್ರೀಪಾದ ಶೆಟ್ಟಿ ಹಾಗೂ 2ಎ ಅಡಿಯಲ್ಲಿ ಬರುವ ವಿವಿಧ ಜಾತಿಯ ಮುಖಂಡರು ವೇದಿಕೆಯಲ್ಲಿ ಇರಲಿದ್ದಾರೆ.
ಪ್ರತಿಭಟನೆ ವೇಳೆ ಭಟ್ಕಳ ಬಂದ್
ಪ್ರತಿಭಟನೆ ನಡೆಯುವ ಹೊತ್ತಿಗೆ ಅಂದರೆ ಮಧ್ಯಾಹ್ನ 2ಎ ಅಡಿಯಲ್ಲಿ ಬರುವ ಎಲ್ಲಾ ಜಾತಿಯವರು ತಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಲಿದ್ದು, ಎಲ್ಲರೂ ಸಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿಭಟನೆಯ ಬಳಿಕ ಭಟ್ಕಳ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಿದ್ದಾರೆ.
ಹೋರಾಟ ಯಾರ ವಿರುದ್ಧವೂ ಅಲ್ಲ
"ನಮ್ಮ ಹೋರಾಟ ಯಾವ ಜಾತಿ ಅಥವಾ ಧರ್ಮದ ವಿರುದ್ಧವಲ್ಲ. ಯಾವ ರಾಜಕೀಯ ಪಕ್ಷದ, ಸರಕಾರದ ವಿರುದ್ಧವೂ ಅಲ್ಲ. ನಮ್ಮ ಜನಾಂಗದ ಹಕ್ಕನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟ ಇದು. ಅತ್ಯಂತ ದುರ್ಬಲ ವರ್ಗಕ್ಕೆ, ಸಣ್ಣಪುಟ್ಟ ಜಾತಿ ಜನಾಂಗ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ವರ್ಗಗಳ ಸಾಲಿನಲ್ಲಿ ಬಲಾಡ್ಯ ಸಮಾಜದ ಪ್ರವೇಶ ಬಿರುಗಾಳಿ ಎಬ್ಬಿಸಲಿದೆ. ಈ ಸುನಾಮಿಯಿಂದ ಸಣ್ಣಪುಟ್ಟ ಸಮಾಜಗಳು ಸಾಂವಿಧಾನಿಕ ಹಕ್ಕಿನಲ್ಲಿ ಅನ್ಯಾಯ ಹಾಗೂ ತುಳಿತಕ್ಕೊಳಗಾಗುವುದರಲ್ಲಿ ಯಾವುದೇ ಸಂಶಯವಿಲ್ಲ" ಎಂದು ಜೆ.ಡಿ.ನಾಯ್ಕ ತಿಳಿಸಿದ್ದಾರೆ.
Recommended Video