ಭಟ್ಕಳ; ಶಾಲೆಯ ಬಾಡಿಗೆ ಬಾಕಿ, ಬಿಇಒ ಕಚೇರಿ ಜಪ್ತಿ
ಕಾರವಾರ, ಅಕ್ಟೋಬರ್ 28; ಭಟ್ಕಳದ ಮುಗ್ದುಮ್ ಕಾಲೋನಿಯ ಜಮಾತುಲ್ ಮುಸ್ಲಿಮಿನ್ನ ಕಟ್ಟಡದಲ್ಲಿನ ಸರ್ಕಾರಿ ಉರ್ದು ಪ್ರಾರ್ಥಮಿಕ ಶಾಲೆಯ ಬಾಡಿಗೆ 20 ವರ್ಷದಿಂದ ಬಾಕಿ ಉಳಿಸಿಕೊಂಡಿರುವುದರಿಂದ, ನ್ಯಾಯಾಲಯದ ಆದೇಶದಂತೆ ಭಟ್ಕಳದ ಬಿಇಒ ಕಚೇರಿಯ ಉಪಕರಣಗಳನ್ನು ನ್ಯಾಯಾಲಯದ ಸಿಬ್ಬಂದಿ ಗುರುವಾರ ಜಪ್ತಿ ಮಾಡಿದ್ದಾರೆ.
ಮುಗ್ದುಮ್ ಕಾಲೋನಿಯಲ್ಲಿರುವ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯು 40 ವರ್ಷದಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಈ ಕಟ್ಟಡವು ಜಮಾತೆ ಮುಸ್ಲೀಮಿನ್ಗೆ ಸೇರಿದೆ. ಸುಮಾರು 20 ವರ್ಷದಿಂದ ಶಿಕ್ಷಣಾಧಿಕಾರಿ ಕಚೇರಿಯಿಂದ ಕಟ್ಟಡದ ಬಾಡಿಗೆ (ಸುಮಾರು 1.49 ಲಕ್ಷ) ಕಟ್ಟದ ಕಾರಣ ಜಮಾತೆ ಮುಸ್ಲೀಮಿನ್ ಕಾರ್ಯದರ್ಶಿ 2005ರಲ್ಲಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಅದರಂತೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಬಿಇಓ ಕಛೇರಿಯಲ್ಲಿನ ಉಪಕರಣಗಳನ್ನು ಜಪ್ತಿ ಮಾಡುವಂತೆ ಸೆಪ್ಟೆಂಬರ್ 14ರಂದು ಆದೇಶ ಹೊರಡಿಸಿತ್ತು. ಅದರಂತೆ ಗುರುವಾರದಂದು ತಾಲೂಕಿನ ಜೆಎಮ್ಎಫ್ಸಿ ನ್ಯಾಯಾಲಯದ ಬಿಲಿಫ್ ಗಣಪತಿ, ಬಿಇಓ ಕಛೇರಿಗೆ ಬಂದು ನ್ಯಾಯಲಯದ ವಾರಂಟ್ ಹೊರಡಿಸಿ ಜಪ್ತಿ ನಿಯಮ ಜಾರಿಗೆ ಮಾಡಿ ವಸ್ತುಗಳನ್ನು ಜಪ್ತಿ ಮಾಡಿಕೊಂಡರು. 9 ಕಂಪ್ಯೂಟರ್, 66 ಫೈಬರ್ ಚೇರ್, 26 ಕುರ್ಚಿ, 26 ಟೇಬಲ್, ಒಂದು ವಾಹನ ಹಾಗೂ 2 ಮೆಟಲ್ ಟೇಬಲ್ ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಕಾಲಾವಕಾಶ ಕೇಳಿದ ಶಿಕ್ಷಣಾಧಿಕಾರಿ; ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಮುಗ್ದುಮ್ ಕಾಲೋನಿಯ ಜಮಾತುಲ್ ಮುಸ್ಲಿಮಿನ್ ಅಧ್ಯಕ್ಷ, ಕಾರ್ಯದರ್ಶಿ, ಸದಸ್ಯರು ಕೂಡ ಜಪ್ತಿಯ ವೇಳೆ ಬಿಇಒ ಕಚೇರಿಗೆ ಬಂದಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಈ ವೇಳೆ ಅವರ ಬಳಿ ಒಂದು ತಿಂಗಳ ಕಾಲಾವಕಾಶ ಕೇಳಿದರು.
ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ನಾವು ನಡೆದುಕೊಳ್ಳಲು ಸಾಧ್ಯವಿಲ್ಲ. ಜಪ್ತಿಯ ಆದೇಶದಂತೆ ನಮಗೆ ಸಿಗಬೇಕಾದ ಹಣ ನೀಡಬೇಕು. ಇದಕ್ಕೆ ನ್ಯಾಯಾಲಯದ ಆದೇಶದಂತೆ ಮುಂದುವರೆಯಲಿ ಎಂದು ಜಮಾತುಲ್ ಮುಸ್ಲಿಮಿನ್ ಅಧ್ಯಕ್ಷ ಸಾದಿಕ್ ಮಟ್ಟಾ ತಿಳಿಸಿದರು.
ಇದು ಸರಕಾರಿ ಕಚೇರಿ ಜೊತೆಗೆ ಸಾರ್ವಜನಿಕರ ಆಸ್ತಿ ಆಗಿದ್ದು, ಇದರಲ್ಲಿ ನ್ಯಾಯಾಲಯದಿಂದ ಲಗತ್ತು ಆದೇಶ ತರಬೇಕಾಗಿತ್ತಾ? ಎಂದು ಶಿಕ್ಷಣಾಧಿಕಾರಿ ಪ್ರಶ್ನಿಸಿದಕ್ಕೆ, ಸತತ 8 ದಿನದಿಂದ ಕಚೇರಿಗೆ ಬರುತ್ತಿದ್ದೇವೆ. ಹಣ ನೀಡುವ ಬಗ್ಗೆ ದಿನವನ್ನು ಮುಂದುಡುತ್ತಿದ್ದಾರೆ ಹೊರತು ಹಣ ಪಾವತಿಯಾಗಿಲ್ಲ. ಇದಕ್ಕೆ ಯಾರು ಹೊಣೆ?, ಇದರಲ್ಲಿ ಜಮಾತುಲ್ ಮುಸ್ಲಿಮಿನ್ ಎಲ್ಲಾ ಪದಾಧಿಕಾರಿಗಳಿಂದ ನೀವು ಕೇಳಿದ ಕಾಲಾವಕಾಶ ಅವಧಿಯ ಬಗ್ಗೆ ಚರ್ಚಿಸಿ ತಿಳಿಸಬೇಕಾಗುತ್ತದೆ. ತಕ್ಷಣಕ್ಕೆ ನ್ಯಾಯಾಲಯದ ಆದೇಶ ಪಾಲನೆ ಆಗಬೇಕು ಎಂದು ಅಧ್ಯಕ್ಷ ಮಟ್ಟಾ ಸಾದಿಕ್ ಹೇಳಿದರು.
ಅಂತ್ಯದಲ್ಲಿ ಶಿಕ್ಷಣಾಧಿಕಾರಿ, ಇದರಲ್ಲಿ ನಮ್ಮ ಮೇಲಾಧಿಕಾರಿಗಳ ಸೂಚನೆಯಂತೆ ನಾನು ನಡೆದುಕೊಳ್ಳಬೇಕಿದೆ. ಅವರು ಒಂದು ತಿಂಗಳ ಅವಧಿಯಲ್ಲಿ ಹಣ ಪಾವತಿ ಮಾಡುವುದಾಗಿ ಹೇಳಿದ್ದು, ಇದಕ್ಕೆ ಜಮಾತುಲ್ ಮುಸ್ಲಿಮಿನ್ ಅವಕಾಶ ನೀಡಬೇಕೆಂದು ಅಸಹಾಯಕತೆ ವ್ಯಕ್ತಪಡಿಸಿದರು.
Recommended Video
ಕಚೇರಿಯ ಸಿಬ್ಬಂದಿಗೆ ಶಾಕ್; ಗುರುವಾರದಂದು ಬೆಳಗ್ಗೆ ನ್ಯಾಯಾಲಯದ ಬೆಲಿಫ್ ಗಣಪತಿ ಕಚೇರಿಗೆ ಆಗಮಿಸಿ ನ್ಯಾಯಾಲಯದ ಆದೇಶ ತಿಳಿಸಿದಾಗ ಬಿಇಒ ಕಚೇರಿಯ ಸಿಬ್ಬಂದಿ ಆಶ್ಚರ್ಯಗೊಂಡರು. ಕಚೇರಿ ಕೆಲಸದ ನಡುವೆಯೇ ಕಂಪ್ಯೂಟರ್ ಸಹಿತ ಉಪಕರಣ, ಕುರ್ಚಿ- ಟೇಬಲ್ಗಳನ್ನು ಅಧಿಕಾರಿಗಳು, ಸಿಬ್ಬಂದಿ ಮುಂದೆಯೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬರುವಿಕೆಯವರೆಗೂ ಕಾದು ನಂತರ ಜಪ್ತಿ ಪ್ರಕ್ರಿಯೆಯನ್ನು ನಡೆಸಲಾಯಿತು. ಈ ವೇಳೆ ಕೂರಲು ಕೂಡ ಒಂದು ಕುರ್ಚಿ ಇಲ್ಲದೇ ಸಿಬ್ಬಂದಿ ಮುಖ ಮುಖ ನೋಡಿಕೊಂಡರು.